ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಪದ್ಮಶ್ರೀ ಪುರಸ್ಕೃತ ಇಂದಿರಾ ಜೈಸಿಂಗ್ ಎಂಟ್ರಿ
ಬೆಂಗಳೂರು, ಜೂನ್ 19: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದಲ್ಲಿ ಪದ್ಮಶ್ರೀ ಪುರಸ್ಕೃತ, ಮಾನವ ಹಕ್ಕುಗಳಿಗಾಗಿ ಹೋರಾಟ ಮಾಡುವಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿರುವ ಇಂದಿರಾ ಜೈಸಿಂಗ್ ಎಂಟ್ರಿ ಕೊಟ್ಟಿದ್ದಾರೆ. ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಪರ ಅವರು ವಕಾಲತ್ತು ವಹಿಸಿದ್ದಾರೆ. ಇಂದಿರಾ ಜೈಸಿಂಗ್ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದಲ್ಲಿ ಎಂಟ್ರಿ ಕೊಟ್ಟಿರುವುದು ಪೊಲೀಸ್ ವಲಯದಲ್ಲಿ ಚರ್ಚೆಗೆ ನಾಂದಿ ಹಾಡಿದೆ. ಎಸ್ಐಟಿ ತನಿಖೆ ನಿರ್ಣಾಯಕ ಹಂತ ತಲುಪಿರುವ ಬೆನ್ನಲ್ಲೇ, ಜೂನ್ 23 ರಂದು ಪ್ರಕರಣ ಯಾವ ಸ್ವರೂಪ ಪಡೆಯಲಿದೆ ಎಂಬುದು ಕುತೂಹಲ ಕೆರಳಿಸಿದೆ.
Recommended Video
ಎಸ್ಐಟಿ ಅಧಿಕಾರಿಗಳ ತನಿಖೆ ಬಗ್ಗೆ ನನಗೆ ನಂಬಿಕೆ ಇಲ್ಲ. ಸಿಬಿಐ ತನಿಖೆಗೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ನನ್ನ ವಾದವನ್ನು ಆಲಿಸಿ ಎಂದು ಕೋರಿ ಸಂತ್ರಸ್ತ ಯುವತಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಇದೀಗ ಸಂತ್ರಸ್ತ ಯುವತಿ ಪರ ಖ್ಯಾತ ವಕೀಲರಾದ ಇಂದಿರಾ ಜೈಸಿಂಗ್ ಎಂಟ್ರಿ ಕೊಟ್ಟಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಸಂಚನಲ ಮೂಡಿಸಿದ್ದ ಅಶ್ಲೀಲ ಸಿಡಿ ಪ್ರಕರಣದ ಮತ್ತೊಂದು ಅಧ್ಯಾಯ ಇಂದಿರಾ ಜೈಸಿಂಗ್ ಎಂಟ್ರಿಯಿಂದ ಆರಂಭವಾಗಲಿದೆ ಎಂದೇ ಹೇಳಲಾಗುತ್ತಿದೆ. ಲಿಂಗ ಅಸಮಾನತೆ ಹಾಗೂ ಮಾನವ ಹಕ್ಕುಗಳ ಹೋರಾಟ ವಿಚಾರವಾಗಿ ಇಂದಿರಾ ಜೈಸಿಂಗ್ ಅವರು ವಿಶ್ವ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಇವರ ಸೇವೆಯನ್ನು ಗುರುತಿಸಿ 2005ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಗಿದೆ.
ರಮೇಶ್ ಜಾರಕಿಹೊಳಿ ಮೊಬೈಲ್ ಬಗ್ಗೆ ಸ್ಪೋಟಕ ಹೇಳಿಕೆ ಕೊಟ್ಟ ಶಂಕಿತ ಆರೋಪಿಗಳು
ಜೈಸಿಂಗ್ ಬೆಂಗಳೂರು ನಂಟು
ಇಂದಿರಾ ಜೈಸಿಂಗ್ 1940 ಜೂನ್ 3 ಮುಂಬೈನಲ್ಲಿ ಸಿಂಧಿ ಹಿಂದೂ ಕುಟುಂಬದಲ್ಲಿ ಜನಿಸಿದ್ದರು. ಮುಂಬೈನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಇಂದಿರಾ ಜೈ ಸಿಂಗ್ ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ 1962ರಲ್ಲಿ ಪದವಿ ಮುಗಿಸಿದ್ದರು. ಆನಂತರ ಮುಂಬಯಿ ವಿಶ್ವ ವಿದ್ಯಾಲಯದಲ್ಲಿ ಕಾನೂನು ಪದವಿ ಪೂರ್ಣಗೊಳಿಸಿದ್ದಾರೆ.ಮಾನವ ಹಕ್ಕುಗಳ ರಕ್ಷಣೆ ವಿಚಾರದಲ್ಲಿ ಇಂದಿರಾ ಜೈಸಿಂಗ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. 2018ರಲ್ಲಿ ಫಾರ್ಚ್ಯೂನ್ ಮ್ಯಾಗಝೀನ್ ಪ್ರಕಟಿಸಿದ ವಿಶ್ವದ 50 ಪ್ರಭಾವಿ ನಾಯಕರ ಪಟ್ಟಿಯಲ್ಲಿ ಇಂದಿರಾ ಜೈಸಿಂಗ್ ಕೂಡ ಒಬ್ಬರು. ಇಂದಿರಾ ಸಿಂಗ್ ಅವರದ್ದು ಮಾನವ ಹಕ್ಕುಗಳ ರಕ್ಷಣೆ ವಿಚಾರದಲ್ಲಿ ಮಾಡಿರುವ ಕಾನೂನು ಸಮರದಲ್ಲಿ ಎತ್ತಿದ ಕೈ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಅಡಿಷನಲ್ ಸಾಲಿಸಟರ್ ಜನರಲ್ ಹುದ್ದೆ ಅಲಂಕರಿಸಿದ ಪ್ರಥಮ ಮಹಿಳಾ ವಕೀಲರು ಎಂಬ ಕೀರ್ತಿ ಜೈಸಿಂಗ್ ಅವರದ್ದು.
ಜಾರಕಿಹೊಳಿ ಪ್ರಕರಣ ಸಂಬಂಧ
ಜಾರಕಿಹೊಳಿ ಪ್ರಕರಣ ಸಂಬಂಧ ಸಂತ್ರಸ್ತ ಯುವತಿ ಪರ ಇಂದಿರಾ ಜೈಸಿಂಗ್ ಪ್ರತಿನಿಧಿಸಿದ್ದಾರೆ. ಎಸ್ಐಟಿ ತನಿಖೆ ಪ್ರಶ್ನಿಸಿ ಸಂತ್ರಸ್ತ ಯುವತಿ ಸಲ್ಲಿಸಿರುವ ಅರ್ಜಿ ಹಾಗೂ ಪಿಐಎಲ್ ಅರ್ಜಿ ವಿಚಾರವಾಗಿ ವಾದ ಮಂಡಿಸಲಿದ್ದಾರೆ. ಸಿಡಿ ಪ್ರಕರಣ ಸಂಬಂಧ ಯುವತಿ ಪರ ವಾದ ಮಂಡಿಸಲು ಅನುಮತಿ ನೀಡುವಂತೆ ಕೋರಿದ್ದಾರೆ. ಹೈಕೋರ್ಟ್ ಅನುಮತಿ ಇಲ್ಲದೇ ತನಿಖೆ ಮುಗಿಸಬಾರದು ಎಂದು ಇಂದಿರಾ ಜೈಸಿಂಗ್ ವಾದ ಮಂಡಿಸಿದ್ದಾರೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಿದ ಅಡ್ವೋಕೇಟ್ ಜನರಲ್ ಅರವಿಂದ ನಾವಡಗಿ ತನಿಖೆ ಇನ್ನೂ ಮುಗಿದಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಇದರ ಬೆನ್ನಲ್ಲೇ ಸಿಬಿಐ ತನಿಖೆ ಕೋರಿ ಸಲ್ಲಿಸಿರುವ ಅರ್ಜಿಗೆ ರಮೇಶ್ ಜಾರಕಿಹೊಳಿ ಪರ ವಕೀಲ ಸಿ.ವಿ. ನಾಗೇಶ್ ಲಿಖಿತ ಹೇಳಿಕೆ ಮೂಲಕ ಆಕ್ಷೇಪಣೆ ಸಲ್ಲಿಸಿದ್ದಾರೆ. ಇದೀಗ ಜಾರಕಿಹೊಳಿ ಪ್ರಕರಣದಲ್ಲಿ ಇಂದಿರಾ ಜೈಸಿಂಗ್ ಎಂಟ್ರಿ ಕೊಟ್ಟಿರುವುದು ತೀವ್ರ ಕುತೂಹಲ ಕೆರಳಿಸಿದೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಸಿಡಿ ಶಂಕಿತರು ಎಸ್ಐಟಿ ವಿಚಾರಣೆಗೆ ಹಾಜರು!
ರಾಜಕೀಯ ಗೆಲುವಿನ ಪ್ರತಿಷ್ಠೆ
ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಸ್ಫೋಟ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಾನಾ ಆಯಾಮ ಪಡೆದುಕೊಂಡಿತು. ಸಂತ್ರಸ್ತ ಯುವತಿ ದೂರು ನೀಡದೇ ನಾಪತ್ತೆಯಾಗಿದ್ದರು. ರಮೇಶ್ ಜಾರಕಿಹೊಳಿ ಇದೊಂದು ಷಡ್ಯಂತ್ರ, ಬ್ಲಾಕ್ ಮೇಲ್ ಎಂದು ಆರೋಪಿಸಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದರ ಬೆನ್ನಲ್ಲೇ ರಚನೆಯಾದ ಎಸ್ಐಟಿ ತನಿಖೆ ಆರಂಭಿಸುತ್ತಿದ್ದಂತೆ ಸಂತ್ರಸ್ತ ಯುವತಿ ಅಖಾಡಕ್ಕೆ ಇಳಿದಿದ್ದರು. ನನಗೆ ಅನ್ಯಾಯವಾಗಿದೆ. ಕೆಲಸ ಕೊಡಿಸುವ ಆಮಿಷ ತೋರಿಸಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದ ಮುಂದೆ ಹೇಳಿಕೆ ದಾಖಲಿಸಿದರು. ಸಂತ್ರಸ್ತ ಯುವತಿ ನೀಡಿದ ದೂರನ್ನು ದಾಖಲಿಸಿಕೊಂಡ ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣವನ್ನು ಎಸ್ಐಟಿ ತಂಡಕ್ಕೆ ಹಸ್ತಾಂತರಿಸಿದರು. ಆನಂತರ ಜಾರಕಿಹೊಳಿ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿತ್ತು. ನನ್ನ ಸಿಡಿ ಪ್ರಕರಣದ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ ಎಂದು ಕೈ ಪಕ್ಷದ ಪ್ರಭಾವಿ ನಾಯಕರ ಹೆಸರನ್ನು ಪ್ರಸ್ತಾಪಿಸಿ ಕೆಟ್ಟ ಪದಗಳನ್ನು ಬಳಸಿದರು. ಅಂದಿನಿಂದ ದಿನಕ್ಕೊಂದು ಸ್ವರೂಪ ಪಡೆಯಿತು. ಈ ನಾಟಕ ನೋಡಿದ ವಕೀಲರೊಬ್ಬರು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಎಸ್ಐಟಿ ಅಧಿಕಾರಿಗಳ ತನಿಖೆ
ಎಸ್ಐಟಿ ಅಧಿಕಾರಿಗಳ ತನಿಖೆ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿ ಸಂತ್ರಸ್ತ ಯುವತಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸಿಬಿಐ ತನಿಖೆ ಕೋರಿ ಸಲ್ಲಿಸಿರುವ ಅರ್ಜಿ ಕೂಡ ವಿಚಾರಣೆ ಹಂತದಲ್ಲಿದೆ. ಸಿಬಿಐ ತನಿಖೆ ಬೇಡ ಎಂದು ರಮೇಶ್ ಜಾರಕಿಹೊಳಿ ಪರ ವಕೀಲರು ಕೂಡ ವಾದ ಮಂಡಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಖ್ಯಾತ ವಕೀಲರಾದ ಇಂದಿರಾ ಜೈ ಸಿಂಗ್ ಎಂಟ್ರಿ ಕೊಟ್ಟಿದ್ದಾರೆ. ಸಂತ್ರಸ್ತ ಯುವತಿಯೇ ಇಂದಿರಾ ಜೈಸಿಂಗ್ ಅವರನ್ನು ನಿಯೋಜಿಸಿಕೊಂಡರೇ? ಇಲ್ಲ, ಪ್ರಕರಣದ ಬೆಳವಣಿಗೆ ನೋಡಿ ಇಂದಿರಾ ಜೈಸಿಂಗ್ ಸ್ವಯಂ ಪ್ರೇರಿತವಾಗಿ ನ್ಯಾಯ ಕೊಡಿಸಲು ಎಂಟ್ರಿಕೊಟ್ಟರೇ? ಇಲ್ಲವೇ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ರಾಜಕಾರಣಿಗಳೇ ಈ ಪ್ರಕರಣ ಪ್ರತಿಷ್ಠೆಯನ್ನಾಗಿ ಪಡೆದುಕೊಂಡಿದ್ದರಿಂದ ಇಂದಿರಾ ಜೈಸಿಂಗ್ ಆಗಮಿಸಿದರೇ ಎಂಬ ಪ್ರಶ್ನೆ ಎದ್ದಿದೆ. ಅಂತೂ ದೇಶದ ಮಟ್ಟಿಗೆ ಮಾವನ ಹಕ್ಕು ರಕ್ಷಣೆ ವಿಚಾರದಲ್ಲಿ ಖ್ಯಾತಿ ಪಡೆದಿರುವ ಇಂದಿರಾ ಜೈಸಿಂಗ್ ರಾಜಕೀಯ ಕೆಸೆರೆರಚಾಟಕ್ಕೆ ನಾಂದಿ ಹಾಡಿದ್ದ ಪ್ರಕರಣದಲ್ಲಿ ಬಂದಿರುವುದು ವಿಶೇಷ. ಈ ಪ್ರಕರಣದ ತನಿಖೆಗೆ ಇನ್ನೊಂದು ಆಯಾಮ ಸಿಗಬಹುದೇ ಎಂಬ ಚರ್ಚೆ ಆರಂಭವಾಗಿದೆ.