ಅಪಪ್ರಚಾರಕ್ಕೆ ಕಿವಿಗೊಡಬೇಡಿ: ವಿವಾದಿತ ಹೇಳಿಕೆ ಬಗ್ಗೆ ಸ್ಪಷ್ಟನೆ ಕೊಟ್ಟ ಸಿದ್ದರಾಮಯ್ಯ
ಬೆಂಗಳೂರು, ನವೆಂಬರ್ 30: ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಿವಾದಿತ ಹೇಳಿಕೆ ಬಗ್ಗೆ ಸ್ಪಷ್ಟನೆಯೊಂದನ್ನು ನೀಡಿದ್ದಾರೆ.
'ಸಿದ್ದರಾಮಯ್ಯ ಅವರು ಸವಿತಾ ಸಮಾಜದ ಬಗ್ಗೆ ಕೀಳಾಗಿ ಮಾತನಾಸಿದ್ದಾರೆ' ಎಂಬುದಾಗಿ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಆದರೆ ಇದನ್ನು ಸ್ಪಷ್ಟವಾಗಿ ನಿರಾಕರಿಸಿರುವ ಸಿದ್ದರಾಮಯ್ಯ, 'ಅಪಪ್ರಚಾರಕ್ಕೆ ಕಿವಿಗೊಡಬೇಡಿ' ಎಂದು ಮನವಿ ಮಾಡಿದ್ದಾರೆ.
ಕ್ಷೌರಿಕ ವೃತ್ತಿಗೆ ಸಿದ್ದರಾಮಯ್ಯರಿಂದ ಅವಮಾನ, ಕ್ಷಮೆಗೆ ಆಗ್ರಹ
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿರುವ ಸಿದ್ದರಾಮಯ್ಯ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.
'ಹರಿಹರ ಕುಮಾರ ಪಟ್ಟಣದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ ಸವಿತಾ ಸಮಾಜದ ಬಗ್ಗೆ ಅಗೌರವವಾಗಿ ಮಾತನಾಡಿದ್ದೇನೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ ನಾನು ಅಂತಹಾ ಯಾವುದೇ ದುರುದ್ದೇಶಪೂರ್ವಕ ಮಾತುಗಳನ್ನು ಆಡಿಲ್ಲ, ಆಡಲು ಸಾಧ್ಯವೂ ಇಲ್ಲ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸವಿತಾ ಸಮಾಜ ಸೇರಿದಂತೆ ತಳಸಮುದಾಯಗಳ ಬಗೆಗಿನ ನನ್ನ ಗೌರವ ಮತ್ತು ಕಾಳಜಿ ಬರೀಯ ಮಾತುಗಳದ್ದಲ್ಲ. ಕೃತಿಯದ್ದು, ಮುಖ್ಯಮಂತ್ರಿಯಾಗಿ ನಾನು ಜಾರಿಗೆ ತಂದಿರುವ ನೂರಾರು ಕಾರ್ಯಕ್ರಮಗಳು ಇದಕ್ಕೆ ಸಾಕ್ಷಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
'ನನ್ನ ರಾಜಕೀಯ ಜೀವನದುದ್ದಕ್ಕೂ ತಳಸಮುದಾಯದ ಎಲ್ಲ ಜಾತಿಗಳು ನನ್ನನ್ನು ಪ್ರೀತಿಯಿಂದ ಅಭಿಮಾನಿಸಿ ಬೆಂಬಲಿಸಿ ಬೆಳೆಸಿವೆ. ಇದನ್ನು ಸಹಿಸಲಾರದವರು ನನ್ನ ವಿರುದ್ಧ ಇಂತಹಾ ಷಡ್ಯಂತ್ರ ಮಾಡಿದ್ದಾರೆ. ಸವಿತಾ ಸಮಾಜದ ಬಂಧುಗಳು ಇಂತಹಾ ಅಪಪ್ರಚಾರಕ್ಕೆ ಕಿವಿಗೊಡಬಾರದೆಂದು ವಿನಂತಿಸುತ್ತೇನೆ' ಎಂದು ಸಿದ್ದರಾಮಯ್ಯ ಪತ್ರದಲ್ಲಿ ಬರೆದಿದ್ದಾರೆ.