ಆರ್. ಆರ್. ನಗರ ಚುನಾವಣೆ; ಸೈಬರ್ ಕ್ರೈಂಗೆ ಜೆಡಿಎಸ್ ದೂರು
ಬೆಂಗಳೂರು, ಅಕ್ಟೋಬರ್ 26: ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ವಿ. ಕೃಷ್ಣಮೂರ್ತಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ನವೆಂಬರ್ 3ರಂದು ಮತದಾನ ನಡೆಯಲಿದೆ.
ಸೋಮವಾರ ಜೆಡಿಎಸ್ ಕಚೇರಿಯಲ್ಲಿ ವಿ. ಕೃಷ್ಣಮೂರ್ತಿ, ಶರವಣ ಮುಂತಾದ ನಾಯಕರು ಪತ್ರಿಕಾಗೋಷ್ಠಿ ನಡೆಸಿದರು. "ಸೋಲಿನ ಭಯದಿಂದ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ" ಎಂದು ಕೃಷ್ಣಮೂರ್ತಿ ಆರೋಪಿಸಿದರು.
ಎರಡು ಕ್ಷೇತ್ರಗಳ ಉಪ ಚುನಾವಣೆ; ಹೆಚ್ಚಿದ ಜೆಡಿಎಸ್ ಶಕ್ತಿ
"ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಮಾಡುತ್ತಿರುವ ಅಪಪ್ರಚಾರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿದೆ. ಜೆಡಿಎಸ್ನಲ್ಲಿ ಯಾರೂ ಮಾರಾಟವಾಗಿಲ್ಲ. ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ಗುರುತಿಸಿ ಟಿಕೆಟ್ ನೀಡಲಾಗಿದೆ" ಎಂದು ವಿ. ಕೃಷ್ಣಮೂರ್ತಿ ಹೇಳಿದರು.
ಶಿರಾ ಉಪ ಚುನಾವಣೆ; ಬಿಜೆಪಿ ಬಿಟ್ಟು ಜೆಡಿಎಸ್ ಸೇರಿದ ನಾಯಕರು
"ಹನುಮಂತರಾಯಪ್ಪ ಅವರು ನಗರಸಭಾಧ್ಯಕ್ಷರಾಗಿದ್ದಾಗ ಒಕ್ಕಲಿಗರಿಗೆ ಏನು ಕೊಡುಗೆ ನೀಡಿದ್ದಾರೆ?. ರಾಷ್ಟ್ರೀಯ ಪಕ್ಷಗಳು ಹಣಬಲವಿಲ್ಲದೇ ಉಪ ಚುನಾವಣೆಯನ್ನು ಎದುರಿಸಲು ಸಿದ್ಧವಾಗಿವೆಯೇ?" ಎಂದು ಕೃಷ್ಣಮೂರ್ತಿ ಪ್ರಶ್ನಿಸಿದರು.
ಶಿರಾ; ಜೆಡಿಎಸ್ ನಾಮಪತ್ರ ಸಲ್ಲಿಕೆ, ಶಕ್ತಿ ಪ್ರದರ್ಶನ
"ಬಿಜೆಪಿ ಅಭ್ಯರ್ಥಿಯನ್ನು ಬೆಳೆಸಿದ್ದೇ ಕಾಂಗ್ರೆಸ್ನವರು. ಈಗ ಅವರಿಗೆ ಜ್ಞಾನೋದಯವಾಗಿದೆ. ಒಕ್ಕಲಿಗರು ಒಂದಾಗಬೇಕು ಎಂದು ಚುನಾವಣೆಯಲ್ಲಿ ಒಕ್ಕಲಿಗೆ ಕಾರ್ಡ್ ಬಳಕೆ ಮಾಡಲಾಗುತ್ತಿದೆ" ಎಂದು ಕೃಷ್ಣಮೂರ್ತಿ ಆರೋಪಿಸಿದರು.
"ಜೆಡಿಎಸ್ ಪಕ್ಷವನ್ನ ನಗಣ್ಯ ಎಂದು ರಾಷ್ಟ್ರೀಯ ಪಕ್ಷಗಳು ಭಾವಿಸಿದ್ದವು. ನಾವು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಪ್ರಚಾರ ಮಾಡುತ್ತಿದ್ದೇವೆ. ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಂಗಳವಾರ ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ" ಎಂದು ಕೃಷ್ಣಮೂರ್ತಿ ತಿಳಿಸಿದರು.
ಶರವಣ ಮಾತನಾಡಿ, "ನಮ್ಮ ಅಭ್ಯರ್ಥಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ಗಳನ್ನು ಹಾಕಲಾಗುತ್ತಿದೆ. ಈ ಕುರಿತು ಆಯೋಗ ಗಮನಹರಿಸಬೇಕು. ಇಲ್ಲವಾದಲ್ಲಿ ನಾವು ಪ್ರತಿಭಟನೆ ನಡೆಸುತ್ತೇವೆ" ಎಂದು ಎಚ್ಚರಿಕೆ ನೀಡಿದರು.
ನವೆಂಬರ್ 3ರಂದು ಆರ್. ಆರ್. ನಗರ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಮುನಿರತ್ನ, ಕಾಂಗ್ರೆಸ್ನಿಂದ ಹೆಚ್. ಕುಸುಮಾ ಮತ್ತು ಜೆಡಿಎಸ್ನಿಂದ ವಿ. ಕೃಷ್ಣಮೂರ್ತಿ ಅಭ್ಯರ್ಥಿಗಳು. ನವೆಂಬರ್ 10ರಂದು ಫಲಿತಾಂಶ ಪ್ರಕಟವಾಗಲಿದೆ.