'ಕಾವೇರಿ'ಗಾಗಿ ಸಿದ್ದರಾಮಯ್ಯ ಪಟ್ಟು: ಸರ್ಕಾರಕ್ಕೆ ಪತ್ರ
ಬೆಂಗಳೂರು, ಅಕ್ಟೋಬರ್ 11: ಎರಡು ಸರ್ಕಾರಗಳು ಬದಲಾದರೂ ಸಿದ್ದರಾಮಯ್ಯ ಅವರು ಕಾವೇರಿ ನಿವಾಸವನ್ನು ಬಿಡಲು ಮನಸ್ಸು ಮಾಡಿಲ್ಲ.
ಮುಖ್ಯಮಂತ್ರಿ ಆದಾಗಿನಿಂದಲೂ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿಯೇ ಇದ್ದಾರೆ. ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯ ಗೆ ಯಾವುದೇ ಶಾಸನಬದ್ಧ ಸ್ಥಾನ ಇರದಿದ್ದರೂ ಸಹ ಅವರು ಕಾವೇರಿ ನಿವಾಸ ಬಿಟ್ಟು ಕದಲಿರಲಿಲ್ಲ. ಈಗ ಬಿಜೆಪಿ ಸರ್ಕಾರ ಬಂದಮೇಲೂ ಕಾವೇರಿ ನಿವಾಸಕ್ಕೆ ಅವರು ಪಟ್ಟು ಹಿಡಿದಿದ್ದಾರೆ.
ಮುಖ್ಯಮಂತ್ರಿ ಆಗಿದ್ದವರಿಗೆ ಕಾವೇರಿ ನಿವಾಸ ನೀಡುವುದು ವಾಡಿಕೆ. ಒಂದು ಮುಕ್ಕಾಲು ವರ್ಷದಿಂದ ಸಿದ್ದರಾಮಯ್ಯ ಮಾಜಿ ಸಿಎಂ ಆಗಿದ್ದಾರೆ ಆದರೂ ಕಾವೇರಿ ಬಿಟ್ಟು ಹೋಗಲು ಮನಸ್ಸು ಮಾಡಿಲ್ಲ. ಈಗ ವಿಪಕ್ಷ ನಾಯಕ ಆಗಿರುವ ಅವರಿಗೆ ಸರ್ಕಾರವೇ ನಿವಾಸ ನೀಡಬೇಕಿದೆ. ಹಾಗಾಗಿ ಸರ್ಕಾರಕ್ಕೆ ಪತ್ರ ಬರೆದಿರುವ ಅವರು, ಕಾವೇರಿ ನಿವಾಸವನ್ನು ನನಗೇ ಕೊಟ್ಟುಬಿಡಿ ಎಂದು ಕೋರಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ಸಿಎಂ ಯಡಿಯೂರಪ್ಪ ಅವರಿಗೆ ಕಾವೇರಿ ನಿವಾಸ ನೀಡಲಾಗಿತ್ತು. ಆದರೆ ಬೆಂಗಳೂರಿನ ಡಾಲರ್ಸ್ ಕಾಲನಿಯ ಧವಳಗಿರಿ ನಿವಾಸದಲ್ಲಿರುವ ಯಡಿಯೂರಪ್ಪ ಅಲ್ಲಿಂದಲೇ ಕಾರ್ಯಚಟುವಟಿಕೆ ಮಾಡುತ್ತಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಅವರು ಕಾವೇರಿಯಲ್ಲಿಯೇ ಮುಂದುವರೆದಿದ್ದರು.
ಸಿದ್ದರಾಮಯ್ಯ ಅವರಿಗೆ ಕಾವೇರಿ ನಿವಾಸವನ್ನು ನೀಡುತ್ತಾರೆಯೋ ಅಥವಾ ಬದಲಿ ನಿವಾಸ ಕೊಡುತ್ತಾರೆಯೋ ಎಂಬುದು ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ. ಸರ್ಕಾರ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲಿದೆ.