ಕೇಂದ್ರದ ನೆರೆ ಪರಿಹಾರ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ: ಸಿದ್ದರಾಮಯ್ಯ
ಬೆಂಗಳೂರು, ಜನವರಿ 7: ರಾಜ್ಯಕ್ಕೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪರಿಹಾರದ ಕುರಿತು ಸಿದ್ದರಾಮಯ್ಯ ಅಪಸ್ವರ ಎತ್ತಿದ್ದಾರೆ.
ಕೇಂದ್ರ ನೀಡಿರುವ ಪರಿಹಾರ ಸಾಲುವುದಿಲ್ಲ, ಅತಿವೃಷ್ಟಿ ಸಮೀಕ್ಷೆಯೂ ಕೂಡ ಇನ್ನೂ ಪುರ್ಣಗೊಂಡಿಲ್ಲ, ಅದಾದ ಬಳಿಕವೇ ಹಾನಿ ಪ್ರದೇಶಗಳ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಅತಿವೃಷ್ಟಿಯ ನಷ್ಟದ ಸಮೀಕ್ಷೆ ಪೂರ್ಣಗೊಂಡಿಲ್ಲ
ನೀವು ರೂ.38 ಸಾವಿರ ಕೋಟಿ ಪರಿಹಾರ ಕೇಳಿದ್ದು ಆಗಸ್ಟ್ ತಿಂಗಳ ನೆರೆ ಹಾವಳಿಗೆ. ಅಕ್ಟೋಬರ್ ತಿಂಗಳ ಅತಿವೃಷ್ಟಿಯ ನಷ್ಟದ ಸಮೀಕ್ಷೆಯೇ ಪೂರ್ಣಗೊಂಡಿಲ್ಲ. ತಕ್ಷಣ ಅದನ್ನು ಮುಗಿಸಿ ಕೇಂದ್ರಕ್ಕೆ ಹೆಚ್ಚುವರಿ ಪರಿಹಾರದ ಬೇಡಿಕೆ ಸಲ್ಲಿಸಿ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ
ಕೇಂದ್ರ ಸರ್ಕಾರ ನೀಡಿರುವ ರೂ.669.85 ಕೋಟಿ ಹೆಚ್ಚುವರಿ ನೆರೆ ಪರಿಹಾರ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ. ಯಡಿಯೂರಪ್ಪ ಅವರೇ, ನೆನಪಿರಲಿ ನೀವೇ ಒಪ್ಪಿಕೊಂಡಂತೆ ಅಂದಾಜು ನಷ್ಟ ರೂ. 50 ಸಾವಿರ ಕೋಟಿ, ನೀವು ಕೇಳಿದ್ದು ರೂ.38 ಸಾವಿರ ಕೋಟಿ. ನಿಮ್ಮ ಗೋಗರೆತಕ್ಕೆ ಸಿಕ್ಕಿದ್ದು ಕೇವಲ ರೂ.1869 ಕೋಟಿ. ಇಷ್ಟು ಸಾಕಾ? ಎಂದು ಪ್ರಶ್ನಿಸಿದ್ದಾರೆ.
ನೆರೆ ಪರಿಹಾರದ ಹಣವನ್ನು ಪಾಕಿಸ್ತಾನದ ಬಳಿ ಕೇಳಬೇಕೇ?: ಎಚ್ಡಿಕೆ ಪ್ರಶ್ನೆ
ಬಿಜೆಪಿ ಗೋಗರೆತಕ್ಕೆ ಕರಗಿ ನೀಡಿರುವ ಪರಿಹಾರ ಇಷ್ಟೇನಾ?
ಯಡಿಯೂರಪ್ಪ ಅವರ ಗೋಗರೆತಕ್ಕೆ ಕರಗಿದ ಮೋದಿ ರೂ.669.85 ಕೋಟಿ ಹೆಚ್ಚುವರಿ ನೆರೆಪರಿಹಾರ ದಯಪಾಲಿಸಿದ್ದು, ಒಟ್ಟು ಪರಿಹಾರ ರೂ.1869.85 ಆಗುತ್ತೆ. ಸುಳ್ಳು ದೇವರ ಭಕ್ತರಾದ ಬಿಜೆಪಿ ನಾಯಕರು ಪರಿಹಾರದ ಮೊತ್ತ 1200+1869.85=ರೂ.3069 ಕೋಟಿ ಎಂದು ಹೇಳಿ ಸಂಭ್ರಮಿಸುತ್ತಿರುವುದು ತಮಾಷೆಯಾಗಿದೆ.
ಅಳೆದು ತೂಗಿ ಪರಿಹಾರ
ಕೇಂದ್ರ ಸರ್ಕಾರ ಅಳೆದು ತೂಗಿ ಕೊನೆಗೂ ರಾಜ್ಯಕ್ಕೆ ನೆರೆ ಪರಿಹಾರದ ಹಣ ಕೊಟ್ಟಿದೆ. ಬಹುಶಃ ಶಿವಕುಮಾರ ಶ್ರೀಗಳು ಮೆಟ್ಟಿದ ಭೂಮಿ ಮೋದಿ ಅವರಿಗೆ ಜ್ಞಾನೋದಯ ಮಾಡಿಸಿರಬಹುದು. ಪರಿಹಾರ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರಕ್ಕೆ, ಪ್ರಧಾನಿ ಮೋದಿ ಅವರಿಗೆ ಅಭಿನಂದನೆಗಳು.