ಮಾಗಡಿಯಲ್ಲಿ ಶಾಸಕ ಬಾಲಕೃಷ್ಣ ಕಾರಿನ ಮೇಲೆ ಚಪ್ಪಲಿ ಎಸೆತ
ಮಾಗಡಿ, ಜನವರಿ 06: ದಲಿತ ಮಹಿಳೆಗೆ ಪುರಸಭೆ ಅಧ್ಯಕ್ಷ ಸ್ಥಾನ ತಪ್ಪಿಸಿದ್ದಕ್ಕೆ ಕುಪಿತಗೊಂಡ ಮಾಗಡಿಯ ದಲಿತ ಸಂಘಟನೆ ಸದಸ್ಯರು ಮಾಗಡಿ ಶಾಸಕ ಬಾಲಕೃಷ್ಣ ಅವರ ವಿರುದ್ಧ ಪ್ರತಿಭಟನೆ ಮಾಡಿ ಶಾಸಕರು ತೆರಳುತ್ತಿದ್ದ ಕಾರಿನ ಮೇಲೆ ಚಪ್ಪಲಿ ಎಸೆದಿದ್ದಾರೆ.
ಇಂದು ಮಾಗಡಿ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು, ದಲಿತ ಮಹಿಳೆ ಸುಶೀಲ ಅವರಿಗೆ ಅಧ್ಯಕ್ಷ ಗಾದಿ ದೊರಕಲಿದೆ ಎಂದು ಉತ್ಸಾಹದಿಂದ ವಿಜಯೋತ್ಸವ ಆಚರಿಸಲು ತಯಾರಿ ಮಾಡಿಕೊಂಡು ಸುಶೀಲ ಅವರ ಪತಿ ರಂಗ ಹನುಮಯ್ಯ ಪರ ಬೆಂಬಲಿಗರು ಹಾಗೂ ದಲಿತ ಸಂಘಟನೆಗಳ ಸದಸ್ಯರು ಪುರಸಭೆ ಮುಂದೆ ಜಮಾಯಿಸಿದ್ದರು, ಆದರೆ ಶಾಸಕ ಬಾಲಕೃಷ್ಣ ಅವರು ತಮ್ಮ ಪ್ರಭಾವ ಬೀರಿ ಪಕ್ಷೇತರವಾಗಿ ಪುರಸಭೆಗೆ ಆಯ್ಕೆಯಾಗಿದ್ದ ಮಂಜುನಾಥ ಅವರಿಗೆ ಪುರಸಭೆ ಅಧ್ಯಕ್ಷ ಸ್ಥಾನ ಸಿಗುವಂತೆ ಮಾಡಿದ್ದಾರೆ ಇದರಿಂದ ಕುಪಿತಗೊಂಡ ದಲಿತರು ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ಮಾಡಿದರು.
ಅಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಶಾಸಕ ಬಾಲಕೃಷ್ಣ, ಸಂಸದ ಡಿ.ಕೆ.ಸುರೇಶ್ ಅವರು ಕೂಡ ಭಾಗವಹಿಸಿದ್ದರು, ಅವರ ವಿರುದ್ಧ ಘೋಷಣೆಗಳನ್ನು ಕೂಗಿದ ದಲಿತ ಸಂಘಟನೆ ಸದಸ್ಯರು ಸ್ಥಳದಲ್ಲಿಯೇ ಅರೆಬೆತ್ತಲೆ ಮೆರವಣಿಗೆ ಮಾಡಿದರು.
ದಲಿತ ಮಹಿಳೆ ಸುಶೀಲಾ ಅವರಿಗೆ ಮಾಗಡಿ ಪುರಸಭೆ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ಶಾಸಕ ಬಾಲಕೃಷ್ಣ ಭರವಸೆ ನೀಡಿದ್ದರು, ಪುರಸಭೆಯ ಇತರೆ ಚುನಾಯಿತ ಸದಸ್ಯರು ಇದಕ್ಕೆ ಒಪ್ಪಿಗೆ ಸೂಚಿಸಿದ್ದರು ಆದರೆ ಈಗ ಯಾವುದೋ ಆಮಿಷಕ್ಕೆ ಒಳಗಾಗಿ ಎಚ್.ಎಮ್.ರೇವಣ್ಣ ಅವರ ಬೆಂಬಲಿಗ ಎಂಬ ಕಾರಣಕ್ಕೆ ಪಕ್ಷೇತರರಾಗಿ ಆಯ್ಕೆ ಆಗಿದ್ದ ಮಂಜುನಾಥ್ ಗೆ ಅಧ್ಯಕ್ಷ ಸ್ಥಾನ ಸಿಗುವಂತೆ ಶಾಸಕ ಬಾಲಕೃಷ್ಣ ಮಾಡಿದ್ದಾರೆ ಎಂದು ದಲಿತ ಸಂಘಟನೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.