ಸದ್ವಿಚಾರಗಳನ್ನು ಪಕ್ಷಾತೀತವಾಗಿ ಸ್ವೀಕರಿಸಿ: ಎನ್ ಆರ್ ನಾರಾಯಣ ಮೂರ್ತಿ
ಬೆಂಗಳೂರು, ಡಿಸೆಂಬರ್, 26 : ಸಮಾಜದ ಮೌಲ್ಯಗಳನ್ನು ಎತ್ತಿ ಹಿಡಿಯುವ ಸಲುವಾಗಿ ಹಿರಿಯ ಪತ್ರಕರ್ತ ಚಂದ್ರಕಾಂತ ವಡ್ಡು ಅವರು ಹೊರ ತರುತ್ತಿರುವ ಮಾಸ ಪತ್ರಿಕೆ 'ಸಮಾಜಮುಖಿ' ಯ ಮೊದಲ ಸಂಚಿಕೆಯನ್ನು ಭಾನುವಾರದಂದು ಗಾಂಧಿಭವನದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಹಿರಿಯ ರಾಜಕೀಯ ಮುತ್ಸದ್ಧಿ ಎಸ್ಸೆಂ ಕೃಷ್ಣ, ಇನ್ಫೋಸಿಸ್ ಸಹ ಸ್ಥಾಪಕ ಎನ್. ಆರ್ ನಾರಾಯಣ ಮೂರ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅರವಿಂದ ಮಾಲಗತ್ತಿ ಅವರು ಪಾಲ್ಗೊಂಡಿದ್ದರು.
ಎನ್. ಆರ್. ನಾರಾಯಣಮೂರ್ತಿ: 'ದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಾಂಗ್ಲಾ, ಶ್ರೀಲಂಕಾ, ಚೀನಾಕ್ಕಿಂತಲೂ ಬಹಳ ಕೆಳಮಟ್ಟದಲ್ಲಿದೆ. ಆಫ್ರಿಕಾ ಖಂಡದ ದೇಶಗಳಲ್ಲಿ ಇದು ನಮಗಿಂತಲೂ ಉತ್ತಮವಾಗಿದೆ'
'ಸದ್ವಿಚಾರಗಳು, ಸತ್ ಚಿಂತನೆಗಳು ಎಲ್ಲಿಂದಲೇ ಬಂದರೂ ಸ್ವೀಕರಿಸಬೇಕು. ಅವು ಕಾಂಗ್ರೆಸ್, ಬಿಜೆಪಿ ಅಥವಾ ಜೆಡಿಎಸ್ನಿಂದಲೇ ಬರಲಿ, ಅದು ಮುಖ್ಯವಲ್ಲ. ಬದುಕಿನಲ್ಲಿ ಮುಂದೆ ಬರಲು ಈ ವಿಚಾರಗಳು ದಾರಿ ತೋರಿಸುತ್ತವೆಯೇ, ಇವುಗಳಿಂದ ಮುಂದಿನ ಪೀಳಿಗೆಗೆ ಒಳಿತಾಗುತ್ತದೆಯೇ ಎನ್ನುವುದನ್ನು ಮಾತ್ರ ಪರಿಗಣಿಸಬೇಕು' ಎಂದರು.
ಮೈಸೂರಿನಲ್ಲಿ ನಡೆದ 83ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಾಧ್ಯಮ ಕೇಂದ್ರದಲ್ಲಿ ಸಮಾಜಮುಖಿ ಮಾಸಪತ್ರಿಕೆಯ ಪ್ರಾಯೋಗಿಕ ಸಂಚಿಕೆಯನ್ನು ಸಮ್ಮೇಳನದ ಅಧ್ಯಕ್ಷ ಪ್ರೊ. ಚಂದ್ರಶೇಖರ ಪಾಟೀಲ ಅವರು ಲೋಕಾರ್ಪಣೆ ಮಾಡಿದ್ದರು.
ಸಮಾಜಮುಖಿ ಪತ್ರಿಕೆಯು ಸಮಾಜದ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ಆರೋಗ್ಯಪೂರ್ಣ ವಾತಾವರಣವನ್ನು ನಿರ್ಮಿಸಲು ಮುಂದಾಗಿರುವುದು ಸಂತಸ ಸಂಗತಿ ಎಂದು ಪ್ರೊ. ಚಂದ್ರಶೇಖರ ಪಾಟೀಲ ಅವರು ಶುಭ ಹಾರೈಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಸಂಪಾದಕರ ನುಡಿ : ಕನ್ನಡಿಗರಿಗೆ ಇಂದಿನ ಪ್ರಪಂಚದ ವಾಸ್ತವಿಕ ಅರಿವನ್ನು ಕಟ್ಟಿಕೊಡುವುದು ಸಮಾಜಮುಖಿಯ ಪ್ರಮುಖ ಉದ್ದೇಶ. ಅದಕ್ಕಾಗಿ ಸೈದ್ಧಾಂತಿಕ ಬದ್ಧತೆಗಳನ್ನು ಮೀರಿದ ವೈಚಾರಿಕತೆಯನ್ನು ಕಟ್ಟಿಕೊಳ್ಳುವ, ಅದಕ್ಕಾಗಿ ಎಲ್ಲ ಬಗೆಯ ದ್ವಿವಿಧತೆ (ಡ್ಯೂಯಲಿಸಮ್)ಗಳನ್ನು ಮೀರಬೇಕೆನ್ನುವ ಹಂಬಲ ನಮ್ಮದು. ಈ ಪ್ರಯತ್ನದಲ್ಲಿ ಕನ್ನಡದ ನೆಲದ ಬದುಕಿನ ಅನುಭವ ಮತ್ತು ವಿವೇಕಗಳನ್ನು ನಮ್ಮ ಪ್ರಜ್ಞೆಯ ಕೇಂದ್ರದಲ್ಲಿರಿಸಿಕೊಂಡು ಜಗತ್ತನ್ನು ಅರಿಯಲು ಬಯಸುತ್ತೇವೆ.
ಆದರೆ, ಕನ್ನಡಿಗರಿಗೆ ಬೇಕಾಗಿರುವ ಎಲ್ಲ ಒಳಿತು ಅದೆಲ್ಲಿಯದೇ ಆದರೂ ನಮಗಿರಲಿ ಎಂದು ಆಶಿಸುತ್ತೇವೆ. ಸಂಕುಚಿತತೆಯನ್ನು ಬಿಟ್ಟು ವಿಶ್ವಾತ್ಮಕತೆಯನ್ನು ನಮ್ಮದಾಗಿಸಿಕೊಳ್ಳುವ, ಕನ್ನಡದ ಸೃಜನಶೀಲ ಮನಸ್ಸಿನಷ್ಟೇ ಗಟ್ಟಿಯಾಗಿ ಕನ್ನಡದಲ್ಲಿ ಕ್ರಮಬದ್ಧ ಚಿಂತನೆ-ಬೌದ್ಧಿಕತೆಗಳನ್ನು ಕಟ್ಟುವ ಕನಸು ನಮ್ಮದು. ಕುವೆಂಪುರವರು ಹೇಳುವ ನಿರಂಕುಶಮತಿ ಮತ್ತು ವೈಚಾರಿಕ ಪ್ರಜ್ಞೆ ನಮ್ಮ ಗುರಿ.