ಕ್ವಾರಂಟೈನ್ನಲ್ಲಿರೋರನ್ನು ಪೊಲೀಸ್ರು ನೋಡಿಕೊಳ್ತಾರಾ?: ಸಿದ್ದರಾಮಯ್ಯ ಪ್ರಶ್ನೆ
ಬೆಂಗಳೂರು, ಮಾರ್ಚ್ 23: ವಿಧಾನಸಭೆಯಲ್ಲಿ ಕೊರೊನಾ ತಡೆಗೆ ಸರ್ಕಾರ ತೆಗೆದುಕೊಂಡ ನಿಯಮಗಳ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಸಿದ್ದರಾಮಯ್ಯ ಪ್ರಶ್ನೆಗಳಿಗೆ ಸಚಿವ ಡಾ.ಕೆ.ಸುಧಾಕರ್ ಉತ್ತರ ನೀಡಿದ್ದಾರೆ.
Recommended Video
''ವಿದೇಶದಿಂದ ಬರುವವರನ್ನು ಕ್ವಾರಂಟೈನ್ನಲ್ಲಿ ಇಡಬೇಕು. ಆದ್ರೆ ಕೆಲವರು ಕ್ವಾರಂಟೈನ್ ಉಲ್ಲಂಘಿಸಿದ್ದಾರೆ. ಅವರ ನಿಗಾದಲ್ಲಿ ಪೊಲೀಸರಿದ್ದಾರೆ ಅಂದ್ರೆ ಆಗುತ್ತಾ?. ಪೊಲೀಸರು ಲಾಕಪ್ನಲ್ಲಿರೋರನ್ನೇ ನೋಡಿಕೊಳ್ಳಲ್ಲ. ಇನ್ನು ಇವರನ್ನ ನೋಡ್ಕೋತಾರಾ?. ಕೊರೋನಾ ನಿರ್ವಹಣೆಗೆ ಪ್ಯಾಕೇಜ್ ಘೋಷಿಸಿ'' ಎಂದು ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಪ್ರಶ್ನೆ ಮಾಡಿದ್ದಾರೆ.
ಕೊರೊನಾ ನಿಗ್ರಹಕ್ಕೆ ರಾಜ್ಯ ಸರ್ಕಾರ ತೆಗೆದುಕೊಂಡ ತುರ್ತು ನಿರ್ಧಾರಗಳ ಪಟ್ಟಿ
''ಗುಲ್ಬರ್ಗದಲ್ಲಿ ಟೆಸ್ಟಿಂಗ್ ಲ್ಯಾಬ್ ಮಾಡಲು 12 ದಿನ ಬೇಕಾಯ್ತು. ಇವತ್ತಿಂದ ಲ್ಯಾಬ್ ಆರಂಭ ಅಂತಿದಾರೆ. ಸಿಎಂ ಎಲ್ಲೆಲ್ಲಿ ಲ್ಯಾಬ್ ಬೇಕೋ ಮಾಡಿ ಅಗತ್ಯ ವೈದ್ಯಕೀಯ ಸಲಕರಣೆಗಳ ಪೂರೈಸಿ.'' ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಒತ್ತಾಯ ತಂದರು. ನಂತರ ಇದಕ್ಕೆ ಸಚಿವ ಡಾ.ಕೆ.ಸುಧಾಕರ್ ಉತ್ತರ ನೀಡಿದರು.
1,22,532 ಜನ ವಿದೇಶಗಳಿಂದ ಬಂದಿದ್ದಾರೆ
''ವಿದೇಶದಿಂದ ಕಳೆದ ಮೂರು ದಿನಗಳಿಂದ ಬೆಂಗಳೂರಿಗೆ 3,116 ಪ್ರಯಾಣಿಕರು ಬಂದಿದ್ದಾರೆ. ಇದುವರೆಗೆ 1,22,532 ಜನ ವಿದೇಶಗಳಿಂದ ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣಗಳಿಗೆ ಬಂದಿದ್ದಾರೆ. ಇಡೀ ದೇಶದಲ್ಲಿ ವಿದೇಶಗಳಿಂದ ಬಂದವರನ್ನು ಮೊದಲು ಸ್ಕ್ರೀನಿಂಗ್ ಮಾಡಿದ ರಾಜ್ಯ ಅಂದ್ರೆ ಕರ್ನಾಟಕ. ಇಟಲಿ ಮತ್ತು ದಕ್ಷಿಣ ಕೊರಿಯಾಗಳಿಂದ ನಾವು ಕಲಿಯುವುದು ತುಂಬಾ ಇದೆ. ಇಟಲಿ ಕೊರೋನಾ ನಿರ್ವಹಣೆಯಲ್ಲಿ ಎಡವಿತು. ಇಟಲಿ ಮಾಡಿದ ತಪ್ಪು ನಾವು ಮಾಡಬಾರದು, ಮಾಡ್ತಿಲ್ಲ.'' -ಡಾ.ಕೆ.ಸುಧಾಕರ್, ಸಚಿವ
ವಿಮಾನಗಳ ಹಾರಾಟ ಸ್ಥಗಿತಗೊಳಿಸಿದೆ
''ಕೊರೋನಾ ಮೂಲ ವಿಮಾನ ನಿಲ್ದಾಣಗಳ ಬಂದ್ ಮಾಡಲು ಕೆಲವರು ಆಗ್ರಹಿಸಿದರು. ಆದ್ರೆ ಇದು ನಮ್ಮ ಕೈಯಲ್ಲಿಲ್ಲ. ಈಗ ಕೇಂದ್ರ ವಿಮಾನಗಳ ಹಾರಾಟ ಸ್ಥಗಿತಗೊಳಿಸಿದೆ. ವಿಮಾನ ನಿಲ್ದಾಣಗಳ ಬಂದ್ ಮಾಡಲಾಗಿದೆ. ಇವತ್ತಿಗೂ ಬೇರೆ ಬೇರೆ ದೇಶಗಳಲ್ಲಿ ರಾಜ್ಯದ ಕನ್ನಡಿಗರು ಸಿಕ್ಕಿಕೊಂಡಿದ್ದಾರೆ. ನಮ್ಮ ರಾಜ್ಯ ಹಲವು ರಾಜ್ಯಗಳ ಜೊತೆ ಗಡಿ ಹಂಚಿಕೊಂಡಿದೆ. ಗಡಿ ಬಂದ್ ಮಾಡಲಾಗಿದೆ, ಒಳ ದಾರಿಗಳೂ ತುಂಬಾ ಇವೆ. ಕೊರೋನಾ ಬಂದ ತಕ್ಷಣ ನಾವು ಗಡಿ ಬಂದ್ ಮಾಡಲಿಲ್ಲ. ಮೊದಲು ನಾವು ಕೊರೋನಾ ಜಾಗೃತಿಗೆ ಆದ್ಯತೆ ಕೊಟ್ವಿ'' -ಡಾ.ಕೆ.ಸುಧಾಕರ್, ಸಚಿವ.
ನೀವೆಲ್ಲ ಕಣ್ಣರಳಿಸುವ ಸುದ್ದಿಯೊಂದು ಕೊರೊನಾ ತವರು ವುಹಾನ್ ನಿಂದ ಬಂದಿದೆ!
ದೊಡ್ಡ ವ್ಯವಸ್ಥೆ ಬೇಕು
''ನೂರಕ್ಕೆ ನೂರು ಕ್ವಾರಂಟೈನ್ ಮಾಡುವಲ್ಲಿ ಸಾಧ್ಯವಾಗಿಲ್ಲ. ಇದನ್ನು ನಾವು ಒಪ್ಪಿಕೊಳ್ತೇವೆ. 1,22,532 ಜನ ವಿದೇಶದಿಂದ ಬಂದವರನ್ನೆಲ್ಲ ಕ್ವಾರಂಟೈನ್ ಮಾಡುವುದು ಸಾಧ್ಯ ಹೇಗೆ? ಅದಕ್ಕೆ ದೊಡ್ಡ ವ್ಯವಸ್ಥೆ ಬೇಕು. ಕೊರೋನಾ ಅನಿರೀಕ್ಷಿತ, ಹಾಗಾಗಿ ಯಾರೂ ಸಿದ್ಧವಾಗಿರಲು ಸಾಧ್ಯ ಇರಲ್ಲ. ಆದರೂ ನಾವು ಶ್ರಮ ಮೀರಿ ಮುನ್ನೆಚ್ಚರಿಕೆ ಕೈಕೊಂಡಿದ್ದೇವೆ ರೈಲು, ಬಸ್ ನಿಲ್ದಾಣಗಳಲ್ಲಿ ಟೆಸ್ಟಿಂಗ್ ಮಾಡಕ್ಕಾಗಲಿಲ್ಲ. ಇಂಥ ವ್ಯಾಧಿ ನಾವ್ಯಾರೂ ನೋಡೇಯಿಲ್ಲ.'' -ಡಾ.ಕೆ.ಸುಧಾಕರ್, ಸಚಿವ
33 ಜನಕ್ಕೆ ಕೊರೋನಾ ಇದೆ
''ಅಮೆರಿಕ, ಫ್ರಾನ್ಸ್, ಜರ್ಮನಿ ಸೇರಿ ಹಲವು ಮುಂದುವರೆದ ದೇಶಗಳು ತಲ್ಲಣಗೊಂಡಿವೆ. ರಾಜ್ಯದಲ್ಲಿ ಕೊರೋನಾ ಈಗ ನಾಲ್ಕನೇ ವಾರಕ್ಕೆ ಬಂದಿದೆ. ಇದೇ ಸಂದರ್ಭದಲ್ಲಿ ಇಟಲಿಯಲ್ಲಿ 6 ಸಾವಿರ ಜನಕ್ಕೆ ಕೊರೋನಾ ಇತ್ತು. ನಮ್ಮಲ್ಲಿ ಈಗ 33 ಜನಕ್ಕೆ ಕೊರೋನಾ ಇದೆ. ಇನ್ನೂ ಕ್ವಾರಂಟೈನ್ ಮಾಡ್ತೇವೆ. ನಂತರವೇ ಅವ್ರನ್ನ ಬಿಡುಗಡೆ ಮಾಡೋದು. ಒಟ್ಟು ಐವರು ಕೊರೋನಾದಿಂದ ರಾಜ್ಯದಲ್ಲಿ ಗುಣಮುಖರಾಗಿದ್ದಾರೆ . ನಮ್ಮ ರಾಜ್ಯದಲ್ಲಿ ಏಳು ಟೆಸ್ಟಿಂಗ್ ಲ್ಯಾಬ್ ಗಳಿವೆ. ಮಹಾರಾಷ್ಟ್ರ ಸೇರಿ ಹಲವು ದೊಡ್ಡ ರಾಜ್ಯಗಳಲ್ಲಿ ಕೇವಲ ಎರಡು ಮೂರು ಲ್ಯಾಬ್ ಗಳು ಮಾತ್ರ ಇವೆ.'' ಎಂದು ಸಿದ್ದರಾಮಯ್ಯ ಪ್ರಶ್ನೆಗೆ ಸುಧಾಕರ್ ಪ್ರತಿಕ್ರಿಯೆ ನೀಡಿದರು.'' -ಡಾ.ಕೆ.ಸುಧಾಕರ್, ಸಚಿವ