ಬಿಜೆಪಿ ಸರ್ಕಾರದಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ: ಸಿದ್ಧರಾಮಯ್ಯ
ಬೆಂಗಳೂರು, ಮೇ 30: ಕೊರೊನಾ ಪರಿಸ್ಥಿತಿಯ ನಡುವೆ ರಾಜ್ಯದಲ್ಲಿ ಆಗುತ್ತಿರುವ ರಾಜಕೀಯ ಚರ್ಚೆಗಳ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಪಕ್ಷದ ವಿರುದ್ಧ ಸರಣಿ ಟ್ವೀಟ್ ಮಾಡಿದ್ದಾರೆ.
''ಬಿಜೆಪಿಯ ಆಂತರಿಕ ಭಿನ್ನಮತದಲ್ಲಿ ಕಾಂಗ್ರೆಸ್ ಕೈ ಹಾಕುವುದಿಲ್ಲ. ಅವರ ಕಚ್ಚಾಟದಿಂದ ಸರ್ಕಾರ ಪತನಗೊಂಡರೆ ನಾವು ಜವಾಬ್ದಾರರಲ್ಲ.'' ಎಂದು ಸಿದ್ಧರಾಮಯ್ಯ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
ರಮೇಶ್ ಜಾರಕಿಹೊಳಿ ಪಾಪ ಸುಳ್ಳು ಹೇಳುತ್ತಾರೆ: ಸಿದ್ದರಾಮಯ್ಯ
''ನಮ್ಮ ಪಕ್ಷದ ಯಾವ ಶಾಸಕರೂ ರಾಜಿನಾಮೆ ನೀಡುವುದಿಲ್ಲ. ರಾಜ್ಯದ ಹಿತದೃಷ್ಟಿಯಿಂದ ಈ ಭ್ರಷ್ಟ ಸರ್ಕಾರ ಆದಷ್ಟು ಬೇಗ ಬಿದ್ದು ಹೋಗುವುದು ಒಳ್ಳೆಯದು'' ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.
ಸದ್ಯ, ಬಿಜೆಪಿಯಲ್ಲಿ ಆಗುತ್ತಿರುವ ಆಂತರಿಕ ಬೆಳವಣಿಗೆಗಳ ಬಗ್ಗೆ ಸಿದ್ಧರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಟ್ವಿಟ್ಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ ಎಂದು ಹೇಳಿದ್ದು, ಕಾಂಗ್ರೆಸ್ ಶಾಸಕರ ರಾಜಿನಾಮೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿಯ ಒಳಗಡೆ ಬೆಂಕಿ
''ಬಿಜೆಪಿಯ ಒಳಗಡೆ ಬೆಂಕಿ ಬಿದ್ದಿದೆ. ಬಿ.ಎಸ್.ಯಡಿಯೂರಪ್ಪ ನಮ್ಮ ನಾಯಕರಲ್ಲ, ಅವರು ಕೇವಲ ಮುಖ್ಯಮಂತ್ರಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ. ಇದರಿಂದ ರವಾನೆಯಾಗುತ್ತಿರುವ ಸಂದೇಶ ಏನು?'' ಎಂದು ಸಿದ್ಧರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಇಂತಹ ಸರ್ಕಾರ ಎಷ್ಟು ದಿನ ಬಾಳಲು ಸಾಧ್ಯ? ಎಂದಿದ್ದಾರೆ.
|
ಬಿಜೆಪಿ ಸರ್ಕಾರದಲ್ಲಿ ಇಬ್ಬರು ಮುಖ್ಯಮಂತ್ರಿಗಳು
''ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ. ಒಬ್ಬರು ನಾಮ್ ಕಾವಸ್ಥೆ ಮುಖ್ಯಮಂತ್ರಿ, ಇನ್ನೊಬ್ಬರು ತೆರೆಯ ಹಿಂದೆ ಅಧಿಕಾರ ಚಲಾಯಿಸುವ ಮುಖ್ಯಮಂತ್ರಿ. ಇಂತಹ ಮುಖ್ಯಮಂತ್ರಿ ಎಷ್ಟು ದಿನ ಅಧಿಕಾರದಲ್ಲಿರಲು ಸಾಧ್ಯ? ಕಾಂಗ್ರೆಸ್ ಶಾಸಕರು ರಾಜಿನಾಮೆ ನೀಡಲಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಸುಳ್ಳು ಹೇಳುತ್ತಿದ್ದಾರೆ. ಭಿನ್ನಮತೀಯರು ರಹಸ್ಯ ಸಭೆ ಮತ್ತು ತಮ್ಮ ಪಕ್ಷದೊಳಗಿನ ಒಳಜಗಳವನ್ನು ಮುಚ್ಚಿಕೊಳ್ಳಲು ಈ ರೀತಿ ಹೇಳುತ್ತಿದ್ದಾರೆ.'' ಎಂದು ಸಿದ್ಧರಾಮಯ್ಯ ಟ್ವೀಟ್ ಮಾಡಿದ್ದಾರೆ.
ಉಮೇಶ್ ಕತ್ತಿ ಭೇಟಿ ಪ್ರಯತ್ನ ಊಹಾಪೋಹ
''ರಮೇಶ್ ಜಾರಕಿಹೊಳಿ ನಮ್ಮ ಪಕ್ಷ ಬಿಟ್ಟು ಹೋದಾಗ ಮಹೇಶ್ ಕುಮುಟಳ್ಳಿ ಬಿಟ್ಟರೆ ಬೇರೆ ಶಾಸಕರು ಅವರ ಜೊತೆ ಇರಲಿಲ್ಲ. ಜೆಡಿಎಸ್ನ ಮೂವರು, ನಮ್ಮ ಪಕ್ಷದ 14 ಮಂದಿ ಅಧಿಕಾರ ಮತ್ತು ಹಣಕ್ಕಾಗಿ ಪಕ್ಷಾಂತರ ಮಾಡಿದ ಕಾರಣಕ್ಕಾಗಿ ಬಿಜೆಪಿ ಅಧಿಕಾರಕ್ಕೆ ಬಂತು. ಶಾಸಕ ಉಮೇಶ್ ಕತ್ತಿಯವರು ನನ್ನನ್ನು ಭೇಟಿಯಾಗಲು ಪ್ರಯತ್ನ ಮಾಡಿದ್ದರು ಎಂಬುದು ಊಹಾಪೋಹ.'' ಎಂದಿದ್ದಾರೆ.
ಕಮಿಷನ್ ಸರ್ಕಾರ
''ಉಮೇಶ್ ಕತ್ತಿ ಅವರು ನನ್ನ ಸ್ನೇಹಿತರು, ನನ್ನೊಂದಿಗೆ ಜನತಾ ಪರಿವಾರದಲ್ಲಿದ್ದರು. ನಮ್ಮ ನಡುವೆ ಈಗಲೂ ಗೆಳೆತನ, ವಿಶ್ವಾಸ ಇದೆ. ಆದರೆ ಅವರು ನನ್ನನ್ನು ಭೇಟಿಯಾಗಿಲ್ಲ. ನಮ್ಮ ಸರ್ಕಾರ ಹತ್ತು ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ನರೇಂದ್ರ ಮೋದಿಯವರು ಹೇಳಿದ್ದರು. ಈಗಿನ ಸರ್ಕಾರ ಎಷ್ಟು ಪರ್ಸೆಂಟ್ ಕಮಿಷನ್ ಸರ್ಕಾರ ಎಂಬುದನ್ನು ನಾವು ಹೇಳುವುದಲ್ಲ ಬಿಜೆಪಿಯವರೇ ಹೇಳಿಕೊಂಡು ತಿರುಗುತ್ತಿದ್ದಾರೆ. ವರ್ಗಾವಣೆಯಿಂದ ಹಿಡಿದು ನೇಮಕಾತಿವರೆಗೆ ಎಲ್ಲದಕ್ಕೂ ರೇಟ್ ಫಿಕ್ಸ್ ಆಗಿದೆ.'' ಎಂದು ಆಕ್ರೋಶ ಹೊರ ಹಾಕಿದ್ದಾರೆ.