ವಲಸೆ ಕಾರ್ಮಿಕರ ಹಸಿವು ತಣಿಸುತ್ತಿರುವ ಬೆಂಗಳೂರಿನ ಪೋಟೋಗ್ರಾಫರ್!
ಬೆಂಗಳೂರು, ಜೂ. 05: ಅದೊಂದು ದಿನ ಕೆಲಸದ ನಿಮಿತ್ತ ಹೊರಟಿದ್ದೆ. ಕೂಲಿ ಕಾರ್ಮಿಕರು ಬಿಲ್ಡಿಂಗ್ ಬಳಿ ರೊಟ್ಟಿಗಾಗಿ ಬಡಿದಾಡುತ್ತಿದ್ದ ದೃಶ್ಯ ನೋಡಿ ಬೇಸರವಾಯಿತು. ಕೊರೊನಾ ಸೋಂಕು ಬಡವರ ಅನ್ನವನ್ನು ಕಸಿದುಕೊಂಡಿತ್ತು. ನನ್ನ ಕೈಯಲ್ಲಾದ ಅನ್ನ ಸೇವೆಯನ್ನು ಅಗತ್ಯ ಇರುವರನ್ನು ಹುಡುಕಿ ನಮ್ಮ ಮನೆಯಲ್ಲಿ ಮಾಡಿದ ಅಡುಗೆಯನ್ನು ಎಂಟು ಮಂದಿಗೆ ಕೊಡಲು ಅರಂಭಿಸಿದೆ. ಮೇ.3ರಂದು ಮಧ್ಯಾಹ್ನ ಕೂಲಿ ಕಾರ್ಮಿಕರಿಗೆ ಅನ್ನ ಕೊಡುವ ಅಳಿಲು ಸೇವೆ ಆರಂಭಿಸಿದ್ದು, ಈಗ ಪ್ರತಿ ನಿತ್ಯ 200 ಕೂಲಿ ಕಾರ್ಮಿಕರಿಗೆ ಮಧ್ಯಾಹ್ನದ ಊಟ ಕೊಡುತ್ತಿದ್ದೇನೆ.!
ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿರುವ ವಿದ್ಯಾಸಾಗರ್, ಕೊರೊನಾ ಸಂಕಷ್ಟಕ್ಕೆ ಸಿಲುಕಿ ತುತ್ತು ಅನ್ನಕ್ಕಾಗಿ ಪರದಾಡುತ್ತಿರುವ ಕೂಲಿ ಕಾರ್ಮಿಕರ ಹಸಿವು ನೀಗಿಸಲು ಅಳಿಲು ಸೇವೆ ಮಾಡುತ್ತಿದ್ದಾರೆ. ಬೆಂಗಳೂರಿನ ಇಟ್ಟುಮಡು ನಿವಾಸಿ ವಿದ್ಯಾಸಾಗರ್ ಶ್ರೀಮಂತ ಮನೆತನದವರಲ್ಲ. ವೃತ್ತಿಯಲ್ಲಿ ಫೋಟೋಗ್ರಾಫರ್, ಕೊರೊನಾ ಮೊದಲ ಅಲೆ ಬಂದಾಗಿನಿಂದಲೂ ದುಡಿಮೆ ಇಲ್ಲ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ವಿರಾಟ್ ಸೇನೆ ಎಂಬ ಪುಟ್ಟ ಸೇವಾ ಗುಂಪು ಕಟ್ಟಿಕೊಂಡು ದಿನಕ್ಕೆ 200 ಮಂದಿಗೆ ಮಧ್ಯಾಹ್ನದ ಊಟ ಹಂಚುತ್ತಿದ್ದಾರೆ. ಇದು ತೋರ್ಪಡಿಕೆಗೆ ಮಾಡುತ್ತಿರುವ ಸೇವೆಯೂ ಅಲ್ಲ. ಯಾರಿಗೂ ಈವರೆಗೂ ವಿರಾಟ್ ಸೇನೆಯ ಕಾರ್ಯವೂ ಗೊತ್ತಿಲ್ಲ. ಹಸಿದವರಿಗೆ ಅನ್ನ ಕೊಡಬೇಕು ಎಂಬುದಷ್ಟೇ ವಿರಾಟ್ ಸೇನೆಯ ಉದ್ದೇಶ.
ಮನೆಯಲ್ಲಿ ತಂದೆ ಮಾಡಿದ ಅಡುಗೆಯನ್ನು ಮೇ.3 ರಂದು ಎಂಟು ಮಂದಿಗೆ ಹಂಚುವ ಮೂಲಕ ಏಕಾಂಗಿಯಾಗಿ ವಿದ್ಯಾಸಾಗರ್, "ಅನ್ನದಾನ ಸೇವೆ' ಆರಂಭಿಸಿದ್ದರು. ದಿನಗಳು ಕಳೆದಂತೆ ಹಸಿದವರ ಸಂಖ್ಯೆಯೂ ಹೆಚ್ಚಾಗುತ್ತಾ ಹೋಯಿತು. ವಿದ್ಯಾಸಾಗರ್ ಸೇವೆ ನೋಡಿ ಕೆಲವು ಆಪ್ತರು ಸೇರಿಕೊಂಡರು. ಪ್ರತಿನಿತ್ಯ ತಮ್ಮದೇ ಬೈಕ್ಗಳಲ್ಲಿ ಮಧ್ಯಾಹ್ನದ ವೇಳೆ ವಲಸೆ ಕಾರ್ಮಿಕರನ್ನು ಭೇಟಿ ಮಾಡಿ ಅನ್ನದ ಪೊಟ್ಟಣ ನೀಡುತ್ತಾರೆ.
ಇಟ್ಟಮಡು, ಎಜಿಎಸ್ ಬಡಾವಣೆ, ಶ್ರೀನಿವಾಸ ನಗರ ಕಾಲೋನಿಯಲ್ಲಿರುವ ವಲಸೆ ಕಾರ್ಮಿಕರು ಹಾಗು ಅವರ ಮಕ್ಕಳಿಗೆ ಊಟದ ಪೊಟ್ಟಣಗಳನ್ನು ನೀಡಿ ಹಸಿವನ್ನು ತಣಿಸುತ್ತಿದ್ದಾರೆ. ಇವರು ಯಾವ ರಾಜಕಾರಣಿ ಬಳಿ ಹೋಗಿ ಚಂದಾವನ್ನು ಎತ್ತಿಲ್ಲ. ಇನ್ಯಾರ ನೆರವೂ ಕೇಳಿಲ್ಲ. ತಮ್ಮ ಕೈಯಲ್ಲಾದ ಸೇವೆ ಮಾಡುವ ಮೂಲಕ ಟೀಮ್ ವಿರಾಟ್ ಸದಸ್ಯರು ನಿಷ್ಕಲ್ಮಶ ಸೇವೆಯಲ್ಲಿ ತೊಡಗಿದ್ದಾರೆ.
ವಿದ್ಯಾಸಾಗರ್ ಅವರ ತಂದೆಯೇ ಅಡುಗೆ ಭಟ್ಟರು. ಹೋಟೆಲ್ನವರು ನೀಡಿರುವ ಪಾತ್ರೆಯಲ್ಲಿ ದಿನಕ್ಕೆ 200 ಮಂದಿಗೆ ಅಗುವಷ್ಟು ಅಡುಗೆ ಮಾಡುತ್ತಿದ್ದಾರೆ. ಅದನ್ನು ವಿದ್ಯಾಸಾಗರ್ ತಮ್ಮ ಬೈಕಿನಲ್ಲಿ ತೆಗೆದುಕೊಂಡು ಹೋಗಿ ಹಂಚುತ್ತಾರೆ. ಬಡವರ ಕಷ್ಟಕ್ಕೆ ಸ್ಪಂದಿಸಿ ವಿದ್ಯಾಸಾಗರ್ ಅವರ ತಂದೆ ಮೋಹನ್ ಕುಮಾರ್ ಸ್ವತಃ ಮನೆಯಲ್ಲಿ ಅಡುಗೆ ಮಾಡಿ ಕೊಡುತ್ತಿದ್ದಾರೆ.
ಹೀಗೆ ಅಪ್ಪ ಮಗ ಇಬ್ಬರೂ ಹಸಿದ ಮಕ್ಕಳಿಗೆ ಅನ್ನ ನೀಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವರ ನಿಷ್ಠಾವಂತ ಸೇವೆ ನೋಡಿ ಇದೀಗ ಕೆಲವರು ತಮ್ಮ ಕೈಯಲ್ಲಾದ ಸಹಾಯ ಮಾಡಲು ಜನರು ಮುಂದೆ ಬರುತ್ತಿದ್ದಾರೆ. ಹೀಗಾಗಿ ಎಂಟು ಜನರಿಗೆ ಅನ್ನದ ಪೊಟ್ಟಣ ನೀಡುವುದರಿಂದ ಆರಂಭವಾದ ವಿರಾಟ್ ಸೇನೆ ಅನ್ನದಾತ ಸೇವೆ ಇದೀಗ 200 ಮಂದಿಗೆ ತಲುಪಿರುವ ಬಗ್ಗೆ ಛಾಯಗ್ರಾಹಕ ವಿದ್ಯಾಸಾಗರ್ ಒನ್ಇಂಡಿಯಾ ಕನ್ನಡ ಜತೆ ಸಂತಸ ಹಂಚಿಕೊಂಡಿದ್ದಾರೆ.
Recommended Video