'ಸ್ಮಾರ್ಟ್' ಪ್ರಯಾಣಿಕನಿಗೆ ತಟ್ಟದ ಬಸ್ ಮುಷ್ಕರದ ಬಿಸಿ
ಬೆಂಗಳೂರು, ಜುಲೈ 25 : ರಾಜ್ಯ ಸರಕಾರಿ ಬಸ್ ನೌಕರರ ಮುಷ್ಕರದಿಂದಾಗಿ ಉದ್ಯಾನ ನಗರಿಯಲ್ಲಿ ಬಸ್ ಸಿಗದೆ, ಡಬಲ್ ಚಾರ್ಜ್ ಮಾಡುವ ಆಟೋಕ್ಕೆ ದುಡ್ಡು ತೆರಲಾರದೆ, ಖಾಸಗಿ ವಾಹನ ಕೂಡ ಸಿಗಲಾರದೆ ಪರದಾಡುತ್ತಿರುವವರು ಬಡವರು ಮತ್ತು ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ದರೂ ಸರಿಯಾಗಿ ಬಳಸಿಕೊಳ್ಳಲಾಗದವರು.
ಹೌದು, ವೇತನ ಏರಿಕೆ ಆಗ್ರಹಿಸಿ ಬಸ್ ನೌಕರರು ನಡೆಸುತ್ತಿರುವ ಹರತಾಳದಿಂದಾಗಿ ಬೆಂಗಳೂರಿಗೆ ಭಾರೀ ಬಿಸಿ ತಟ್ಟಿದ್ದರೂ, ಸ್ಮಾರ್ಟ್ ಫೋನ್ ಇರುವವರು ಕೆಲ ನಿಮಿಷಗಳಲ್ಲಿಯೇ ಕ್ಯಾಬ್ ಬುಕ್ ಮಾಡಿಕೊಂಡು, ಆಟೋಗಳಿಗೆ ಇಕ್ಕುವ ದುಡ್ಡಿಗಿಂತ ಕಡಿಮೆ ಖರ್ಚಿನಲ್ಲಿ ಮನೆಯನ್ನೋ, ಕಚೇರಿಯನ್ನೋ ಸೇರಿಕೊಳ್ಳುತ್ತಿದ್ದಾರೆ. [ಬೆಂಗಳೂರು ಸಿಟಿ ಟ್ಯಾಕ್ಸಿ ದೂರವಾಣಿ ಸಂಖ್ಯೆಗಳು]
ಸೋಮವಾರ ಬೆಳಿಗ್ಗೆ ಯಲಹಂಕ ರೈಲು ನಿಲ್ದಾಣದಲ್ಲಿ ಈ ದೃಶ್ಯ ಸರ್ವೇಸಾಮಾನ್ಯವಾಗಿತ್ತು. ರೈಲಿಳಿದು ಬಂದವರನೇಕರು ಕೈಯಲ್ಲಿದ್ದ ಸ್ಮಾರ್ಟ್ ಫೋನಿನಲ್ಲಿ ಓಲಾವನ್ನೋ, ಊಬರ್ ಟ್ಯಾಕ್ಸಿಯನ್ನು ಕ್ಷಣಾರ್ಧದಲ್ಲಿ ಕರೆಸಿಕೊಂಡು ಮನೆಗಳಿಗೆ ತೆರಳುತ್ತಿದ್ದರು. ಅಲ್ಲಿದ್ದಿದ್ದು ಬರೀ ಟ್ಯಾಕ್ಸಿಗಳ ಭರಾಟೆ, ಆಟೋಗಳು ತೀರ ವಿರಳವಾಗಿದ್ದವು. [ಮುಷ್ಕರ ಕೈ ಬಿಡಲು ನೌಕರರಿಗೆ ಸಿದ್ದರಾಮಯ್ಯ ಮನವಿ]
ಆಟೋಗಿಂತ ಕಡಿಮೆ ದರದಲ್ಲಿ ಟ್ಯಾಕ್ಸಿಗಳೇ ಸಿಗುತ್ತಿರುವಾಗ ಆಟೋಗೆ ಕಾಯ್ದುಕೊಂಡು ಯಾರು ಕುಳಿತುಕೊಳ್ಳುತ್ತಿರುತ್ತಾರೆ? ಇದೆಲ್ಲ ಸ್ಮಾರ್ಟ್ ಫೋನಿನ ಮಹಿಮೆ. ಅದನ್ನು ತಮಗೆ ಅನುಕೂಲಕ್ಕೆ ತಕ್ಕಂತೆ, ಸಮಯಕ್ಕೆ ತಕ್ಕಂತೆ ಬಳಸಿಕೊಂಡವ ಜಾಣನಾಗುತ್ತಾನೆ, ಬಳಸಿಕೊಳ್ಳಲು ಹಿಂದೇಟು ಹಾಕುವವ ಬಸ್ ಬರುತ್ತೇನೋ ಅಂತ ದಿನವೆಲ್ಲ ಕಾದು ಕೂತಿರುತ್ತಾನೆ.[ಗ್ಯಾಲರಿ : ಬಸ್ ಇಲ್ಲದೆ ಜನರ ಪರದಾಟ]
ಎಲ್ಲರ ಬಳಿಯಲ್ಲಿಯೂ ಸ್ಮಾರ್ಟ್ ಫೋನ್ ಇರುವುದಿಲ್ಲ, ಇದ್ದರೂ ಟ್ಯಾಕ್ಸಿ ಬುಕ್ ಮಾಡುವಂಥ ಆಪ್ ಇನ್ಸ್ಟಾಲ್ ಮಾಡಿಕೊಂಡಿರುವುದಿಲ್ಲ, ಮಾಡಿಕೊಂಡಿದ್ದರೂ ಕೆಲವರಿಗೆ ಈ ಆಧುನಿಕ ತಂತ್ರಜ್ಞಾನವನ್ನು ಹೇಗೆ ಬಳಸಬೇಕೆಂಬುದು ಗೊತ್ತಿರುವುದಿಲ್ಲ. ಹೀಗಿದ್ದ ಮೇಲೆ ಪ್ರಯಾಣಿಕರನ್ನು ಆಟೋದವರು ಆಟವಾಡಿಸದೆ ಇರುತ್ತಾರೆಯೆ? ['ಶೇ 30 ರಷ್ಟು ವೇತನ ಪರಿಷ್ಕರಣೆ ಸಾಧ್ಯವೇ ಇಲ್ಲ']
ಇಷ್ಟಕ್ಕೂ, ಟ್ಯಾಕ್ಸಿ ಬುಕ್ ಮಾಡಿಕೊಳ್ಳುವ ಹಲವಾರು ಆಪ್ಗಳು ಗೂಗಲ್ ಪ್ಲೇನಲ್ಲಿ ಲಭ್ಯವಿವೆ. ಇಂಟರ್ನೆಟ್ ಸಂಪರ್ಕ ಲಭ್ಯವಿಲ್ಲದೆ ಕೆಲವೇ ನಿಮಿಷಗಳಲ್ಲಿ ಆಪ್ ಬುಕ್ ಮಾಡಿಕೊಂಡು ಸಯಮಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು. ಇಂಥ ಪರಿಸ್ಥಿತಿ ಬಂದಾಗ ನೀವೇನು ಮಾಡುತ್ತಿದ್ದಿರಿ? [ಪ್ರಥಮ ಮಹಿಳಾ ಊಬರ್ ಡ್ರೈವರ್ ಬೆಂಗಳೂರಿನಲ್ಲಿ ಅನುಮಾನಾಸ್ಪದ ಸಾವು]