'ವಸತಿ ಶಾಲೆಗಳನ್ನ ಕೋವಿಡ್ ಕ್ವಾರೈಂಟೈನ್ ಕೇಂದ್ರಗಳಾಗಿ ಬಳಸಿಕೊಳ್ಳಿ'
ಬೆಂಗಳೂರು, ಮಾ. 27: ರಾಜ್ಯದಲ್ಲಿ ಮಾರಕ ಕೊರೊನಾ ವೈರಸ್ ಹರಡುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶಂಕಿತರನ್ನು ಕ್ವಾರಂಟೈನ್ ಕೇಂದ್ರಗಳಲ್ಲಿಡಲು ಸರ್ಕಾರ ಹೆಣಗಾಡುತ್ತಿದೆ. ಈ ವರೆಗೆ ಕೊರೊನಾ ವೈರಸ್ನಿಂದ ಮೂರು ಸಾವುಗಳಾಗಿದ್ದು, ಜೊತೆಗೆ 55 ಜನರಲ್ಲಿ ಸೋಂಕು ದೃಢಪಟ್ಟಿದೆ. ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.
ಸೋಂಕು ಪೀಡಿತ ದೇಶಗಳಿಂದ, ಸೋಂಕು ಪೀಡಿತರ ಸಂಪರ್ಕದಲ್ಲಿ ಇದ್ದವರನ್ನು ಕ್ವಾರಂಟೈನ್ ಕೇಂದ್ರಗಳನ್ನು ಸಿದ್ಧವಾಡಲು ಸರ್ಕಾರ ಇನ್ನಿಲ್ಲದ ಪ್ರಯತ್ನ ನಡೆಸಿದೆ. ಇದೇ ಸಂದರ್ಭದಲ್ಲಿ ಕೊರೋನ ವೈರಸ್ ನಿಯಂತ್ರಣಕ್ಕೆ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳನ್ನು ಕ್ವಾರಂಟೈನ್ ಗಳನ್ನಾಗಿ ಬಳಕೆ ಮಾಡಿಕೊಳ್ಳುವಂತೆ ಡಿಸಿಎಂ ಗೋವಿಂದ ಕಾರಜೋಳ ರಾಜ್ಯದ ಎಲ್ಲ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಸಮಾಜ ಕಲ್ಯಾಣ ಇಲಾಖೆ ನಿರ್ವಹಿಸುವ ವಸತಿ ಶಾಲೆ ಮತ್ತು ವಿದ್ಯಾರ್ಥಿ ನಿಲಯಗಳಿಗೆ ಈಗಾಗಲೇ ರಜೆ ನೀಡಲಾಗಿದೆ. ವಸತಿ ಶಾಲೆಯ ವಿದ್ಯಾರ್ಥಿಗಳು ಬೇಸಿಗೆ ರಜೆಯಲ್ಲಿ ಇರುವುದರಿಂದ ವಸತಿ ಶಾಲೆ ಬಳಸಿಕೊಳ್ಳಲು ಯಾವ ತೊಂದರೆಯೂ ಇರುವುದಿಲ್ಲ. ರಾಜ್ಯದ ಎಲ್ಲಾ ತಾಲೂಕು ಮತ್ತು ಜಿಲ್ಲೆಗಳಲ್ಲಿರುವ ವಸತಿ ಶಾಲೆಗಳು ಮತ್ತು ವಿದ್ಯಾರ್ಥಿ ನಿಲಯಗಳು ಅಗತ್ಯ ಮೂಲಸೌಕರ್ಯ ಹೊಂದಿವೆ.
ಬಹಳಷ್ಟು ವಸತಿ ಶಾಲೆಗಳು ಊರಿನಿಂದ ಹೊರಗಿವೆ. ಅಲ್ಲದೆ ವಿಶಾಲವಾದ ಸ್ಥಳದಲ್ಲಿ ಸುಸಜ್ಜಿತವಾಗಿದ್ದು, ಪ್ರತ್ಯೇಕ ಕೊಠಡಿಗಳು , ಶೌಚಾಲಯ , ಸ್ನಾನ ಗೃಹ ಒಳಗೊಂಡಿವೆ. ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿನಿಲಯಗಳು ಜನ ಸಂದಣಿಯಿಂದ ದೂರದ ಪ್ರದೇಶಗಳಲ್ಲಿವೆ.
ಹೀಗಾಗಿ ಯಾವುದೇ ವೆಚ್ಚವಿಲ್ಲದೆ ವಸತಿ ಶಾಲೆ ಮತ್ತು ವಿದ್ಯಾರ್ಥಿ ನಿಲಯಗಳನ್ನು ಕ್ವಾರಂಟೈನ್ ಗಳನ್ನಾಗಿ ಪರಿವರ್ತಿಸಬಹುದಾಗಿದೆ. ಜಿಲ್ಲಾಡಳಿತವು ಮುಕ್ತವಾಗಿ ಬಳಸಿಕೊಳ್ಳಬೇಕೆಂದು ಕಾರಜೋಳ ತಿಳಿಸಿದ್ದಾರೆ.