ಟ್ರಂಪ್-ಮೋದಿ ನಡುವೆ ವ್ಯತ್ಯಾಸವಿಲ್ಲ, ಇಬ್ಬರಿಗೂ ತಿಳಿವಳಿಕೆಯಿಲ್ಲ: ಸಿದ್ದರಾಮಯ್ಯ ವಾಗ್ದಾಳಿ
ಬೆಂಗಳೂರು, ಅಕ್ಟೋಬರ್ 2: ನೆರೆ ಬಂದು ಜನರು ಇಷ್ಟೆಲ್ಲ ಸಂಕಷ್ಟದಿಂದ ಪರದಾಡಿದರೂ ರಾಜ್ಯಕ್ಕೆ ಭೇಟಿ ನೀಡದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನುಷ್ಯತ್ವ ಇದೆಯೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಬೆಂಗಳೂರಿನಲ್ಲಿ ಬುಧವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಜನರು ಪ್ರವಾಹದಲ್ಲಿ ಸಿಲುಕಿ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಅತ್ತ ಪ್ರಧಾನಿ ಮೋದಿ ಅಮೆರಿಕಕ್ಕೆ ಹೋಗಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಧಾನಿ ಮೋದಿಗೆ ಯಡಿಯೂರಪ್ಪ ಬಗ್ಗೆ ದ್ವೇಷವೇ? ಸಿದ್ದು ಪ್ರಶ್ನೆ
'ಮೋದಿ ಅವರ ಸ್ವಂತ ರಾಜ್ಯ ಗುಜರಾತ್, ಒರಿಸ್ಸಾ, ಆಂಧ್ರಪ್ರದೇಶ, ತೆಲಂಗಾಣ, ಕೇರಳದಲ್ಲಿ ಪ್ರವಾಹ ಬಂದಾಗಲೂ ಹೋಗಲಿಲ್ಲ. ಕರ್ನಾಟಕಕ್ಕೆ ಕೂಡ ಬರಲಿಲ್ಲ. ಈಗ ಬಿಹಾರದಲ್ಲಿ ಪ್ರವಾಹ ಬಂದಾಗ ಟ್ವೀಟ್ ಮಾಡುತ್ತಾರೆ. ಏಕೆಂದರೆ ಅಲ್ಲಿ ಇವರ ಪಾಲುದಾರಿಕೆಯ ಸರ್ಕಾರ ಇದೆಯಲ್ಲ. ಮೋದಿ ಅವರು ಈ ದೇಶದ ಪ್ರಧಾನಿ ಎನ್ನುವುದು ದುರ್ದೈವ. ಅವರಿಗೆ ಮನುಷ್ಯತ್ವ ಇದ್ದಿದ್ದರೆ ಕರ್ನಾಟಕಕ್ಕೆ ಭೇಟಿ ನೀಡಬೇಕಿತ್ತು. ರಾಜ್ಯದಲ್ಲಿ ಪ್ರವಾಹದ ಸ್ಥಿತಿ ಉಂಟಾಗಿ 50 ದಿನ ಕಳೆದಿದೆ. ಕೇಂದ್ರ ಸರ್ಕಾರದಿಂದ ಒಂದು ರೂಪಾಯಿ ಪರಿಹಾರ ದೊರಕಿಲ್ಲ. ಕೇಂದ್ರ ಸರ್ಕಾರ ಬದುಕಿದೆಯೋ ಅಥವಾ ಸತ್ತಿದೆಯೋ ಎಂಬ ಪ್ರಶ್ನೆ ಮೂಡುತ್ತಿದೆ' ಎಂದು ವಾಗ್ದಾಳಿ ನಡೆಸಿದರು.
ಟ್ರಂಪ್ ಒಬ್ಬ ಅಜ್ಞಾನಿ
ಅಮೆರಿಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತದ ಪಿತಾಮಹ ಎಂದು ಕರೆದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಕೂಡ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಡೊನಾಲ್ಡ್ ಟ್ರಂಪ್ ಅವರು ಅಜ್ಞಾನಿ. ಮೋದಿಗೂ ಟ್ರಂಪ್ಗೂ ವ್ಯತ್ಯಾಸ ಕಾಣಿಸುವುದಿಲ್ಲ. ಮೋದಿ ಅವರಿಗೆ ತಿಳಿವಳಿಕೆ ಇದ್ದಿದ್ದರೆ, ಬರಾಕ್ ಒಬಾಮ ಅವರ ಪರವಾಗಿ ಮಾತನಾಡಬೇಕಿತ್ತು ಎಂದರು.
ಮೋದಿ ಪ್ರತಿಭಟಿಸಬೇಕಿತ್ತು
ಮೋದಿ ಅವರು ದೇಶಭಕ್ತರಾಗಿದ್ದರೆ ತಮ್ಮನ್ನು ರಾಷ್ಟ್ರಪಿತ ಎಂದಾಗ ಅಲ್ಲಿಯೇ ಪ್ರತಿಭಟನೆ ಮಾಡಬೇಕಿತ್ತು. ಬಂಗಾಳದಲ್ಲಿ ಭೀಕರ ಮಳೆ ಬಂದಿದ್ದಾಗ ಗಾಂಧಿ ಅಲ್ಲಿಗೆ ಹೋಗಿ ಜನರ ಜತೆ ಇರುತ್ತಾರೆ. ಆದರೆ ಮೋದಿ ಭೀಕರ ಪ್ರವಾಹ ಅಥವಾ ಬರಗಾಲ ಬಂದಾಗ ಅಮೆರಿಕ ಹೋಗುತ್ತಾರೆ ಎಂದು ಟೀಕಿಸಿದರು.
ಯಡಿಯೂರಪ್ಪರನ್ನು ನೋಡಿದರೆ ಅಯ್ಯೋ ಎನಿಸುತ್ತಿದೆ: ಸಿದ್ದರಾಮಯ್ಯ
ರಾಮನ ಹೆಸರಲ್ಲಿ ಸಮಾಜ ಒಡೆಯುವ ಕೆಲಸ
ಗಾಂಧೀಜಿ ಅವರು ಅಂದು ಸಾಯುವ ಸಮಯದಲ್ಲಿ ಜಪಿಸಿದ ರಾಮನೇ ಬೇರೆ, ಇಂದು ಆರೆಸ್ಸೆಸ್ ಮತ್ತು ಬಿಜೆಪಿಯವರು ಪ್ರತಿಪಾದಿಸುತ್ತಿರುವ ರಾಮನೇ ಬೇರೆ. ರಾಮನ ಹೆಸರು ಹೇಳಿಕೊಂಡು ಸಮಾಜ ಒಡೆಯುವ ಕೆಲಸ ಆಗುತ್ತಿದೆ. ದೇಶದಲ್ಲಿ ವಿದ್ವಂಸಕಾರಿ ಶಕ್ತಿಗಳು ಸಮಾಜವನ್ನು ಒಡೆಯುತ್ತಿವೆ.
ಗಾಂಧೀಯಂತಹ ಶ್ರೇಷ್ಠ ಹಿಂದೂ ಇಲ್ಲ
ಮಹಾತ್ಮ ಗಾಂಧಿ ಅವರಂತಹ ಶ್ರೇಷ್ಠ ಹಿಂದೂ ಇನ್ನೊಬ್ಬರು ಇರಲು ಸಾಧ್ಯವಿಲ್ಲ. ಅವರು ರಾಮನ ಭಜನೆ ಮಾಡಿದರೂ ಆಜಾದ್, ಅಬ್ದುಲ್ ಜಫರ್ ಖಾನ್ ಅವರಂತಹವರ ಜತೆ ಇರುತ್ತಿದ್ದರು. ಆದರೆ ಜನತೆ ಎಂದೂ ಅವರನ್ನು ಹಿಂದೂ ಆಗಿ ನೋಡಲಿಲ್ಲ. ಬದಲಾಗಿ ಮಾನವೀಯ ಮೌಲ್ಯವುಳ್ಳ ವ್ಯಕ್ತಿಯಾಗಿ ನೋಡುತ್ತಿದ್ದರು. ಈಗಲಾದರೂ ಬಿಜೆಪಿ, ಆರೆಸ್ಸೆಸ್ ಮಂದಿ ತಮ್ಮನ್ನು ಶ್ರೇಷ್ಠ ಹಿಂದೂ ಎಂದು ಕರೆದುಕೊಳ್ಳುವುದನ್ನು ಬಿಡಲಿ ಎಂದರು.