ಶಿವಾಜಿನಗರ ಐಎಂಎ ಮಳಿಗೆಯಲ್ಲಿ ವಶಪಡಿಸಿಕೊಂಡ ಚಿನ್ನಾಭರಣಗಳ ವಿವರ
ಬೆಂಗಳೂರು, ಜೂನ್ 21: ಐಎಂಎ ಜ್ಯುವೆಲ್ಸ್ ಸಂಸ್ಥೆ ವಂಚನೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಎಸ್ಐಟಿ (ವಿಶೇಷ ತನಿಖಾ ದಳ)ವು ನಿನ್ನೆ (ಗುರುವಾರ) ಶಿವಾಜಿನಗರದ ಐಎಂಎ ಚಿನ್ನಾಭರಣ ಅಂಗಡಿ ಮೇಲೆ ದಾಳಿ ನಡೆಸಿತ್ತು.
ನ್ಯಾಯಾಲಯದ ಅನುಮತಿ ಪಡೆದು ಬೆಂಗಳೂರು ನಗರದ ಶಿವಾಜಿನಗರ ಲೇಡಿ ಕರ್ಜನ್ ರಸ್ತೆಯಲ್ಲಿರುವ ಪ್ರಕರಣದ ಪ್ರಮುಖ ಆರೋಪಿಯ ಒಡೆತನದ ಐ.ಎಂ.ಎ ಜ್ಯುವೆಲರಿ ಅಂಗಡಿಯನ್ನು ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9 ೦ಗಂಟೆ ವರೆಗೂ ಶೋಧನೆ ನಡೆಸಿ ಕೋಟ್ಯಂತರ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ವಜ್ರಗಳನ್ನು ವಶಪಡಿಸಿಕೊಂಡಿದೆ.
ಐಎಂಎ ಮೋಸ: ಮೋದಿಗೆ ಪತ್ರ ಬರೆದ ಗ್ರಾಹಕರು, ಹಣಕಾಸು ಸಚಿವರಿಗೂ ಮನವಿ
ದಾಳಿ ಸಮಯ 8 ಕೋಟಿ ರೂಪಾಯಿ ಮೌಲ್ಯದ 30 ಕೆಜಿ ಚಿನ್ನ, 9.5 ಕೋಟಿ ಮೌಲ್ಯದ 2627 ಕ್ಯಾರೆಟ್ ವಜ್ರ, ಸುಮಾರು 2 ಕೋಟಿ ಮೌಲ್ಯದ 450 ಕೆ.ಜಿ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡಿರುವ ಈ ಎಲ್ಲಾ ಆಭರಣಗಳ ಬೆಲೆ ಸುಮಾರು 20 ಕೋಟಿ ಎಂದು ಅಂದಾಜಿಸಲಾಗಿದ್ದು, ಇದೇ ವೇಳೆ ಈ ಹಿಂದೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೂ 5 ನಿರ್ದೇಶಕರುಗಳನ್ನು ದಸ್ತಗಿರಿ ಮಾಡಲಾಗಿದ್ದು, ಮುಂದಿನ ತನಿಖೆಗೆ ಪೊಲೀಸ್ ವಶಕ್ಕೆ ಪಡೆಯಲಾಗಿದೆ.
ಇನ್ನೂ ಐದು ಜನ ನಿರ್ದೇಶಕರ ಬಂಧನ
ಶಾದಬ್ ಅಹಮ್ಮದ್, 28 ವರ್ಷ , ಇಸ್ರಾರ್ ಅಹಮ್ಮದ್, 32 ವರ್ಷ, ಪುಸೈಲ್ ಅಹಮ್ಮದ್, 30 ವರ್ಷ , ಮಹಮ್ಮದ್ಇದ್ರೀಸ್, 30 ವರ್ಷ , ಉಸ್ಮಾನ್ ಅಬರೇಜ್, 33 ವರ್ಷ , ಈ ಪ್ರಕರಣದಲ್ಲಿ ಇದುವರೆಗೂ ಒಟ್ಟು 13 ಆರೋಪಿಗಳನ್ನು ದಸ್ತಗಿರಿ ಮಾಡಿದ್ದು, ತನಿಖೆ ತ್ವರಿತ ಗತಿಯಲ್ಲಿ ಮುಂದುವರೆದಿರುತ್ತದೆ.
ಐಎಂಎ ಮೇಲೆ ಮುಂದುವರೆದ ಎಸ್ಐಟಿ ದಾಳಿ: ಭಾರಿ ಪ್ರಮಾಣದ ಚಿನ್ನ ವಶ
ತ್ವರಿತವಾಗಿ ಸಾಗುತ್ತಿದೆ ತನಿಖೆ
ಈ ಕಾರ್ಯಾಚರಣೆಯನ್ನು ಐ.ಎಂ.ಎ ಪ್ರಕರಣದ ವಿಶೇಷ ತನಿಖಾ ತಂಡದ ಮುಖ್ಯಸ್ಥರಾದ ಶ್ರೀ ಬಿ.ಆರ್.ರವಿಕಾಂತೇಗೌಡ, ಐಪಿಎಸ್, ಡಿಐಜಿ & ಜಂಟಿ ಪೊಲೀಸ್ ಆಯುಕ್ತರು, ಅಪರಾಧ, ಬೆಂಗಳೂರು ನಗರ ರವರ ಮಾರ್ಗದರ್ಶನದಲ್ಲಿ ಶ್ರೀ ಗಿರೀಶ್.ಎಸ್, ಐಪಿಎಸ್, ಡಿಸಿಪಿ, ಅಪರಾಧ, ಬೆಂಗಳೂರು ನಗರ ರವರ ನೇತೃತ್ವದ ತಂಡವು ನಿರ್ವಹಿಸಿರುತ್ತದೆ.
ಜಯನಗರದ ಮಳಿಗೆ ಮೇಲೂ ದಾಳಿ
ಕೆಲ ದಿನಗಳ ಹಿಂದಷ್ಟೆ ಎಸ್ಐಟಿ ತಂಡವು ಜಯನಗರದಲ್ಲಿರುವ ಐಎಂಎ ಜ್ಯುವೆಲ್ಸ್ ಮಳಿಗೆ ಮೇಲೆ ಸಹ ದಾಳಿ ನಡೆಸಿ ಕೋಟ್ಯಂತ ರೂಪಾಯಿ ಚಿನ್ನ, ಬೆಳ್ಳಿ ಮತ್ತು ವಜ್ರವನ್ನು ವಶಪಡಿಸಿಕೊಂಡಿತ್ತು. ಇದೇ ವೇಳೆ ಐಎಂಎ ಮಾಲೀಕ ಮನ್ಸೂರ್ ಖಾನ್ನ ಮೂರನೇ ಪತ್ನಿಯ ಮನೆಯ ಮೇಲೂ ದಾಳಿ ನಡೆಸಲಾಗಿತ್ತು.
ರೋಷನ್ ಬೇಗ್ ಅಮಾನತಿನ ಹಿಂದಿನ ಬಲವಾದ ಗುಮಾನಿ ಇದೇ!
ಮನ್ಸೂರ್ ಖಾನ್ ವಿರುದ್ಧ ರೆಡ್ ಕಾರ್ನರ್
ಐಎಂಎ ಮಾಲೀಕ ಮನ್ಸೂರ್ ಖಾನ್ ದೇಶ ಬಿಟ್ಟು ಜೂನ್ 6 ರಂದು ಪರಾರಿ ಆಗಿದ್ದು, ಆತ ದುಬೈಗೆ ತೆರಳಿದ್ದಾನೆ ಎನ್ನಲಾಗುತ್ತಿದೆ. ಆತನಿಗಾಗಿ ರಾಜ್ಯ ಪೊಲೀಸರು ಇಂಟರ್ಪೋಲ್ ನೆರವು ಕೋರಿದ್ದು, ರೆಡ್ ಕಾರ್ನರ್ ನೊಟೀಸ್ ಸಹ ಆತನ ವಿರುದ್ಧ ಜಾರಿ ಆಗಿದೆ. ಇಷ್ಟೆ ಅಲ್ಲದೆ ಇಡಿ ಸಹ ಮನ್ಸೂರ್ ಖಾನ್ಗೆ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.