ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ: ಸಿಎಂ ಪ್ಯಾಕೇಜ್ ಬಗ್ಗೆ ಸಿದ್ಧರಾಮಯ್ಯ ಟೀಕೆ
ಬೆಂಗಳೂರು, ಮೇ 6: ಕೊರೊನಾ ವೈರಸ್ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕರು, ಚಾಲಕರು, ರೈತರು ಸೇರಿ ಇತರೆ ವರ್ಗದ ಜನರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು 1610 ಕೋಟಿ ಮೌಲ್ಯದ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ.
ಆದರೆ ಈ ವಿಶೇಷ ಪ್ಯಾಕೇಜ್ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದು, 'ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ' ಇದ್ದಂತೆ ಇದು ಎಂದಿದ್ದಾರೆ.
ಕೊರೊನಾ ಸಂಕಷ್ಟ: 1,610 ಕೋಟಿ ರೂ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ
ಸಿಎಂ ಘೋಷಣೆ ಮಾಡಿರುವ ಆರ್ಥಿಕ ನೆರವಿನ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ''ನಾವು ಸರ್ಕಾರಕ್ಕೆ ಒತ್ತಾಯ ಮಾಡಿದ್ದು ಬೇರೆ, ಆದರೆ ಅವರು ಜನರಿಗೆ ನೀಡುತ್ತಿರುವುದು ಬೇರೆ'' ಎಂದು ಕಾಲೆಳೆದಿದ್ದಾರೆ. ಮುಂದೆ ಓದಿ....
ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ
''ಕೊರೊನಾ ಹಾವಳಿಯಿಂದ ನೊಂದವರಿಗೆ ರೂ.50,000 ಕೋಟಿ ಮೊತ್ತದ ಪ್ಯಾಕೇಜ್ ಘೋಷಿಸಲು ಸರಣಿ ಮನವಿ ಪತ್ರಗಳ ಮೂಲಕ ಒತ್ತಾಯಿಸಿದ್ದೆ. ಮುಖ್ಯಮಂತ್ರಿ ಅವರು 1,610 ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದ್ದಾರೆ. ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ. ಕೇರಳ ಘೋಷಿರುವುದು ರೂ.20,000 ಕೋಟಿ ಪ್ಯಾಕೇಜ್, ನೆನಪಿರಲಿ'' ಎಂದು ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ.
|
ಅಸಂಘಟಿತ ಕ್ಷೇತ್ರ ಅನ್ಯಾಯ
''ಅಸಂಘಟಿತ ಕ್ಷೇತ್ರದ ಕ್ಷೌರಿಕ, ದೋಬಿ, ಬಡಗಿ, ಅಕ್ಕಸಾಲಿಗ, ಚಮ್ಮಾರ,ಕಮ್ಮಾರ, ಅರ್ಚಕ,ಶಿಲ್ಪಿ ಹೀಗೆ ವಿವಿಧ ವೃತ್ತಿಯವರಿಗೆ ಲಾಕ್ಡೌನ್ ಕಾಲದಲ್ಲಿ ಮಾಸಿಕ ರೂ.10,000 ನೀಡಬೇಕೆಂದು ಒತ್ತಾಯಿಸಿದ್ದೆ. ಮುಖ್ಯಮಂತ್ರಿಗಳು ಕ್ಷೌರಿಕರು/ದೋಬಿಗಳಿಗೆ 1 ತಿಂಗಳಿಗೆ ಮಾತ್ರ ರೂ.5000 ನೀಡಿ ಉಳಿದವರನ್ನು ನಿರ್ಲಕ್ಷಿಸಿದ್ದಾರೆ'' ಎಂದು ಟೀಕಿಸಿದ್ದಾರೆ.
ಹೂ ಬೆಳೆಗಾರರು, ನೇಕಾರರಿಗೆ ಮೋಸ
* ಹೂ ಬೆಳೆಗಾರರು ಎಕರೆಗೆ ಅಂದಾಜು 50 ಲಕ್ಷ ರೂಪಾಯಿ ಖರ್ಚು ಮಾಡಿರುತ್ತಾರೆ. ಮುಖ್ಯಮಂತ್ರಿ ಅವರು, ಎಕರೆಗೆ ರೂ.25,000 ಪರಿಹಾರ ಘೋಷಿಸಿರುವುದು ಅನ್ಯಾಯ. ಅವರ ನಷ್ಟದ ಅರ್ಧದಷ್ಟನ್ನಾದರೂ ತುಂಬಿಕೊಡಬೇಕು.
* ನೇಕಾರರಿಗೆ ಲಾಕ್ ಡೌನ್ ಅವಧಿಯಲ್ಲಿ ತಿಂಗಳಿಗೆ 5000 ರೂಪಾಯಿ ಆರ್ಥಿಕ ನೆರವಿನ ಜೊತೆಗೆ ಹಳೆ ಸಾಲದ EMI ಮನ್ನಾ ಮತ್ತು ಕಡಿಮೆ ಬಡ್ಡಿಯಲ್ಲಿ ಹೊಸ ಸಾಲ ನೀಡಬೇಕೆಂದು ಸಲಹೆ ನೀಡಿದ್ದೆ. ಮುಖ್ಯಮಂತ್ರಿಗಳು ಒಂದು ತಿಂಗಳಿಗೆ 2000 ರೂಪಾಯಿ ನೆರವು ಘೋಷಿಸಿ ಉಳಿದೆಲ್ಲ ಬೇಡಿಕೆಗಳನ್ನು ತಿರಸ್ಕರಿಸಿದ್ದಾರೆ.
ಸರ್ಕಾರದಿಂದ ಕಾರ್ಮಿಕ ದ್ರೋಹ
ರಾಜ್ಯದ ಸುಮಾರು 22 ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಲಾಕ್ಡೌನ್ ಕಾಲದಲ್ಲಿ ಮಾಸಿಕ ರೂ10000 ನೆರವಿಗೆ ಒತ್ತಾಯಿಸಿದ್ದೆ. ಅವರದ್ದೇ ಕಲ್ಯಾಣಕ್ಕಾಗಿ ಸಂಗ್ರಹಿಸಲಾದ ರೂ.9000 ಕೋಟಿ ಮೊತ್ತದ ನಿಧಿ ಇದೆ. ಹೀಗಿದ್ದರೂ ಕೇವಲ 11.8 ಲಕ್ಷ ಕಾರ್ಮಿಕರಿಗೆ 1 ತಿಂಗಳಿಗೆ ರೂ. 2,000 ನೀಡಿರುವುದು ಕಾರ್ಮಿಕ ದ್ರೋಹ.
|
ಉದ್ಯಮ ಕ್ಷೇತ್ರದ ನಿರ್ಲಕ್ಷ್ಯ
ಸಣ್ಣ/ಮಧ್ಯಮ ಕೈಗಾರಿಕೆಗಳಿಗೆ ಇಎಂಐ ಮನ್ನಾ,4%ಬಡ್ಡಿದರದಲ್ಲಿ ಹೊಸಸಾಲ, ಕಡಿಮೆ ಬೆಲೆಗೆ ಕಚ್ಛಾವಸ್ತು ಪೂರೈಕೆ ಸೇರಿದಂತೆ 10,000 ರೂ.ಗಳ ಪ್ಯಾಕೇಜ್ ಘೋಷಿಸಲು ಹೇಳಿದ್ದೆ. 2 ತಿಂಗಳ ವಿದ್ಯುತ್ ಬಿಲ್ ನಲ್ಲಿ ರಿಯಾಯಿತಿಯನ್ನಷ್ಟೇ ಘೋಷಿಸಿರುವ ಮುಖ್ಯಮಂತ್ರಿಗಳು ಉದ್ಯಮ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ರೈತರ ಕಡೆಗಣನೆ
ರೈತರ ಬೆಳೆಗೆ ಯೋಗ್ಯ ಬೆಲೆನೀಡಲು ರೂ.5000 ಕೋಟಿ ಮೊತ್ತದ ಆವರ್ತನಿಧಿ ಸ್ಥಾಪಿಸಿ, ಬೆಳೆಗಳನ್ನು ಗ್ರಾಮಪಂಚಾಯತ್ ಮಟ್ಟದ ಖರೀದಿ ಕೇಂದ್ರದ ಮೂಲಕ ಖರೀದಿಸುವಂತೆ ಸಲಹೆ ನೀಡಿದ್ದೆ. ಇವ್ಯಾವುದನ್ನು ಪರಿಗಣಿಸದೆ ಮುಖ್ಯಮಂತ್ರಿ ಅವರು ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ'' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.