ಜೀವನದಲ್ಲಿ ಜಿಗುಪ್ಸೆ, ಸಾಫ್ಟ್ ವೇರ್ ಉದ್ಯೋಗಿ ಆತ್ಮಹತ್ಯೆ
ಬೆಂಗಳೂರು,ಮೇ 06: ಜೀವನದಲ್ಲಿ ಜಿಗುಪ್ಸೆ ಹೊಂದಿ, ಮಾನಸಿಕ ಖಿನ್ನತೆಗೆ ಒಳಗಾಗಿ ಆಂಧ್ರಪ್ರದೇಶ ಮೂಲದ ಸಾಫ್ಟ್ವೇರ್ ಇಂಜಿಯರ್ರೊಬ್ಬರು ನೇಣಿಗೆ ಶರಣಾಗಿರುವ ದುರ್ಘಟನೆ ಎಚ್ ಎಸ್ಆರ್ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇತ್ತೀಚೆಗೆ ಮಾರತ್ ಹಳ್ಳಿ ಬಳಿಯ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 28 ವರ್ಷ ವಯಸ್ಸಿನ ಮಹಿಳಾ ಟೆಕ್ಕಿಯೊಬ್ಬರು ಇದೇ ರೀತಿ ಮಾನಸಿಕ ಖಿನ್ನತೆ ಕಾರಣಕ್ಕೆ ಸಾವನ್ನಪ್ಪಿದ ಘಟನೆ ನಡೆದಿತ್ತು. ವಸತಿ ಸಮುಚ್ಚಯದ 9ನೇ ಮಹಡಿಯಿಂದ ಅಹರಿ ಆಕೆ ಪ್ರಾಣ ಬಿಟ್ಟಿದ್ದರು.
ಈಗ ಚೆರಿಯರ್ ಫ್ರಾಸ್ ಎಂಬ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ 29 ವರ್ಷ ವಯಸ್ಸಿನ ವಂಶಿ ಗೌತಮ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೇ 3ರಂದೇ ವಂಶಿ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಕಂಡು ಬಂದಿದೆ. ಮೂರು ದಿನಗಳಿಂದ ಮನೆ ಬಾಗಿಲು ತೆಗೆದಿರಲಿಲ್ಲ.
ಮನೆಯಿಂದ ಶವ ಕೊಳತೆ ವಾಸನೆ ಬಂದ ಕಾರಣ ದಾರಿಹೋಕರೊಬ್ಬರು ಈ ವಿಷಯವನ್ನು ಪೊಲೀಸರಿಗೆ ಮುಟ್ಟಿಸಿದ್ದಾರೆ, ಎಚ್ ಎಸ್ ಆರ್ ಲೇಔಟ್ ನ 6ನೇ ಹಂತದಲ್ಲಿ ಕಳೆದ ಎರಡೂವರೆ ವರ್ಷಗಳಿಂದ ವಾಸಿಸುತ್ತಿದ್ದ ವಂಶಿ ಅವರು ಸೂಸೈಡ್ ನೋಟ್ ಬರೆದಿದ್ದಾರೆ, ಅದರಲ್ಲಿ ವೈಯಕ್ತಿಕ ಕಾರಣಗಳಿಗಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ, ಮಾನಸಿಕವಾಗಿ ಕುಗ್ಗಿದ್ದೇನೆ ಎಂದಿದ್ದಾರೆ. ಎಚ್ಎಸ್ಆರ್ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸಿದ್ದಾರೆ ಎಂದು ಡಿಸಿಪಿ ಡಾ.ಬೋರಲಿಂಗಯ್ಯ ಅವರು ತಿಳಿಸಿದರು.