'ಕಾವೇರಿ' ನಿವಾಸ ಬಿಡುವುದು ಯಾವಾಗ?: ದಿನಾಂಕ ಹೇಳಿದ ಸಿದ್ದರಾಮಯ್ಯ
ಬೆಂಗಳೂರು, ಜನವರಿ 10: ಕಳೆದ ಆರೂವರೆ ವರ್ಷದಿಂದ ವಾಸ್ತವ್ಯ ಹೂಡಿದ್ದ 'ಕಾವೇರಿ' ನಿವಾಸವನ್ನು ಬಿಡುವುದಾಗಿ ಕೊನೆಗೂ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿ 'ಕಾವೇರಿ' ನಿವಾಸದ ವಿಷಯವಾಗಿ ಸಿದ್ದರಾಮಯ್ಯ ಕಾಲೆಳೆದಿತ್ತು. 'ಕಾವೇರಿ' ನಿವಾಸ ಬಿಡುವಂತೆ ಸೂಚಿಸಿದ್ದರೂ ಸಹ 'ಮಜಾವಾದಿ' ಸಿದ್ದರಾಮಯ್ಯ ಇನ್ನೂ ಅಲ್ಲೇ ಝಾಂಡಾ ಊರಿದ್ದಾರೆ ಎಂದು ಮೂದಲಿಸಿತ್ತು.
ಇದಕ್ಕೆ ಫೇಸ್ಬುಕ್ನಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, 'ಎಚ್.ಡಿ.ರೇವಣ್ಣ ಅವರಿಗೆ ನೀಡಿದ್ದ ನಿವಾಸವನ್ನು ಈಗ ನನಗೆ ನೀಡಲಾಗಿದೆ. ಅದು ಪ್ರಸ್ತುತ ರಿಪೇರಿ ಆಗುತ್ತಿದೆ. ರಿಪೇರಿ ಮುಗಿದ ಬಳಿಕ ನಾನು ಅಲ್ಲಿಗೆ ಸ್ಥಳಾಂತರವಾಗುತ್ತೇನೆ' ಎಂದು ಹೇಳಿದ್ದಾರೆ.
'ನನಗೆ ಹಂಚಿಕೆಯಾಗಿದ್ದ ಮನೆಯ ದುರಸ್ತಿ ನಡೆಸಿ ಜನವರಿ ಹದಿನೈದರ ಒಳಗೆ ಬಿಟ್ಟುಕೊಡುವುದಾಗಿ ಲೋಕೋಪಯೋಗಿ ಇಲಾಖೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಿಳಿಸಿದೆ. ಆದರೂ ಸಹ ಬಿಜೆಪಿ ಇಂಥಹಾ ಸುಳ್ಳು ಸುದ್ದಿಗಳನ್ನು ಹರಿಬಿಡುಟ್ಟು ವಿಕೃತಾನಂದ ಪಡೆಯುತ್ತಿದೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಹಲವು ವರ್ಷಗಳಿಂದಲೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳ ಮೀಸಲು ನಿವಾಸ 'ಕಾವೇರಿ'ಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗಲೂ ಅವರು ಅಲ್ಲಿಯೇ ಇದ್ದರು. ಯಡಿಯೂರಪ್ಪ ಸಿಎಂ ಆದಾಗಲೂ ಅವರು ಅಲ್ಲಿಯೇ ಇದ್ದರು. ನಂತರ ಅವರಿಗೆ ವಿಪಕ್ಷ ನಾಯಕರಿಗೆ ನೀಡಲಾಗುವ ನಿವಾಸ ನೀಡಿ ಅಲ್ಲಿಗೆ ಸ್ಥಳಾಂತರವಾಗುವಂತೆ ಸೂಚಿಸಲಾಗಿತ್ತು.
ಯಡಿಯೂರಪ್ಪ ಅವರು ತಮ್ಮ ನಿವಾಸ ಧವಳಗಿರಿಯಲ್ಲಿಯೇ ಇದ್ದಾರೆ. ಈಗ ಸಿದ್ದರಾಮಯ್ಯ ಕಾವೇರಿ ನಿವಾಸ ಖಾಲಿ ಮಾಡಿದರೂ ಸಹ ಆ ನಿವಾಸಕ್ಕೆ ಯಡಿಯೂರಪ್ಪ ಸ್ಥಳಾಂತರವಾಗುವ ಸಂಭವ ಕಡಿಮೆ. ಬದಲಿಗೆ ಬೇರೆ ಸಚಿವರಿಗೆ ಮನೆ ಬಿಟ್ಟುಕೊಡುವ ಸಾಧ್ಯತೆ ಇದೆ.