ಇಂದಿರಾ ಕ್ಯಾಂಟೀನ್ ಮುಚ್ಚುವ ಸ್ಥಿತಿ ಬಂದಿದೆ : ಬಿಬಿಎಂಪಿ ಆಯುಕ್ತರು
ಬೆಂಗಳೂರು, ಆಗಸ್ಟ್ 27 : ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಜಾರಿಗೆ ಬಂದ ಮಹತ್ವದ ಯೋಜನೆ ಇಂದಿರಾ ಕ್ಯಾಂಟೀನ್. ಪ್ರಸ್ತುತ ಈ ಯೋಜನೆಗೆ ಅನುದಾನದ ಕೊರತೆ ಎದುರಾಗಿದೆ. ಕ್ಯಾಂಟೀನ್ ಮುಚ್ಚುವ ಪರಿಸ್ಥಿತಿ ಬಂದಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ಎನ್. ಮಂಜುನಾಥ ಪ್ರಸಾದ್ ಈ ಕುರಿತು ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಮಾತನಾಡಿದ್ದಾರೆ. "ಪ್ರಸ್ತುತ ಇಂದಿರಾ ಕ್ಯಾಂಟೀನ್ಗಳನ್ನು ಮುಚ್ಚುವ ಪರಿಸ್ಥಿತಿ ಇದೆ" ಎಂದು ಹೇಳಿದ್ದಾರೆ.
ಬಿಬಿಎಂಪಿಗೆ ಹೊರೆಯಾದ ಇಂದಿರಾ ಕ್ಯಾಂಟೀನ್ ನಿರ್ವಹಣೆ
ಯೋಜನೆ ಆರಂಭಿಸಿದ ಕರ್ನಾಟಕ ಸರ್ಕಾರ ಪ್ರತಿ ವರ್ಷ ಕ್ಯಾಂಟೀನ್ ನಿರ್ವಹಣೆಗೆ 100 ಕೋಟಿ ರೂ. ನೀಡಬೇಕಿತ್ತು. ಆದರೆ, ಮೈತ್ರಿ ಸರ್ಕಾರ ಹಣ ನೀಡಿಲ್ಲ, ಬಿಬಿಎಂಪಿ ತನ್ನ ಬಜೆಟ್ನಲ್ಲಿಯೂ ಹಣವನ್ನು ಮೀಸಲಾಗಿಟ್ಟಿಲ್ಲ.
ಇಂದಿರಾ ಕ್ಯಾಂಟೀನ್ ಸ್ಥಳಾಂತರ ಮಾಡಿ : ಆಸ್ಪತ್ರೆಯ ಮನವಿ
ಕಾಂಗ್ರೆಸ್ ಇಂದಿರಾ ಕ್ಯಾಂಟೀನ್ ಮುಚ್ಚುವ ಕರ್ನಾಟಕ ಸರ್ಕಾರದ ಚಿಂತನೆಗೆ ಆಕ್ರೋಶ ವ್ಯಕ್ತಪಡಿಸಿದೆ. ಆಗಸ್ಟ್ 29ರಂದು ಬೆಂಗಳೂರಿನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ.
ಇಂದಿರಾ ಕ್ಯಾಂಟೀನ್ನಲ್ಲಿ ಇನ್ಮುಂದೆ ಟೀ, ಕಾಫಿನೂ ಸಿಗುತ್ತೆ
ಎಷ್ಟು ಕ್ಯಾಂಟೀನ್ಗಳಿವೆ?
ಬೆಂಗಳೂರು ನಗರದಲ್ಲಿ 173 ಇಂದಿರಾ ಕ್ಯಾಂಟೀನ್, 18 ಮೊಬೈಲ್ ಕ್ಯಾಂಟೀನ್ಗಳಿವೆ. ಕ್ಯಾಂಟೀನ್ ನಿರ್ಮಾಣ ಮಾಡಲು ಜಾಗವಿಲ್ಲದ ವಾರ್ಡ್ಗಳಲ್ಲಿ ಮೊಬೈಲ್ ಕ್ಯಾಂಟೀನ್ ಮೂಲಕ ಜನರಿಗೆ ಆಹಾರವನ್ನು ಪೂರೈಕೆ ಮಾಡಲಾಗುತ್ತಿದೆ. ಈಗ ಕ್ಯಾಂಟೀನ್ಗಳನ್ನು ಮುಚ್ಚುವ ಪರಿಸ್ಥಿತಿ ಬಂದಿದೆ.
ಯಾವುದೇ ಪ್ರಯೋಜನವಾಗಿಲ್ಲ
"ಇಂದಿರಾ ಕ್ಯಾಂಟೀನ್ಗಳ ನಿರ್ವಹಣೆಗೆ ಅನುದಾನ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಪ್ರತಿ ವರ್ಷ ಕ್ಯಾಂಟೀನ್ ನಿರ್ವಹಣೆಗೆ 100 ಕೋಟಿ ರೂ. ನೀಡಬೇಕಾಗಿತ್ತು. ಮೈತ್ರಿ ಸರ್ಕಾರ ಕ್ಯಾಂಟೀನ್ಗಳಿಗೆ ಯಾವುದೇ ಹಣ ನೀಡಿಲ್ಲ" ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಹೇಳಿದ್ದಾರೆ.
ಅನುದಾನಗಳು ಖರ್ಚಾಗಿವೆ
ಮೊದಲು ಸರ್ಕಾರ ಯೋಜನೆ ಘೋಷಣೆ ಮಾಡಿ ಅನುದಾನ ಬಿಡುಗಡೆ ಮಾಡಿತ್ತು. ಇದುವರೆಗೂ ಇಂದಿರಾ ಕ್ಯಾಂಟೀನ್ಲ್ಲಿ 14 ಕೋಟಿ 40 ಲಕ್ಷ ಜನರು ಊಟ ಮಾಡಿದ್ದಾರೆ. ವಿವಿಧ ಕಾಮಗಾರಿಗಳಿಗಾಗಿ 24.37 ಕೋಟಿ ವೆಚ್ಚವಾಗಿದೆ. ಆದ್ದರಿಂದ, ಕ್ಯಾಂಟೀನ್ ನಿರ್ವಹಣೆ ಮಾಡಲು ಹಣದ ಕೊರತೆ ಎದುರಾಗಿದೆ.
ಅನುದಾನದ ಭರವಸೆ ಸಿಕ್ಕಿತ್ತು
ಸಿದ್ದರಾಮಯ್ಯ ಮಹತ್ವದ ಯೋಜನೆ ಘೋಷಣೆ ಮಾಡಿದಾಗ ಪ್ರತಿವರ್ಷ ಅನುದಾನ ನೀಡುವ ಭರವಸೆ ಸಿಕ್ಕಿತ್ತು. 2017ರಲ್ಲಿ ಯೋಜನೆಗಾಗಿ 100 ಕೋಟಿ ಬಿಡುಗಡೆಯಾಗಿತ್ತು. 2018-19ನೇ ಸಾಲಿನಲ್ಲಿ 115 ಕೋಟಿ ನೀಡಲಾಗಿತ್ತು. ಈ ವರ್ಷ 210 ಕೋಟಿ ನೀಡುವಂತೆ ಕೋರಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯಲಾಗಿತ್ತು. ಆದರೆ, ಅನುದಾನ ಸಿಕ್ಕಿಲ್ಲ.
ಕಾಂಗ್ರೆಸ್ನಿಂದ ಪ್ರತಿಭಟನೆ
ಇಂದಿರಾ ಕ್ಯಾಂಟೀನ್ ಮುಚ್ಚುವ ಹುನ್ನಾರವನ್ನು ಕರ್ನಾಟಕ ಸರ್ಕಾರ ನಡೆಸಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. "ಆಗಸ್ಟ್ 29ರಂದು ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ಪ್ರತಿಭಟನೆ ನಡೆಸಲಾಗುತ್ತದೆ" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.