ನಮ್ಮ ಸಾಧನೆ ಬಗ್ಗೆ ಹೊಗಳಿದ ಬಿಜೆಪಿ ಗೆ ಧನ್ಯವಾದ: ಸಿದ್ದರಾಮಯ್ಯ
ಬೆಂಗಳೂರು, ಫೆಬ್ರವರಿ 17: ವಿಪಕ್ಷ ನಾಯಕ ಸಿದ್ದರಾಮಯ್ಯ ಬಲು ಅಪರೂಪವಾಗಿ ಇಂದು ಬಿಜೆಪಿ ಗೆ ಧನ್ಯವಾದ ಹೇಳಿದ್ದಾರೆ. ಆದರೆ ಧನ್ಯವಾದದಲ್ಲೂ ಟೀಕೆ, ವ್ಯಂಗ್ಯದ ದನಿಯೇ ಇದೆ.
ಇಂದು ಜಂಟಿ ಅಧಿವೇಶನ ಆರಂಭವಾಗಿದ್ದು, ರಾಜ್ಯಪಾಲರು ಉಭಯ ಸದನ ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಸರ್ಕಾರದ ಸಾಧನೆ ಬಗ್ಗೆ ರಾಜ್ಯಪಾಲರು ಸಂತಸ ವ್ಯಕ್ತಪಡಿಸಿದ್ದಾರೆ ಹಾಗೂ ಸರ್ಕಾರದ ಬಗ್ಗೆ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ.
ರಾಜ್ಯಪಾಲರ ಭಾಷಣ ಹಾಗೂ ಅದಕ್ಕೆ ಬಿಜೆಪಿ ಪ್ರತಿಕ್ರಿಯೆಯ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, 'ನಮ್ಮ ಐದು ವರ್ಷದ ನಮ್ಮ ಐದು ವರ್ಷಗಳ ಸರ್ಕಾರದ ಸಾಧನೆಗಳನ್ನು ರಾಜ್ಯಪಾಲರ ಭಾಷಣದ ಮೂಲಕ ಗುರುತಿಸಿ,ಶ್ಲಾಘಿಸಿದ ಮತ್ತು ತಮ್ಮ ಸರ್ಕಾರದ ಸಾಧನೆಯ ಬಗ್ಗೆ ಹೇಳಿಕೊಳ್ಳಲು ಏನೂ ಇಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡ ಯಡಿಯೂರಪ್ಪ ಸರ್ಕಾರಕ್ಕೆ ಧನ್ಯವಾದಗಳು' ಎಂದಿದ್ದಾರೆ.
ಬಿಜೆಪಿ ಸರ್ಕಾರ ರಚನೆ ಆಗಿ ಕೆಲವೇ ತಿಂಗಳು ಆಗಿದೆ. ರಾಜ್ಯಪಾಲರು ತಮ್ಮ ಭಾಷಣದಲ್ಲಿ ಹಿಂದಿನ ಸರ್ಕಾರಗಳ ಸಾಧನೆಯನ್ನೂ ಪ್ರಸ್ತಾಪಿಸಿದ್ದಾರೆ. ಬಿಜೆಪಿ ಸರ್ಕಾರ ರಚನೆ ಆಗಿ ಹೆಚ್ಚಿನ ಸಮಯ ಕಳೆದಿಲ್ಲವಾದ್ದರಿಂದ ಈ ಸರ್ಕಾರದ ಸಾಧನೆಗಳ ಬಗ್ಗೆ ರಾಜ್ಯಪಾಲರಿಗೆ ಹೇಳಲು ಹೆಚ್ಚಿನ ವಿಷಯ ಇರಲಿಲ್ಲ.
ಇದನ್ನೇ ಸಿದ್ದರಾಮಯ್ಯ ಅವರು ತಮ್ಮ ಟ್ವೀಟ್ನಲ್ಲಿ ವ್ಯಂಗ್ಯವಾಗಿ ಹೇಳಿದ್ದು, ಯಡಿಯೂರಪ್ಪ ಹಾಗೂ ಬಿಜೆಪಿಯ ಕಾಲೆಳೆದಿದ್ದಾರೆ.