ಐಎಂಎ ವಂಚನೆ: ಬಂಧಿತ ಜಿಲ್ಲಾಧಿಕಾರಿಯಿಂದ 2.5 ಕೋಟಿ ವಶ
ಬೆಂಗಳೂರು, ಜುಲೈ 12: ಐಎಂಎ ವಂಚನೆ ಪ್ರಕರಣ ತನಿಖೆ ಮಾಡುತ್ತಿರುವ ಎಸ್ಐಟಿಯು ಇತ್ತೀಚೆಗಷ್ಟೆ ಇದೇ ಪ್ರಕರಣ ಬಂಧಿಸಿರುವ ಜಿಲ್ಲಾಧಿಕಾರಿಯಿಂದ 2.5 ಕೋಟಿ ರೂಪಾಯಿಯನ್ನು ವಶಪಡಿಸಿಕೊಂಡಿದೆ.
ಬೆಂಗಳೂರು ಜಿಲ್ಲಾಧಿಕಾರಿ ವಿಜಯ್ ಶಂಕರ್ ಅವರನ್ನು ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿಯು ಸೋಮವಾರ ವಶಕ್ಕೆ ಪಡೆದಿತ್ತು, ಅವರಿಗೆ ಮೂರು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು, ಈಗ ಮತ್ತೆ ಜಿಲ್ಲಾಧಿಕಾರಿ ವಿಜಯ್ ಶಂಕರ್ ಮತ್ತು ಉಪವಿಭಾಗಾಧಿಕಾರಿ ಆಗಿದ್ದ ಎಲ್.ಸಿ.ನಾಗರಾಜಯ್ಯ ಅವರನ್ನು ಜುಲೈ 27 ರ ವರೆಗೆ ಬಂಧನ ವಿಸ್ತರಿಸಲಾಗಿದೆ.
ಐಎಂಎ ಹಗರಣ: ಎಸ್ಐಟಿಯಿಂದ ಜಿಲ್ಲಾಧಿಕಾರಿ ವಿಜಯ್ ಶಂಕರ್ ವಿಚಾರಣೆ
ವಿಜಯ್ ಶಂಕರ್ ಅವರು ಐಎಂಎ ಸಂಸ್ಥೆಯಿಂದ ಲಂಚದ ರೂಪದಲ್ಲಿ 1.5 ಕೋಟಿ ರೂಪಾಯಿ ಹಣ ಪಡೆದಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಆ ಹಣವನ್ನು ಅವರು ಬಿಲ್ಡರ್ ಒಬ್ಬರಿಗೆ ಸ್ವತ್ತು ಖರೀದಿಗೆ ನೀಡಿದ್ದರು, ಆ ಹಣವನ್ನು ಬಿಲ್ಡರ್ನಿಂದ ವಸೂಲಿ ಮಾಡಲಾಗಿದೆ.
ಇದರ ನಡುವೆ ವಿಜಯ್ ಶಂಕರ್ ಅವರು ಮತ್ತೊಂದು ಪ್ರಕರಣದಲ್ಲಿ ಒಂದು ಕೋಟಿ ರೂಪಾಯಿ ಲಂಚ ಪಡೆದು ಅದನ್ನೂ ಬಿಲ್ಡರ್ ಒಬ್ಬರಿಗೆ ನೀಡಿದ್ದರು. ಎಸ್ಐಟಿಯು ಆ ಹಣವನ್ನೂ ವಸೂಲಿ ಮಾಡಿದ್ದು, ಒಟ್ಟಾರಿ ಜಿಲ್ಲಾಧಿಕಾರಿ ವಿಜಯ್ಶಂಕರ್ ಅವರಿಂದ 2.5 ಕೋಟಿ ಹಣ ವಶ ಪಡಿಸಿಕೊಳ್ಳಲಾಗಿದೆ.
ಐಎಂಎ ಹಗರಣ : ಜಿಲ್ಲಾಧಿಕಾರಿ 3 ದಿನಗಳ ಕಾಲ ಎಸ್ಐಟಿ ವಶಕ್ಕೆ
ಇದರ ಜೊತೆಗೆ, ಅಡೋನಿ ಎಂಬ ಸಂಸ್ಥೆಯ ಜೊತೆಗೆ ಐಎಂಎ ಯು ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ ಫ್ಲೈ ಓವರ್ ನಿರ್ಮಾಣ ಕಾಮಗಾರಿಯನ್ನು ನಡೆಸಲು ಗುತ್ತಿಗೆ ಪಡೆದುಕೊಂಡಿತ್ತು. ಆದರೆ ಈಗ ಅಡೋನಿ ಸಂಸ್ಥೆಯು ಡಿಡಿ ರೂಪದಲ್ಲಿ 1.5 ಕೋಟಿ ಹಣವನ್ನು ತನಿಖಾ ತಂಡದ ವಶಕ್ಕೆ ನೀಡಿದೆ.
'ಶಾಸಕ ರೋಷನ್ ಬೇಗ್ ರಿಂದ 400 ಕೋಟಿ ರು ವಸೂಲಿ ಮಾಡಿ'
ಐಎಂಎ ಯ ಸ್ವತ್ತಿನ ನಕಲಿ ದಾಖಲೆ ಸೃಷ್ಠಿಸಿ ಅತಿಕ್ರಮಣ ಮಾಡಿದ್ದ ಇಬ್ಬರು ವ್ಯಕ್ತಿಗಳನ್ನು ಸಹ ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ. ಮುನೀರ್ ಅಲಿಯಾಸ್ ಗನ್ ಮುನೀರ್ ಮತ್ತು ಬ್ರಿಗೇಡ್ ಬಾಬು ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.