ಕೆಆರ್ ಮಾರ್ಕೆಟ್ ಫ್ಲೈಓವರ್ ಮತ್ತೆ ಅರ್ಧ ಬಂದ್
ಬೆಂಗಳೂರು, ನವೆಂಬರ್ 21: ಅರ್ಧ ಕಾಮಗಾರಿ ಮುಗಿಸಿ ಮರೆತೇಬಿಟ್ಟಿದ್ದ ಸಿರ್ಸಿ ಮೇಲ್ಸೇತುವೆ ಕಾಮಗಾರಿ ಮತ್ತೀಗ ಮುನ್ನೆಲೆಗೆ ಬಂದಿದೆ.
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಮೈಸೂರು ರಸ್ತೆಯ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಯ ಒಂದು ಮಾರ್ಗದ ರಸ್ತೆಯನ್ನು ಮಾತ್ರ ದುರಸ್ತಿಗೊಳಿಸಿ ಸುಮ್ಮನಾಗಿದ್ದ ಬಿಬಿಎಂಪಿ ಸಾರ್ವಜನಿಕರ ಒತ್ತಾಯದ ಮೇರೆಗೆ ಮತ್ತೆ ಕಾಮಗಾರಿ ಕೈಗೆತ್ತಿಕೊಂಡಿದೆ.
10 ದಿನಗಳ ಕಾಲ ಸುಮನಹಳ್ಳಿ ಮೇಲ್ಸೇತುವೆ ಬಂದ್, ಪರ್ಯಾಯ ಮಾರ್ಗ?
ಸುಮಾರು 2.65 ಕಿ.ಮೀ ಉದ್ದವಿರುವ ಮೇಲ್ಸೇತುವೆಯ ದುರಸ್ತಿಗೆ 4.30 ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, ನಾಗೇಶ್ ಮಾಯಣ್ಣ ಸಾಯಿ ತ್ರಿಷಾ ಇನ್ಫ್ರಾ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಕಾಮಗಾರಿ ಗುತ್ತಿಗೆ ನೀಡಲಾಗಿದೆ. ಈ ಅವಧಿಯಲ್ಲಿ ಮೇಲುರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ.
ಪೊಲೀಸರ ಅನುಮತಿ ಬೇಕು
ಪೊಲೀಸರ ಅನುಮತಿ ಸಿಕ್ಕರೆ ಇನ್ನು ನಾಲ್ಕೈದು ದಿನಗಳಲ್ಲಿ ದುರಸ್ತಿ ಕಾರ್ಯ ಆರಂಭಿಸಲಾಗುವುದು, ಸುಮಾರು 40 ದಿನಗಳ ಕಾಲ ಮೈಸೂರು ರಸ್ತೆಯಿಂದ ಕೆಆರ್ ಮಾರುಕಟ್ಟೆ ಪುರಭವನದಕಡೆಗೆ ಸಾಗುವ ಮೇಲ್ಸೇತುವೆ ಮಾರ್ಗವನ್ನು ಬಂದ್ ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಏಕಾಏಕಿ ಫ್ಲೈಓವರ್ ದುರಸ್ತಿಗೆ ಮುಂದಾಗಿದ್ದ ಬಿಬಿಎಂಪಿ
ಬಿಬಿಎಂಪಿ ಅಧಿಕಾರಿಗಳು ಕೆಲವು ದಿನಗಳ ಹಿಂದೆ ಏಕಾಏಕಿ ಮತ್ತೊಂದು ಬದಿಯ ಮೇಲ್ಸೇತುವೆ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದರು. ಇದಕ್ಕೆ ಪೊಲೀಸರು ಅನುಮತಿ ನೀಡದ ಕಾರಣ ದುರಸ್ತಿ ಕಾರ್ಯ ಮುಂದೂಡಿದ್ದರು. ಇದೀಗ ದುರಸ್ತಿ ಕಾರ್ಯ ಆರಂಭಿಸಲು ಪಾಲಿಕೆ ಪೊಲೀಸರಿಗೆ ಪತ್ರ ಬರೆದಿದೆ.
ಮೇಲ್ಸೇತುವೆ ದುರಸ್ತಿಗೆ 4.30 ಕೋಟಿ ಟೆಂಡರ್
ಸಿರ್ಸಿ ಸರ್ಕಲ್ ಮೇಲ್ಸೇತುವೆ ದುರಸ್ತಿಗೆ 4.30 ಕೋಟಿ ರೂ ಟೆಂಡರ್ ನೀಡಿದ್ದ ಬಿಬಿಎಂಪಿ, 2018ರ ಡಿಸೆಂಬರ್ನಲ್ಲಿ ಪುರಭವನದ ಮುಂಭಾಗದಿಂದ ರಾಯಣ್ಣ ವೃತ್ತ ಮತ್ತು ಮೈಸೂರು ರಸ್ತೆ ಕಡೆಗೆ ಹೋಗುವ ಮಾರ್ಗದ ದುರಸ್ತಿ ಆರಂಭಿಸಿ ಮಾರ್ಚ್ ವೇಳೆಗೆ ಮುಗಿಸಿತ್ತು.
ಮತ್ತೊಂದು ಮಾರ್ಗದ ಮೇಲ್ಸೇತುವೆ ಕಾಮಗಾರಿ
ಈಗ ಮೈಸೂರು ರಸ್ತೆಯಿಂದ ಕೆಆರ್ ಮಾರುಕಟ್ಟೆ ಪುರಭವನ ಕಡೆಗೆ ಹಾದು ಹೋಗುವ ಮತ್ತೊಂದು ಮಾರ್ಗದ ದುರಸ್ತಿ ಕಾರ್ಯ ಕೈಗೊಳ್ಳಬೇಕಿತ್ತು. ಆದರೆ ಮೈಸೂರು ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದ್ದ ಕಾರಣ ಪೊಲೀಸರು ಅನುಮತಿ ನೀಡಿರಲಿಲ್ಲ.