ರಾಜೀನಾಮೆ ನೀಡಿದ ಸಿದ್ದರಾಮಯ್ಯ ಹೇಳಿದ್ದೇನು?
ಬೆಂಗಳೂರು, ಡಿಸೆಂಬರ್ 09: ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದ್ದಕ್ಕೆ ನೈತಿಕ ಜವಾಬ್ದಾರಿ ಹೊತ್ತು ಶಾಸಕಾಂಗ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜೀನಾಮೆ ಪತ್ರವನ್ನು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ, ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗೆ ಕಳಿಸಿರುವುದಾಗಿ ಹೇಳಿದ್ದಾರೆ.
ಕಾಂಗ್ರೆಸ್ ನಾಯಕರ ಹೈಡ್ರಾಮ, ಸಿದ್ದರಾಮಯ್ಯ ರಾಜೀನಾಮೆ
ಸುದ್ದಿಗೋಷ್ಠಿಯಲ್ಲಿ ಚುಟುಕಾಗಿ ಮಾತನಾಡಿದ ಸಿದ್ದರಾಮಯ್ಯ, 'ಪ್ರಜಾಪ್ರಭುತ್ವದ ಉಳಿವಿಗಾಗಿ ಅನರ್ಹರಿಗೆ ತಕ್ಕ ಪಾಠವನ್ನು ಉಪಚುನಾವಣೆಯಲ್ಲಿ ಜನರು ಕೊಡುತ್ತಾರೆ ಎಂಬ ನಿರೀಕ್ಷೆ ಇತ್ತು ಆದರೆ ನಿರೀಕ್ಷೆ ಹುಸಿಯಾಗಿದೆ' ಎಂದು ಬೇಸರದಿಂದ ಹೇಳಿದರು.
'ಶಾಸಕಾಂಗ ನಾಯಕನಾಗಿ ಜನರು ಕೊಟ್ಟಿರುವ ಈ ತೀರ್ಪನ್ನು ಸ್ವಾಗತಿಸುತ್ತೇನೆ. ಪಕ್ಷದಲ್ಲಿ ಬದಲಾವಣೆ ಆಗಬೇಕಾಗಿರುವ ಕಾರಣದಿಂದಾಗಿ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ' ಎಂದರು.
ಇಷ್ಟು ಹೇಳಿ ಪತ್ರಕರ್ತರಿಗೆ ಧನ್ಯವಾದ ಹೇಳಿದ ಸಿದ್ದರಾಮಯ್ಯ, ಪ್ರಶ್ನೋತ್ತರಕ್ಕೂ ನಿಲ್ಲದೆ, 'ಇನ್ನೆರಡು ದಿನಗಳಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆ ಮಾಡೋಣ ಈಗ ಬೇಡ' ಎಂದು ಹೇಳಿ ಹೊರಟುಬಿಟ್ಟರು.
ವಿಪಕ್ಷದ ಶಾಸಕಾಂಗ ನಾಯಕನೇ ವಿರೋಧಪಕ್ಷ ನಾಯಕ ಆಗಿರುತ್ತಾನೆ. ಆಡಳಿತ ಪಕ್ಷದ ಶಾಸಕಾಂಗ ನಾಯಕ ಸಿಎಂ ಆಗಿರುತ್ತಾರೆ. ಹಾಗಾಗಿ ಶಾಸಕಾಂಗ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿದ್ದರಾಮಯ್ಯ ಇನ್ನು ಮುಂದು ವಿರೋಧ ಪಕ್ಷ ನಾಯಕರಾಗಿಯೂ ಮುಂದುವರೆಯುವ ಬಗ್ಗೆ ಅನುಮಾನ ಇದೆ.