ಒಂದಂಕಿ ಲಾಟರಿ: ನಡೆಯದ ಪ್ರಕರಣಕ್ಕೆ ಕೇಸು ದಾಖಲಿಸಿದ್ದ ಪೊಲೀಸರು!
ಬೆಂಗಳೂರು, ಫೆಬ್ರವರಿ 06: ಒಂದಂಕಿ ಲಾಟರಿ ಪ್ರಕರಣದಲ್ಲಿ ಹೆಸರು ಕೇಳಿಬಂದಿದ್ದ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಹಾಗೂ ನಿವೃತ್ತ ಎಸ್ಪಿ ಧರಣೀಂದ್ರ ನಿರಾಳರಾಗಿದ್ದಾರೆ. ಅವರಿಗೆ ಸಿಬಿಐ ಕ್ಲೀನ್ಚಿಟ್ ನೀಡಿದೆ. ವಿಶೇಷವೆಂದರೆ ಪ್ರಕರಣದ ಪ್ರಮುಖ ಆರೋಪಿ ಎನಿಸಿಕೊಂಡಿದ್ದ ಪಾಣಿರಾಜನ್ ಗೆ ಸಹ ಕ್ಲೀನ್ ಚಿಟ್ ನೀಡಲಾಗಿದೆ.
ಒಂದಂಕಿ ಲಾಟರಿ ಪ್ರಕರಣ ರಾಜ್ಯ-ದೇಶದಾದ್ಯಂತ ಭಾರಿ ಸುದ್ದಿ ಮಾಡಿತ್ತು. ನಿವೃತ್ತ ಎಸ್ಪಿ ಧರಣೀಂದ್ರ ಮತ್ತು ಐಪಿಎಸ್ ಅಧಿಕಾರಿ ಎಡಿಜಿಪಿ ಅಲೋಕ್ ಕುಮಾರ್ ಅವರನ್ನೂ ಸಹ ಆರೋಪಿಗಳನ್ನಾಗಿ ಮಾಡಿ ಎಫ್ಐಆರ್ ದಾಖಲಿಸಲಾಗಿತ್ತು. ಪ್ರಕರಣದ ಮಾಸ್ಟರ್ ಮೈಂಡ್ ಎಂದು ಪಾರಿರಾಜನ್ ಅನ್ನು ಬಂಧಿಸಲಾಗಿತ್ತು. ಆದರೆ ಈಗ ಪ್ರಕರಣವೇ ಸುಳ್ಳು ಪ್ರಕರಣ ಎಂದು ಸಿಬಿಐ ಹೇಳಿದೆ.
''ಲಾಟರಿ ನಿಷೇಧದಿಂದ ಬೀದಿಗೆ ಬಿದ್ದ 19 ಲಕ್ಷ ಮಂದಿಗೆ ನೆರವಾಗಿ"
ಪ್ರಕರಣವನ್ನು ಸಿದ್ದರಾಮಯ್ಯ ಸರ್ಕಾರ ಸಿಬಿಐ ಗೆ ವಹಿಸಿತ್ತು. ಸತತ ಐದು ವರ್ಷ ತನಿಖೆ ನಡೆಸಿದ ಸಿಬಿಐ ಚಾರ್ಜ್ಶೀಟ್ ಸಲ್ಲಿಸಿದ್ದು, ಎ1 ಆಗಿದ್ದ ಪಾರಿರಾಜನ್ ಸೇರಿ, ಅಲೋಕ್ ಕುಮಾರ್, ಧರಣೀಂದ್ರ ಅವರ ಹೆಸರನ್ನು ಚಾರ್ಜ್ಶೀಟ್ ನಿಂದ ಕೈಬಿಟ್ಟಿದೆ. ಇವರ ಮೇಲೆ ಸುಳ್ಳು ಕೇಸು ದಾಖಲಿಸಲಾಗಿದೆ ಎಂದು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹೇಳಿದೆ.
ಸುಳ್ಳು ಕೇಸು ದಾಖಲಿಸಿದ್ದ ಲಾಟರಿ ನಿಷೇಧ ದಳದ ಮಾಜಿ ಐಜಿಪಿ ಪದ್ಮನಯನ ಅವರನ್ನು ಪ್ರಮುಖ ಆರೋಪಿಯನ್ನಾಗಿಸಿ ಚಾರ್ಜ್ಶೀಟ್ ಸಲ್ಲಿಸಿದೆ. ಇದೇ ಪದ್ಮನಯನ ಅವರ ನೇತೃತ್ವದಲ್ಲಿ ಆಗ ಅಲೋಕ್ ಕುಮಾರ್, ಧರಣೀಂದ್ರ, ಪಾರಿರಾಜನ್ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ಪದ್ಮನಯನ, ಇನ್ಸ್ಪೆಕ್ಟರ್ ಕನಕಲಕ್ಷ್ಮಿ, ಜಿಟಿ ರಾಮಸ್ವಾಮಿ, ವೇಣುಗೋಪಾಲ್, ಶ್ರೀಕಂಠ ರಂಗನಾಥ್, ರವಿಪ್ರಕಾಶ್, ತಿಪ್ಪೇಸ್ವಾಮಿ, ರವಿಕುಮಾರ್, ಲೋಕೇಶ್ ಅವರುಗಳು ಸುಳ್ಳು ಪ್ರಕರಣ ದಾಖಲಿಸಿದ್ದಾರೆಂದು ಸಿಬಿಐ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದೆ.
ಪ್ರಕರಣದ ಬಗ್ಗೆ ಮಾತನಾಡಿರುವ ಅಲೋಕ್ ಕುಮಾರ್ ಅವರು, 'ಈಗ ನನಗೆ ನ್ಯಾಯ ಸಿಕ್ಕಿದೆ, ನಾನೇನೋ ಹಗರಣ ಮಾಡಿಬಿಟ್ಟಿದ್ದೇನೆ ಎಂದು ಪ್ರಚಾರ ಮಾಡಿದ್ದರು, ಆದರೆ ಈಗ ಜನರಿಗೆ ಸತ್ಯ ಅರ್ಥವಾಗಿದೆ' ಎಂದು ಹೇಳಿದ್ದಾರೆ.
ಲಾಟರಿ ನಿಷೇಧ ದಳದ ಅಧಿಕಾರಿಗಳು ಪದ್ಮನಯನ ಆದೇಶದಂತೆ ವಿಜಯನಗರದ ಸರ್ಕಾರಿ ಮುದ್ರಣಾಲಯದಲ್ಲಿ ಲಾಟರಿಗಳನ್ನು ಮುದ್ರಿಸಿ ಪಾರಿರಾಜನ್ ಮನೆಯಲ್ಲಿಟ್ಟು ನಕಲಿ ರೇಡ್ ಮಾಡಿ ಪ್ರಕರಣ ದಾಖಲಿಸಿದ್ದರು ಎಂದು ಈ ಹಿಂದೆ ತನಿಖೆಯಿಂದ ತಿಳಿದು ಬಂದಿತ್ತು.