ಟೆಕ್ಕಿ ವಿನೀತ್ ವರ್ಧನ್ ಅಪಹರಣ ಸುಖಾಂತ್ಯಗೊಳಿಸಿದ ಫಾಸ್ಟ್ ಟ್ಯಾಗ್ ಮೆಸೇಜ್!
ಬೆಂಗಳೂರು, ಸೆ. 23: ಎರಡು ಕೋಟಿ ಹಣಕ್ಕಾಗಿ ಸಾಫ್ಟ್ವೇರ್ ಇಂಜಿನಿಯರ್ನನ್ನು ಅಪಹರಿಸಿದ್ದ ಅಪಹರಣಕಾರರನ್ನು ಕೋರಮಂಗಲ ಪೊಲೀಸರು ಸಿನಿಮಾ ರೀತಿಯಲ್ಲಿ ಬಂಧಿಸಿದ್ದಾರೆ. ಅಪಹರಣಕಾರರು ಬಳಕೆ ಮಾಡಿದ್ದ ಕಾರಿನ ಫಾಸ್ಟ್ ಟ್ಯಾಗ್ ಮೆಸೇಜ್ ಜಾಡು ಹಿಡಿದು ತಮಿಳುನಾಡಿನಲ್ಲಿ ತಂಗಿದ್ದ ಕಿಡ್ನಾಪರ್ಸ್ ಹೋಟೆಲ್ ಸುತ್ತುವರೆದು ಅಪಹರಣಕ್ಕೆ ಒಳಗಾಗಿದ್ದ ಟೆಕ್ಕಿಯನ್ನು ರಕ್ಷಿಸಿದ್ದಾರೆ.
ಆತನ ಹೆಸರು ವಿನೀತ್ ವರ್ಧನ್. ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ. ಇತ್ತೀಚೆಗೆ ತನ್ನದೇ ಸ್ವಂತ ಕಂಪನಿಯನ್ನು ಹುಟ್ಟು ಹಾಕಿದ್ದ. ಕೆಲಸದ ಸಂಬಂಧ ಪ್ರತಿಷ್ಠಿತ ಕಂಪನಿ ಜತೆ ಪರಸ್ಪರ ಒಡಂಬಡಿಕೆ ಮಾಡಿಕೊಂಡಿದ್ದ. ಸೆ. 25 ರಂದು ವಿನೀತ್ ವರ್ಧನ್ ಬ್ಯಾಂಕ್ ಖಾತೆಗೆ ಕೋಟ್ಯಂತರ ರೂಪಾಯಿ ಹಣ ಬಂದು ಬೀಳುವುದು ಬಾಕಿ ಇತ್ತು.
ಅಪಹರಣ: ಎಣ್ಣೆ ಮಾರ್ಟಿ ಮಾಡುವ ನೆಪದದಲ್ಲಿ ಕೋರಮಂಗಲದಲ್ಲಿರುವ ವಿನೀತ್ ವರ್ಧನ್ ಮನೆಗೆ ಸ್ನೇಹಿತ ಪ್ರಶಾಂತ್ ಮತ್ತು ಸಂತೋಷ್ ಆಗಮಿಸಿದ್ದರು. ಪಾರ್ಟಿ ಮಾಡುವ ನೆಪ ಇಟ್ಟುಕೊಂಡು ಕಾರಿನಲ್ಲಿ ಬಂದಿದ್ದ ಸ್ನೇಹಿತರಿಬ್ಬರು ವಿನೀತ್ ವರ್ಧನ್ ಮನೆಗೆ ಭೇಟಿ ನೀಡಿದ್ದರು. ಮೊದಲಿನಿಂದಲೂ ಸ್ನೇಹಿತರ ಜತೆ ಸೇರಿ ಪಾರ್ಟಿ ಮಾಡುತ್ತಿದ್ದ ವಿನೀತ್ ವರ್ಧನ್ಗೆ ಯಾವುದೇ ಅನುಮಾನ ಬಂದಿರಲಿಲ್ಲ. ಎಲೆಕ್ಟ್ರಾನಿಕ್ ಸಿಟಿ ಟೋಲ್ ದಾಟಿ ಕರೆದು ಕೊಂಡು ಹೋದಾಗ ವಿನೀತ್ ವರ್ಧನ್ಗೆ ಅನುಮಾನ ಬಂದಿತ್ತು. ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಾ ಎಂದು ಕೇಳಿದ್ದಕ್ಕೆ ಬಾಯಿಗೆ ಬಟ್ಟೆ ತುರಿಕಿ ಕಣ್ಣಿಗೆ ಬಟ್ಟೆ ಕಟ್ಟಿ ತಮಿಳುನಾಡಿನ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದರು.
ಸ್ನೇಹಿತರ ಜತೆ ಪಾರ್ಟಿಗೆ ಎಂದು ಹೋದ ವಿನೀತ್ ಎರಡು ದಿನವಾದರೂ ಮನೆಗೆ ಬಂದಿರಲಿಲ್ಲ. ಅನುಮಾನಗೊಂಡ ಮನೆಯವರು ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಾಗುತ್ತಿದ್ದಂತೆ ವಿನೀತ್ ಅವರ ಸಂಬಂಧಿಕರಿಗೆ ಕರೆ ಮಾಡಿ " ನಿಮ್ಮ ವಿನೀತ್ ಅಪಹರಣವಾಗಿದ್ದಾನೆ. ಎರಡು ಕೋಟಿ ರೂ. ಹಣ ಕೊಟ್ಟರೆ ಬಿಡುವುದಾಗಿ ಬೆದರಿಕೆ ಹಾಕಿದ್ದರು. ಕುಟುಂಬಸ್ಥರಿಗೆ ವಾಟ್ಸಪ್ ಕಾಲ್ ಮಾಡಿ ಬೆದರಿಕೆ ಹಾಕಿದ್ದರು.
ಟೆಕ್ಕಿ ವಿನೀತ್ನನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅದರ ಆಧಾರದ ಮೇಲೆ ಕಾರು ಮಾಲೀಕನನ್ನು ಪತ್ತೆ ಮಾಡಿ ಪೊಲೀಸರು ವಿಚಾರಣೆಗೆಂದು ಠಾಣೆಗೆ ಕರೆಸಿದ್ದರು. ಪರಿಚಿತ ಪ್ರಶಾಂತ್ ಫೋರ್ಡ್ ಕಾರನ್ನು ಕೆಲಸದ ನಿಮಿತ್ತ ತೆಗೆದುಕೊಂಡ ಹೋಗಿದ್ದಾಗಿ ಕಾರು ಮಾಲೀಕ ತಿಳಿಸಿದ್ದಾನೆ. ಹೊಸೂರು ಹಾಗೂ ಎಲೆಕ್ಟ್ರಾನಿಕ್ ಸಿಟಿ ಟೋಲ್ ದಾಟಿದ ಕಾರು ಟೋಲ್ ಶುಲ್ಕ ಪಾವತಿಯ ಫಾಸ್ಟ್ ಟ್ಯಾಗ್ ಹಣ ಕಡಿತಗೊಂಡಿರುವ ಸಂದೇಶ ಕಾರು ಮಾಲೀಕನಿಗೆ ಬಂದಿದೆ. ಈ ಮೂಲಕ ಆರೋಪಿಗಳು ತಮಿಳುನಾಡು ಕಡೆಗೆ ಹೋಗಿರುವ ಸುಳಿವು ಪಡೆದುಕೊಂಡು ಕಾರ್ಯಾಚರಣೆಗೆ ಇಳಿದಿದ್ದಾರೆ.
ವಿನೀತ್ನನ್ನು ಅಪಹರಿಸಲು ಫೋರ್ಡ್ ಕಾರು ಬಳಿಸಿದ್ದ ಅಪಹರಣಕಾರರು ವಿನೀತ್ ಕುಟುಂಬಸ್ಥರಿಗೆ ಕರೆ ಮಾಡಿ ಇನ್ನೊಂದು ದಿನದಲ್ಲಿ ಹಣ ಕೊಡದಿದ್ದರೆ, ನಾವು ಸಾಯ್ತೀವಿ, ಅವನನ್ನು ಸಾಯಿಸ್ತೀವಿ ಎಂದು ಬೆದರಿಕೆ ಹಾಕಿದ್ದರು. ಹಣ ಕೊಡುವುದಾಗಿ ಪೋಷಕರಿಂದಲೇ ಕರೆ ಮಾಡಿಸಿದದ ಪೊಲೀಸರು ಕಿಡ್ನಾಪರ್ಸ್ ಬಂಧನಕ್ಕೆ ಪ್ಲಾನ್ ರೂಪಿಸಿದ್ದರು. ಆರೋಪಿಗಳು ಇರುವ ಹೋಟೆಲ್ನ ಜಾಡು ಹಿಡಿದು ಹೋಟೆಲ್ ಸುತ್ತು ವರೆದಿದ್ದಾರೆ. ಆ ಬಳಿಕ ಪ್ರಶಾಂತ್ ಮತ್ತು ಸಂತೋಷ್ನನ್ನು ಬಂಧಿಸಿದ್ದು, ಅವರ ವಶದಲ್ಲಿದ್ದ ವಿನೀತ್ನನ್ನು ರಕ್ಷಣೆ ಮಾಡಿದ್ದಾರೆ. ಪ್ರಶಾಂತ್ ಮತ್ತು ಸಂತೋಷ್ಗೆ ನೆರವಾಗಿದ್ದ ಅರಿವೇಗನ್ ಎಂಬತನನ್ನು ಬಂಧಿಸಿದ್ದಾರೆ. ಮತ್ತಿಬ್ಬರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
Recommended Video
ಹಣಕ್ಕಾಗಿ ಆಪ್ತ ಸ್ನೇಹಿತನನ್ನೇ ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಶಾಂತ್ ಮತ್ತು ಸಂತೋಷ್ನನ್ನು ವಿಚಾರಣೆ ನಡೆಸಿದಾಗ, ಟೆಕ್ಕಿ ವಿನೀತ್ ವರ್ಧನ್ ಸ್ವಂತ ಕಂಪನಿ ಸ್ಥಾಪಿಸಿದ್ದ. ಬೇರೊಂದು ಕಂಪನಿ ಜತೆ ಒಡಂಬಡಿಕೆ ಮಾಡಿಕೊಂಡಿದ್ದ ವಿನೀತ್ ವರ್ಧನ್ ಖಾತೆಗೆ ಐದು ಕೋಟಿ ರೂ. ಹಣ ಬರುತ್ತಿತ್ತು. ಈ ವಿಚಾರವನ್ನು ವಿನೀತ್ ವರ್ಧನ್ ತನ್ನ ಸ್ನೇಹಿತರಿಗೆ ಹೇಳಿಕೊಂಡಿದ್ದ. ಇದನ್ನು ತಿಳಿದು ಐದು ಕೋಟಿ ರೂ.ನಲ್ಲಿ ಎರಡು ಕೋಟಿ ರೂ. ಲಪಟಾಯಿಸುವ ಪ್ಲಾನ್ ರೂಪಿಸಿ ಅಪಹರಣ ಮಾಡಿದ್ದಾಗಿ ತಿಳಿಸಿದ್ದಾರೆ. ಇದೀಗ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಸೇರಿದ್ದಾರೆ. ಅಪಹರಣ ಪ್ರಕರಣವನ್ನು ಸುಖಾಂತ್ಯಗೊಳಿಸುವಲ್ಲಿ ಕೋರಮಂಗಲ ಪೊಲೀಸರು ಯಶಸ್ವಿಯಾಗಿದ್ದಾರೆ.