ಬಳ್ಳಾರಿ ವಿಮ್ಸ್ನ ಮೂವರು ರೋಗಿಗಳ ಸಾವಿಗೆ ಸರ್ಕಾರವೇ ಹೊಣೆ; ಸಿದ್ದರಾಮಯ್ಯ ಆಕ್ರೋಶ
ಬೆಂಗಳೂರು, ಸೆ.15: ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಪೂರೈಕೆಯ ಸಮಸ್ಯೆಯಿಂದಾಗಿ ಮೂವರು ರೋಗಿಗಳು ಮೃತಪಟ್ಟ ಘಟನೆಗೆ ರಾಜ್ಯ ಸರ್ಕಾರವೇ ಇದರ ಹೊಣೆ ಹೊರಬೇಕು ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ. ಘಟನೆ ಕುರಿತಂತೆ ಸದನದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
"ಬಳ್ಳಾರಿಯ ವಿಜಯನಗರ ಮೆಡಿಕಲ್ ಕಾಲೇಜಿನಲ್ಲಿ ನಿನ್ನೆ ಬೆಳಗ್ಗೆ 8 -10 ಗಂಟೆವರೆಗೆ ವಿದ್ಯುತ್ ಇರಲಿಲ್ಲ. ಇದೇ ಸಮಯದಲ್ಲಿ ಜನರೇಟರ್ ಕೂಡ ಕೆಲಸ ಮಾಡುತ್ತಿರಲಿಲ್ಲ. ಹೀಗಾಗಿ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ರೋಗಿಗಳು ವೆಂಟಿಲೇಟರ್ ಮೂಲಕ ಆಮ್ಲಜನಕ ಪೂರೈಕೆಯಾಗದೆ ಸಾವನ್ನಪ್ಪಿದ್ದಾರೆ. ಈ ಘಟನೆಗೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳೇ ನೇರ ಹೊಣೆ" ಎಂದಿದ್ದಾರೆ.
ಜನರೇಟರ್ ಹಾಳಾಗಿರುವುದು ಗೊತ್ತಿದ್ದೂ ಬದಲಿ ವ್ಯವಸ್ಥೆ ಮಾಡಿಲ್ಲ!
"ಈ ಘಟನೆಗೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳೇ ನೇರ ಹೊಣೆ. ಜನರೇಟರ್ ಹಾಳಾಗಿರುವುದು ಗೊತ್ತಿದ್ದೂ ಜಿಲ್ಲಾಧಿಕಾರಿಗಳು ಬದಲಿ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ತೋರಿದ್ದರಿಂದ ಮೂವರು ಅಮಾಯಕರು ಬಲಿಯಾಗಿದ್ದಾರೆ. ಘಟನೆಗೆ ಕಾರಣರಾದ ವೈದ್ಯಕೀಯ ಕಾಲೇಜಿನ ನಿರ್ದೇಶಕರು ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ. ಏನಿದರ ಅರ್ಥ?" ಎಂದು ಪ್ರಶ್ನಿಸಿದ್ದಾರೆ.
"ರಾಜ್ಯ ಸರ್ಕಾರ ಇದರ ಹೊಣೆ ಹೊರಬೇಕು. ವೈದ್ಯಕೀಯ ಕಾಲೇಜಿನಲ್ಲಿ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಆದಾಗ ಬದಲಿ ವ್ಯವಸ್ಥೆ ಇಲ್ಲವೆಂದರೆ ಹೇಗೆ? ವರ್ಷ ಪೂರ್ತಿ ವಿದ್ಯುತ್ ಅನ್ನೇ ನಂಬಿಕೊಂಡು ಚಿಕಿತ್ಸೆ ಕೊಡಲು ಆಗುತ್ತಾ? ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಈ ವಿಚಾರ ಬಂದಿದೆಯೋ ಇಲ್ವೋ ನನಗೆ ಗೊತ್ತಿಲ್ಲ" ಎಂದಿದ್ದಾರೆ.
ಆಡಳಿತ ವ್ಯವಸ್ಥೆಯ ತಪ್ಪಿನಿಂದ ಆದ ಸಾವುಗಳು
"ಆಸ್ಪತ್ರೆಯಲ್ಲಿ ಜನರೇಟರ್ ಅನ್ನು ಸುಸ್ಥಿತಿಯಲ್ಲಿಡುವುದು ವೈದ್ಯಕೀಯ ಕಾಲೇಜಿನ ಜವಾಬ್ದಾರಿ. ಜನರೇಟರ್ ಹಾಳಾಗಿದ್ದರೆ ಬೇರೆ ಖರೀದಿ ಮಾಡೋಕೆ ಜಿಲ್ಲಾಧಿಕಾರಿಗಳ ಬಳಿ ಅನುದಾನ ಇರುತ್ತದೆ, ಅನುಮತಿ ಕೊಡೋಕೆ ಅಸಿಸ್ಟೆಂಟ್ ಕಮಿಷನರ್ ನೇತೃತ್ವದ ಸಮಿತಿ ಇರುತ್ತೆ. ಯಾಕೆ ಮಾಡಿಲ್ಲ..?" ಎಂದು ಆಕ್ರೋಶ ಹೊರಹಾಕಿದ್ದಾರೆ.
"ಮೃತರ ಸಂಬಂಧಿಕರು ನೋವಿನಿಂದ ಗೋಳಾಡುತ್ತಿದ್ದಾರೆ. ಇವು ಸಹಜವಾದ ಅಥವಾ ರೋಗದಿಂದ ಉಂಟಾದ ಸಾವುಗಳಲ್ಲ. ಆಡಳಿತ ವ್ಯವಸ್ಥೆಯ ತಪ್ಪಿನಿಂದ ಇವರು ಸತ್ತಿರುವುದು. ಹಾಗಾಗಿ ಮೃತರ ಕುಟುಂಬಕ್ಕೆ ಸರ್ಕಾರ ನೆರವಿಗೆ ನಿಲ್ಲಲೇಬೇಕು. ಆರೋಗ್ಯ ಇಲಾಖೆಯು ಮೂವರು ರೋಗಿಗಳ ಸಾವಿನ ಹೊಣೆಹೊತ್ತು ಘಟನೆಗೆ ಕಾರಣರಾದ ಎಲ್ಲಾ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಮೃತ ದುರ್ದೈವಿಗಳ ಕುಟುಂಬಕ್ಕೆ ಕನಿಷ್ಠ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು" ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ತುರ್ತು ವರದಿಗೆ ಆರೋಗ್ಯ ಸಚಿವ ಡಾ. ಸುಧಾಕರ್ ಸೂಚನೆ
"ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 14 ಸಂಭವಿಸಿದ ಘಟನೆ ಅತ್ಯಂತ ದುರದೃಷ್ಟಕರವಾಗಿದೆ. ಘಟನೆಯ ಬಗ್ಗೆ ಸೂಕ್ತ ಇಲಾಖಾ ತನಿಖೆ ನಡೆಸಿ ಆಡಳಿತಾತ್ಮಕ ಹಾಗೂ ತಾಂತ್ರಿಕ ಲೋಪದೋಷಗಳ ಬಗ್ಗೆ ವರದಿ ನೀಡಲು ಬಿಎಂಸಿಆರ್ಐ ಸಂಸ್ಥೆಯ ಡಾ.ಸ್ಮಿತಾ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿದೆ'' ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಸಂಭವಿಸಿದ ಎರಡು ಅನಿರೀಕ್ಷಿತ ಸಾವುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ತನಿಖೆ ನಡೆಸುವ ಸಲುವಾಗಿ ಐದು ಸದಸ್ಯರನ್ನೊಳಗೊಂಡಂತೆ ಸಮಿತಿಯೊಂದನ್ನು ರಚಿಸಲಾಗಿದೆ. ಜೊತೆಗೆ ಈ ಸದಸ್ಯರಿಗೆ ತುರ್ತಾಗಿ ವರದಿಯನ್ನು ನೀಡುವಂತೆ ಕೋರಲಾಗಿದೆ ಎಂದು ತಿಳಿಸಿದ್ದಾರೆ.
ವೆಂಟಿಲೇಟರ್ ಸ್ಥಗಿತಗೊಂಡು ಮೃತಪಟ್ಟ ರೋಗಿಗಳು
ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆಯಿಂದ ವೆಂಟಿಲೇಟರ್ ಸ್ಥಗಿತಗೊಂಡ ಪರಿಣಾಮ ಮೂವರು ರೋಗಿಗಳು ಸೆಪ್ಟೆಂಬರ್ 14 ರಂದು ಸಾವನ್ನಪ್ಪಿದ್ದಾರೆ. ವೆಂಟಿಲೇಟರ್ನಲ್ಲಿದ್ದ ರೋಗಿಗಳಾದ ಮೌಲಾ ಹುಸೇನ್ ಹಾಗೂ ಚೆಟ್ಟೆಮ್ಮ ಕೊನೆಯುಸಿರೆಳೆದಿದ್ದಾರೆ. ಮೂತ್ರಕೋಶ ವೈಫಲ್ಯದಿಂದ ಬಳಲುತ್ತಿದ್ದ ಮತ್ತೊಬ್ಬ ರೋಗಿ ಸಹ ಸಾವನ್ನಪ್ಪಿದ್ದಾರೆ. ಐಸಿಯುನಲ್ಲಿ 10 ರೋಗಿಗಳಿದ್ದರು. ಇವರಲ್ಲಿ ಮೂವರು ಅಸುನೀಗಿದ್ದಾರೆ. ಘಟನೆ ನಡೆದ ಬಳಿಕ ವಿಮ್ಸ್ ಆಸ್ಪತ್ರೆಯವಿರುದ್ಧ ಮೃತರ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ. ತಮ್ಮ ಸಂಬಂಧಿಕರ ಸಾವಿಗೆ ಆಸ್ಪತ್ರೆಯ ನಿರ್ಲಕ್ಷ್ಯವೇ ಕಾರಣ ಎಂದು ದೂರಿದ್ದಾರೆ.