ಆಡಿಯೋ ಹಿಂದೆ ಸಿದ್ದರಾಮಯ್ಯ ಕಪಟ ಷಡ್ಯಂತ್ರ: ರಾಜೀವ್ ಚಂದ್ರಶೇಖರ್
ಬೆಂಗಳೂರು, ಫೆಬ್ರವರಿ 13: ಆಪರೇಷನ್ ಕಮಲದ ಆಡಿಯೋ ಪ್ರಕರಣ ದಿನಕ್ಕೊಂದು, ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ಈ ಪ್ರಹಸನದ ಲಾಭ ಪಡೆಯಲು ಸಿದ್ದರಾಮಯ್ಯ ಹವಣಿಸುತ್ತಿದ್ದಾರೆ ಎಂಬ ಅನುಮಾನ ವಿವಿಧ ನಾಯಕರಿಂದ ವ್ಯಕ್ತವಾಗುತ್ತಿದೆ. ಸಿದ್ದರಾಮಯ್ಯ ಅವರನ್ನು ಮೊದಲು ತನಿಖೆಗೆ ಒಳಪಡಿಸಬೇಕು ಎಂದು ಹೇಳಿದವರು ಬಿಜೆಪಿ ಶಾಸಕ ಬಿ.ಶ್ರೀರಾಮುಲು.
ಇದೀಗ ಬಿಜೆಪಿಯ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಕೂಡ ತಮ್ಮ ಅನುಮಾನವನ್ನು ಸಿದ್ದರಾಮಯ್ಯ ಬಗ್ಗೆ ವ್ಯಕ್ತಪಡಿಸಿದ್ದು, ಈ ನಾಟಕದ ಹಿಂದೆ ಕಪಟ ಷಡ್ಯಂತ್ರ ಅಡಗಿದೆ ಎಂದು ನೇರವಾಗಿ ಆರೋಪ ಮಾಡಿದ್ದಾರೆ. ಸಿಎಂ ಕುಮಾರಸ್ವಾಮಿ ವಿರುದ್ಧ ಶಾಸಕರಿಗೆ ಅಸಮಾಧಾನವಿರುವ ಈ ಪರಿಸ್ಥಿತಿ ಸಿದ್ದರಾಮಯ್ಯನವರಿಗೆ ಅನುಕೂಲಕರವಾಗಿದೆ ಎಂದಿದ್ದಾರೆ.
ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸಿದ ಶ್ರೀರಾಮುಲು: ಕಾಂಗ್ರೆಸ್ ಆಕ್ರೋಶ
ಸರಕಾರದ ಅಧೀನದಲ್ಲಿರುವ ಎಸ್ ಐಟಿ ತನಿಖೆ ಅತೃಪ್ತ ಶಾಸಕರನ್ನು ಬೆದರಿಸಲು ಹಾಗೂ ಭವಿಷ್ಯದಲ್ಲಿ ಸಂದರ್ಭ ಎದುರಾದಾಗ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ವಿರುದ್ಧವೇ ಈ ಅಸ್ತ್ರ ಬಳಸಬಹುದು ಎಂಬುದು ಸಿದ್ದರಾಮಯ್ಯ ಅವರ ತಂತ್ರ ಎಂದು ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ನಂತರ ಕರ್ನಾಟಕದಲ್ಲಿ ಅತಂತ್ರ ಸ್ಥಿತಿ ಸೃಷ್ಟಿ ಆಗಿತ್ತು. ಆಗ ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಬೇಷರತ್ ಬೆಂಬಲ ಸೂಚಿಸಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಆದರೆ ಆಗಿನಿಂದ ಮೈತ್ರಿ ಸರಕಾರದ ಮುಖಂಡರಲ್ಲಿ ಅಸಮಾಧಾನ ವ್ಯಕ್ತ ಆಗುತ್ತಲೇ ಇದೆ.
ಎಸ್ಐಟಿ ತನಿಖೆಯೇ ಸರಿ, ನ್ಯಾಯಾಂಗ ತನಿಖೆ ಸಾಧ್ಯವಿಲ್ಲ: ರಮೇಶ್ ಕುಮಾರ್ ಸ್ಪಷ್ಟನೆ
ಅದರಲ್ಲೂ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡ ಕೆಲವು ಶಾಸಕರು, ಈಗಲೂ ಸಿದ್ದರಾಮಯ್ಯ ಅವರೇ ನಮ್ಮ ಪಾಲಿಗೆ ಮುಖ್ಯಮಂತ್ರಿ. ಈಗಿನ ಮೈತ್ರಿ ಸರಕಾರದಲ್ಲಿ ಸರಿಯಾಗಿ ಕೆಲಸ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಆ ನಂತರ ಸಿಟ್ಟಾಗಿದ್ದ ಕುಮಾರಸ್ವಾಮಿ, ನಾನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲು ಸಿದ್ಧ ಎಂದಿದ್ದರು.
ಈ ನಾಟಕದ ಹಿಂದೆ ಕಪಟ ಷಡ್ಯಂತ್ರ ಅಡಗಿದೆ. ಸಿಎಂ ಕುಮಾರಸ್ವಾಮಿ ವಿರುದ್ಧ ಶಾಸಕರಿಗೆ ಅಸಮಾಧಾನವಿರುವ ಈ ಪರಿಸ್ಥಿತಿ ಸಿದ್ದರಾಮಯ್ಯನವರಿಗೆ ಅನುಕೂಲಕರವಾಗಿದೆ. ಸರ್ಕಾರದ ಅಧೀನದಲ್ಲಿರುವ ಎಸ್ ಐಟಿ ತನಿಖೆ ಅತೃಪ್ತ ಶಾಸಕರನ್ನು ಬೆದರಿಸಲು & ಭವಿಷ್ಯದಲ್ಲಿ ಸಂದರ್ಭ ಎದುರಾದಾಗ ಸಿಎಂ & ಸ್ಪೀಕರ್ ವಿರುದ್ಧವೇ ಈ ಅಸ್ತ್ರ ಬಳಸಬಹುದೆಂಬುದು ಅವರ ತಂತ್ರ. https://t.co/LiMrdcr8cS
— Rajeev Chandrasekhar 🇮🇳 (@rajeev_mp) 13 February 2019
ಈ ಎಲ್ಲ ಬೆಳವಣಿಗೆಗಳ ನಂತರ, ಮೈತ್ರಿ ಸರಕಾರದಲ್ಲಿ ಅಸಮಾಧಾನಗೊಂಡ ಅತೃಪ್ತ ಶಾಸಕರು ರಾಜೀನಾಮೆ ನೀಡಲಿದ್ದಾರೆ. ಅಲ್ಪ ಮತಕ್ಕೆ ಕುಸಿದು, ಸರಕಾರ ಬಿದ್ದುಹೋಗಲಿದೆ ಎಂದು ಸುದ್ದಿಯಾಗಿತ್ತು. ಈ ಎಲ್ಲದರ ಮಧ್ಯೆ ಆಪರೇಷನ್ ಕಮಲದ ಆಡಿಯೋ ಎನ್ನಲಾದ ಕ್ಲಿಪ್ ಬಿಡುಗಡೆ ಆಗಿ, ಭಾರೀ ಕೋಲಾಹಲ ಎಬ್ಬಿಸಿದೆ.