''ಮಧ್ಯದಲ್ಲೇ ಶಾಲೆ ತೊರೆಯುವ ಮಕ್ಕಳಿಗೆ ಕೌಶಲ್ಯ ತರಬೇತಿ ಅತ್ಯಗತ್ಯ''
ಬೆಂಗಳೂರು, ಮಾ.16: ಮಧ್ಯದಲ್ಲೇ ಶಾಲೆ ತೊರೆಯುವ ಮಕ್ಕಳಿಗೆ ಅಲ್ಪಾವಧಿ ಕೆಲಸದ ಜತೆಗೆ ಕೌಶಲ್ಯ ತರಬೇತಿ ನೀಡುವ ಅಗತ್ಯವಿದೆ ಎಂದು ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಕೆ. ರತ್ನಪ್ರಭಾ ಅವರು ಅಭಿಪ್ರಾಯಪಟ್ಟಿದ್ದಾರೆ.
ಕೌಶಲ್ಯ ತರಬೇತಿ ಪ್ರಾಧಿಕಾರವು ವಿವಿಧ ವಲಯಗಳ ಕೌಶಲ್ಯ ಕೌನ್ಸಿಲ್ನೊಂದಿಗೆ "ಕೌಶಲ್ಯ ತರಬೇತಿ ಇರುವ ಅವಕಾಶಗಳ" ಕುರಿತು ಮಂಗಳವಾರ ಅಶೋಕ ಹೋಟೆಲ್ನಲ್ಲಿ ಆಯೋಜಿಸಿದ್ದ "ವಿಚಾರ ಗೋಷ್ಠಿ" ಹಾಗೂ ಸಂವಾದದಲ್ಲಿ ಮಾತನಾಡಿದರು. 14ನೇ ವಯಸ್ಸಿಗೂ ಮೊದಲೇ ಶಾಲೆ ತೊರೆಯುವ ಮಕ್ಕಳಿಗೆ ಆ ವಯಸ್ಸಿನಲ್ಲೇ ಕೌಶಲ್ಯ ತರಬೇತಿ ನೀಡುವ ಅಗತ್ಯವಿದೆ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಹಲವು ಕಾರಣದಿಂದ ಮಕ್ಕಳು 10 ನೇ ತರಗತಿಗೆ ಓದು ನಿಲ್ಲಿಸುತ್ತಾರೆ. ಆ ಸಂದರ್ಭದಲ್ಲಿ ಮಕ್ಕಳ ವಯಸ್ಸು 14 ವರ್ಷ ಒಳಗಿರುವುದರಿಂದ ಕೌಶಲ್ಯ ತರಬೇತಿ ನೀಡಬೇಕೇ , ಬೇಡವೇ ಎಂಬುದು ಈಗಲೂ ಚರ್ಚಾ ವಿಷಯವೇ ಆಗಿದೆ. ಆದರೆ, ಆ ಸಂದರ್ಭದಲ್ಲೇ ಅಂಥ ಮಕ್ಕಳನ್ನು ಗುರುತಿಸಿ ಕೌಶಲ್ಯ ತರಬೇತಿ ನೀಡಿದರೆ ಪರಿಣಾಮಕಾರಿಯಾಗಿ ಮಕ್ಕಳ ಭವಿಷ್ಯ ರೂಪಿಸಲು ನೆರವಾಗಲಿದೆ. 18 ವರ್ಷ ತುಂಬುವವರೆಗೂ ಅವರಿಗೆ ಪೂರ್ಣಾವಧಿ ಕೆಲಸಕ್ಕೆ ನೇಮಿಸುವ ಬದಲು, ಅಲ್ಪಾವಧಿ ಕೆಲಸ ಮಾಡಿಸುವುದರಿಂದ ಅವರ ವಯಸ್ಸಿನ ಮೇಲೆ ಯಾವುದೇ ಒತ್ತಡ ಬೀರಿದಂತಾಗುವುದಿಲ್ಲ. ಅಲ್ಲದೆ, ಅವರು ಪ್ರೌಢಾವಸ್ಥೆಗೆ ಬರುವುದರೊಳಗೆ ಆ ಮಕ್ಕಳ ಅನುಭವದ ಜೊತೆಗೆ ಕೌಶಲ್ಯವನ್ನೂ ಮೈಗೂಡಿಸಿಕೊಳ್ಳಲಿದ್ದಾರೆ ಎಂದು ಸಲಹೆ ಮಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೌಶಲ್ಯ ತರಬೇತಿ ಸಂಬಂಧ ಹಲವು ಕಾರ್ಯಕ್ರಮ ಆಯೋಜಿಸಿವೆ. ತರಬೇತಿ ನೀಡುವ ಕೆಲಸವೂ ನಡೆಯುತ್ತಿವೆ. ಆದರೂ, ಕೈಗಾರಿಕಾ ಸಂಸ್ಥೆಗಳು ಕೌಶಲ್ಯ ಹೊಂದಿರುವ ಯುವಕರು ಸಿಗುತ್ತಿಲ್ಲವೆಂದು ಅಳಲು ತೋಡಿಕೊಳ್ಳುತ್ತಿವೆ. ಇತ್ತ ಯುವಕರೂ ಸಹ ಕೌಶಲ್ಯದಂತಹ ತರಬೇತಿ ನೀಡಿದರೆ ಪಡೆಯಲು ಸಿದ್ಧವೆಂದು ಹೇಳುತ್ತಾರೆ. ಇದರ ನಡುವೆಯೂ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಹಾಗಿದ್ದರೆ ಕೈಗಾರಿಕೆಗಳು ಹಾಗೂ ಯುವಕರ ಮಧ್ಯೆ ಅಂತರ ಉಂಟಾಗಲು ಕಾರಣ ವೇನು ಎಂಬುದು ತಿಳಿಯುತ್ತಿಲ್ಲ ಅಚ್ಚರಿ ವ್ಯಕ್ತಪಡಿಸಿದರು.
Recommended Video
ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ , ಸಿಐಟಿಇ ಆಯುಕ್ತ ಡಾ.ಕೆ. ಹರೀಶ್ ಕುಮಾರ್, ಸರ್ಕಾರದ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.