ಸಿಲಿಕಾನ್ ಸಿಟಿ ಜತೆ ಗಾರ್ಡನ್ ಸಿಟಿ ಕೂಡ ಅಗತ್ಯ: ವೀರೇಂದ್ರ ಹೆಗ್ಗಡೆ
ಬೆಂಗಳೂರು, ಜನವರಿ 19 : ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾಸಂಘ ಶುಕ್ರವಾರ ಲಾಲ್ ಬಾಗ್ ನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಏರ್ಪಡಿಸಿದ್ದ 207ನೇ ಫಲಪುಷ್ಪ ಪ್ರದರ್ಶನವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು.
ಉದ್ಘಾಟನೆ ಬಳಿಕ ಮಾತನಾಡಿದ ಅವರು, ಕೇವಲ ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ ಗಳು ಎತ್ತರದ ಕಟ್ಟಡಗಳು ಮಾತ್ರ ನಗರದ ಸೌಂದರ್ಯವಲ್ಲ, ಪುಷ್ಪನಗರಿ ಇದೀಗ ತಂತ್ರಜ್ಞಾನ ನಗರಿಯಾಗಿ ಮಾರ್ಪಾಡಾಗುತ್ತಿರುವುದು ಕಳವಳದ ಸಂಗತಿ ಎಂದು ಅಭಿಪ್ರಾಯಪಟ್ಟರು.
ಲಾಲ್ ಬಾಗ್ ಪುಷ್ಪ ಪ್ರದರ್ಶನ: ಈ ಬಾರಿ ಭಕ್ತಿ ಭಾವಗಳ ಸಮ್ಮಿಲನ
ಪುಷ್ಪ ನಗರಿ ತನ್ನ ಹೆಸರನ್ನು ಕಳೆದುಕೊಂಡು ಇದೀಗ ತಂತ್ರಜ್ಞಾನ ನಗರಿ ಎಂದು ಕರೆಸಿಕೊಳ್ಳು ಪ್ರಾರಂಭಿಸಿದೆ. ಮತ್ತೆ ಸುಂದರವಾದ ಪುಷ್ಪನಗರವನ್ನಾಗಿ ಮಾಡಬೇಕಿದೆ. ಪ್ರತಿಯೊಂದು ಸರ್ಕಾರಿ ಅಥವಾ ಖಾಸಗಿ ಕಚೇರಿ ಎದುರು ಹೂವಿನ ಗಿಡ ಅಥವಾ ಸಸ್ಯಗಳನ್ನು ಕಡ್ಡಾಯವಾಗಿ ನೆಡಬೇಕು ಎನ್ನುವ ಕಾನೂನು ತರುವ ಅಗತ್ಯವಿದೆ ಎಂದರು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಮಾತನಾಡಿ, ಜಗತ್ತನ್ನು ಗೆಲ್ಲಲು ತ್ಯಾಗ ಬೇಕು, ಬದುಕು ಸಾರ್ಥಕತೆ ಕಾಣಬೇಕಾದರೆ ತ್ಯಾಗವನ್ನು ಮೈಗೂಡಿಸಿಕೊಳ್ಳಬೇಕು, ಕೇವಲ ಸುಂದರ ಹೂವುಗಳು ನೋಡಿ ಸಂತಸ ಪಡುವುದರ ಜತೆಗೆ ಹೃದಯದಲ್ಲಿ ತ್ಯಾಗವೆನ್ನುವ ಹೂವನ್ನು ಅರಳಿಸಬೇಕಿದೆ. ವ್ಯಕ್ತಿ ವ್ಯಕ್ತಿಯ ಮಧ್ಯೆ ಸಾಮರಸ್ಯವನ್ನು ಹುಟ್ಟುಹಾಕುವ ಅಗತ್ಯವಿದೆ ಎಂದು ಹೇಳಿದರು.
ಕೃಷಿ ಮಾರುಕಟ್ಟೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಲೋಕೋಪಯೋಗಿ ಸಚಿವ ಮಹದೇವಪ್ಪ, ಮೇಯರ್ ಸಂಪತ್ ರಾಜ್, ಮೈಸೂರು ಉದ್ಯಾನ ಕಲಾಸಂಘ ಉಪಾಧ್ಯಕ್ಷ ಬಿ.ಆರ್.ವಾಸುದೇವ್ ಹಾಜರಿದ್ದರು.