ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅಮಾನತು
ಬೆಂಗಳೂರು, ಮೇ 23: ರೌಡಿ ಶೀಟರ್ ಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ (ಐಪಿಎಸ್) ಅಲೋಕ್ ಕುಮಾರ್ ಅವರನ್ನು ಅಮಾನತುಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
ಒಂದಂಕಿ ಲಾಟರಿ ದಂಧೆಯ ವಿಚಾರದಲ್ಲಿ ಅಲೋಕ್ ಕುಮಾರ್ ಹೆಸರು ನೇರವಾಗಿ ಕೇಳಿ ಬಂದಿರುವ ಹಿನ್ನಲೆಯಲ್ಲಿ ಮುಂದಿನ ಆದೇಶದವರೆಗೆ ಸರಕಾರ ಅವರ ಸೇವೆಯನ್ನು ಹಿಂದಕ್ಕೆ ಪಡೆದಿದೆ. (ಲಾಟರಿ ಹಗರಣ : ಎಚ್ಡಿಕೆ ಸಿಡಿಸಿದ್ರು ಬಾಂಬ್)
ಒಂದಂಕಿ ಲಾಟರಿ ದಂಧೆಯ ಕಿಂಗ್ ಪಿನ್ ಎಂದೇ ಹೇಳಲಾಗುವ ಪಾರಿರಾಜನ್ ಜೊತೆಗೆ ಅಲೋಕ್ ಕುಮಾರ್ ನಿರಂತರ ಸಂಪರ್ಕದಲ್ಲಿದ್ದು, ಅವನನ್ನು ರಕ್ಷಿಸುವ ಕೆಲಸವನ್ನು ಅಲೋಕ್ ಕುಮಾರ್ ಮಾಡಿದ್ದಾರೆ ಎನ್ನುವ ಸಿಐಡಿ ಮಧ್ಯಂತರ ವರದಿಯ ಹಿನ್ನಲೆಯಲ್ಲಿ ಸರಕಾರ ಈ ಕ್ರಮ ತೆಗೆದುಕೊಂಡಿದೆ.
ಒಂದಂಕಿ ಲಾಟರಿ ಜೊತೆ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಗೂ ಹಿರಿಯ ಪೊಲೀಸ್ ಅಧಿಕಾರಿಗಳು ಕುಮ್ಮಕ್ಕು ನೀಡಿದ್ದಾರೆ ಎನ್ನುವ ಮಾಹಿತಿ ಸಿಐಡಿ ತನಿಖೆಯಲ್ಲಿ ಬಹಿರಂಗವಾಗಿತ್ತು.
ಪಾರಿರಾಜನ್ ಜೊತೆ ನಾನು ಸಂಪರ್ಕದಲ್ಲಿ ಇದ್ದದ್ದು ನಿಜ, ಆದರೆ ಆತ ಲಾಟರಿ ದಂಧೆಯಲ್ಲಿ ಶಾಮೀಲಾಗಿದ್ದ ಎನ್ನುವುದು ನನಗೆ ತಿಳಿದಿರಲಿಲ್ಲ. ಒಂದಂಕಿ ಲಾಟರಿ ಅಥವಾ ಐಪಿಎಲ್ ಬೆಟ್ಟಿಂಗ್ ನಲ್ಲಿ ನನ್ನ ಪಾತ್ರವೇನೂ ಇಲ್ಲ. ಈ ಬಗ್ಗೆ ಯಾವುದೇ ತನಿಖೆಗೆ ನಾನು ಸಿದ್ದ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.
ಒಂದಂಕಿ ಲಾಟರಿ ಮತ್ತು ಐಪಿಎಲ್ ಬೆಟ್ಟಿಂಗ್ ನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದಾರೆ. ಈ ಹಗರಣವನ್ನು ಸಿಬಿಐಗೆ ಸರಕಾರ ವಹಿಸಬೇಕೆಂದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.