ಬಿಜೆಪಿ ಸರ್ಕಾರವು ದರಿದ್ರವೋ ಅಲ್ಲವೋ ಅನ್ನೋದಕ್ಕೆ ಉತ್ತರ ಸಿಕ್ತು: ಸಿದ್ದರಾಮಯ್ಯ
ಬೆಂಗಳೂರು, ಮಾರ್ಚ್ 5: ಬಿಜೆಪಿ ದರಿದ್ರ ಸರ್ಕಾರವೋ ಅಲ್ಲವೋ ಎಂಬುದಕ್ಕೆ ಇಂದು ಉತ್ತರ ದೊರೆತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 2020-21ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಅದಕ್ಕೆ ವಿರುದ್ಧವಾಗಿ ಸಿದ್ದರಾಮಯ್ಯ ತಮ್ಮ ನುಡಿಗಳನ್ನಾಡಿದ್ದಾರೆ.
ಕರ್ನಾಟಕ ಬಜೆಟ್ 2020: ಯಾವುದು ಏರಿಕೆ? ಯಾವುದು ಇಳಿಕೆ
ಸರ್ಕಾರದ ಬಳಿ ಹಣವಿಲ್ಲ ಎಂಬುದು ಖಚಿತವಾಗಿದೆ. ನಾನು ಸರ್ಕಾರ ದರಿದ್ರ ಎಂದು ಟೀಕಿಸಿದಾಗ ಬಜೆಟ್ನಲ್ಲಿ ಉತ್ತರಿಸುತ್ತೇನೆ ಎಂದು ಹೇಳಿದ್ದರು. ಈಗ ಅವರೇನೂ ಹೇಳುವುದು ಬೇಡ ನನಗೇ ಉತ್ತರ ಸಿಕ್ಕಿದೆ ಎಂದು ವ್ಯಂಗ್ಯವಾಡಿದ್ದಾರೆ.
ಯಡಿಯೂರಪ್ಪ ಬಜೆಟ್; ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ
ಬಜೆಟ್ನಲ್ಲಿ ಹೊಸ ಯೋಜನೆಯ ಪ್ರಸ್ತಾಪವೇ ಆಗಿಲ್ಲ.ಭಾಗ್ಯಲಕ್ಷ್ಮೀ, ಸೈಕಲ್ ಯೋಜನೆಗಳನ್ನು ಮಾತ್ರ ಉಲ್ಲೇಖಿಸಿದ್ದಾರೆ. ಆಹಾರ ಇಲಾಖೆಗೆ ಶೇ.1 ರಷ್ಟು ಅನುದಾನ ಕಡಿಮೆ ಮಾಡಿದ್ದಾರೆ. ಇನ್ನು ಯಾವ ಯೋಜನೆಗೆ ತಡೆ ನೀಡುತ್ತಾರೋ ಗೊತ್ತಿಲ್ಲ ಎಂದು ಹೇಳಿದರು.
ರಾಜ್ಯ, ಕೇಂದ್ರದಲ್ಲಿ ಒಂದೇ ಸರ್ಕಾರವಿದ್ದು ಏನು ಪ್ರಯೋಜನವಾಯ್ತು
ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಸರ್ಕಾರವಿದ್ದರೆ ಅಭಿವೃದ್ಧಿಗೆ ಅನುಕೂಲ ಎಂದು ಬಿಜೆಪಿ ಹೇಳಿತ್ತು. ದೇಶದ ಆರ್ಥಿಕ ಪರಿಸ್ಥಿತಿ ಎಲ್ಲಿಗೆ ಬಂದು ನಿಂತಿದೆ ಎಂಬುದನ್ನು ಒಮ್ಮೆ ನೋಡಲೇಬೇಕಾಗಿದೆ. ಕೇಂದ್ರದ ಜಿಡಿಪಿ ಕೇವಲ 4.6ರಷ್ಟಿದೆ. ನಮ್ಮ ಲೆಕ್ಕದಲ್ಲಿ ಇದು ಶೇ.4 ಇದೆ. ರಾಜ್ಯದಲ್ಲಿ 2019-20ರ ಸಾಲಿನಲ್ಲಿ ಜಿಡಿಪಿಯು ನಿರೀಕ್ಷೆಗಿಂತ ಶೇ.1 ರಷ್ಟು ಕಡಿಮೆಯಾಗಿದೆ ಎಂದರು.
ಹಣದುಬ್ಬರವಿದ್ದಾಗ ಬಜೆಟ್ ಗಾತ್ರ ಹೆಚ್ಚಳವಾಗಬೇಕು
ಹಣದುಬ್ಬರವಿದ್ದಾಗ ಬಜೆಟ್ ಗಾತ್ರ ವರ್ಷದಿಂದ ವರ್ಷಕ್ಕೆ ಕನಿಷ್ಠ ಶೇ.5ರಿಂದ ಶೇ.6ರಷ್ಟು ಹೆಚ್ಚಳವಾಗಬೇಕು. ನಾನು ಮುಖ್ಯಮಂತ್ರಿಯಾಗಿದ್ದಾಗ ಪ್ರತಿ ವರ್ಷವೂ ಬಜೆಟ್ ಗಾತ್ರ ಶೇ.10ರಷ್ಟು ಹೆಚ್ಚಳವಾಗಿತ್ತು ಎಂದು ಹೇಳಿದರು.
ಕೃಷಿ, ಕೈಗಾರಿಕೆ, ಸೇವಾ ವಲಯದಲ್ಲಿ ನಿರೀಕ್ಷಿತ ಬೆಳವಣಿಗೆ ಇಲ್ಲ
ಕೈಗಾರಿಕೆ, ಕೃಷಿ ಮತ್ತು ಸೇವಾ ವಲಯದಲ್ಲಿ ನಿರೀಕ್ಷಿತ ಬೆಳವಣಿಗೆ ಕಂಡುಬರುತ್ತಿಲ್ಲ. ಕೃಷಿಗೆ ಬಜೆಟ್ನಲ್ಲಿ ಹೇಳಿಕೊಳ್ಳುವಂಥ ಕೊಡುಗೆಗಳೂ ಇಲ್ಲ. ಯಡಿಯೂರಪ್ಪ ಅವರು ಹಸಿರು ಶಾಲು ಹಾಕಿದ ಮಾತ್ರಕ್ಕೆ ರೈತರು ಉದ್ಧಾರ ಆಗುತ್ತಾರೆ ಎನ್ನುವ ಭ್ರಮೆ ಇದ್ದರೆ ಬಿಟ್ಟು ಬಿಡಿ ಎಂದರು.
ಕರ್ನಾಟಕ ಬಜೆಟ್ 2020-21; ಯಾರು ಏನಂದ್ರು? ಪ್ರಮುಖರ ಪ್ರತಿಕ್ರಿಯೆಗಳು ಇಲ್ಲಿವೆ
ಮಹಾದಾಯಿ ಯೋಜನೆಗೆ 2 ಸಾವಿರ ಕೋಟಿ ನೀಡಬೇಕಿತ್ತು
ಮಹಾದಾಯಿ ಯೋಜನೆಗೆ ಕನಿಷ್ಠ 2 ಸಾವಿರ ಕೋಟಿ ಹಣ ಮೀಸಲಿಡಬೇಕಿತ್ತು. ಆದರೆ ಕೇವಲ 500 ಕೋಟಿ ಮೀಸಲಿಟ್ಟಿದ್ದಾರೆ. ಮಹಾದಾಯಿ ಯೋಜನೆಯನ್ನು 2 ವರ್ಷಗಳಲ್ಲಿ ಪೂರ್ಣಗೊಳಿಸಬೇಕು. ಆದ್ಯತೆ ಮೇಲೆ ಹೆಚ್ಚಿನ ಅನುದಾನ ನೀಡಬೇಕಿತ್ತು ಎಂದು ಹೇಳಿದರು.