ಜಮೀರ್ ಮೇಲೆ ಬಂದ ಆರೋಪಗಳಿಗೆ ಸಿದ್ಧರಾಮಯ್ಯ ಪ್ರತಿಕ್ರಿಯೆ
ಬೆಂಗಳೂರು, ಏಪ್ರಿಲ್ 22: ''ನಾನು ಜಮೀರ್ ಕರೆದು ಮಾತನಾಡಿದ್ದೇನೆ. ನಾನು ಹಾಗೆ ಹೇಳಿಲ್ಲ. ಬಿಜಿಪಿ ನಾಯಕರು ಬೇರೆ ರೀತಿ ಅರ್ಥೈಸಿಕೊಂಡು ಮಾತನಾಡುತ್ತಿದ್ದಾರೆ ಎಂದು ಜಮೀರ್ ತಿಳಿಸಿದ್ದಾರೆ'' ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿಕೆ ನೀಡಿದ್ದಾರೆ.
''ನನ್ನ ಅನುಮತಿ ಪಡೆದು ಕ್ಷೇತ್ರಕ್ಕೆ ಹೋಗಬೇಕು ಎಂದು ಹೇಳಿಲ್ಲ. ರಾತ್ರಿ ವೇಳೆ ಹೋರಬಾರದಿತ್ತು, ಬೆಳಗ್ಗೆ ವೇಳೆ ಹೋಗಬೇಕಿತ್ತು ಎಂದು ಹೇಳಿದ್ದು ಅಷ್ಟೇ'' ಎಂದು ಜಮೀರ್ ಅಹ್ಮದ್ ಸಿದ್ಧರಾಮಯ್ಯಗೆ ಸ್ಪಷ್ಟನೆ ನೀಡಿದ್ದಾರಂತೆ. ಜಮೀರ್ ವಿಷಯದಲ್ಲಿ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ ಎಂದು ಸಿದ್ಧರಾಮಯ್ಯ ಪಾದರಾಯನಪುರ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಅವರು ಯಾರ್ರೀ?, ಜಮೀರ್ ಅಹ್ಮದ್ ವಿರುದ್ಧ ಗುಡುಗಿದ ಯಡಿಯೂರಪ್ಪ
ಕೊರೊನಾ ಸೊಂಕಿತರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಕಾರಣ ಜಮೀರ್ ಅಹ್ಮದ್ರನ್ನು ಕ್ವಾರಂಟೈನ್ನಲ್ಲಿ ಇಡುವ ಯೋಚನೆ ಇದೆ ಎಂದು ನಿನ್ನೆ ಉಪ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಮಾತನಾಡಿರುವ ಸಿದ್ಧರಾಮಯ್ಯ ರೋಗ ಲಕ್ಷಣಗಳು ಇದ್ದರೆ ಕ್ವಾರಂಟೈನ್ ಮಾಡಬೇಕು. ಅದು ಬಿಟ್ಟು ಸುಮ್ಮನೆ ಕ್ವಾರಂಟೈನ್ ಮಾಡಬೇಕು ಅಂತ ಕ್ವಾರಂಟೈನ್ ಮಾಡಬಾರದು ಎಂದಿದ್ದಾರೆ.
ಕೊರೊನಾ ತಪಾಸಣೆಗೆ ಎಲ್ಲರೂ ಸಹಕಾರ ನೀಡಬೇಕು. ಸಹಕಾರ ನೀಡದೆ ಇದ್ದರೆ ತಪ್ಪು. ಯಾರೇ ಆ ರೀತಿ ಮಾಡಿದರೂ ಕ್ರಮ ತೆಗೆದುಕೊಳ್ಳಲಿ ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ.