ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಹಿರಿಯರ ನಾಯಕರ ಪ್ರತಿಭಟನೆ
ಬೆಂಗಳೂರು, ಅಕ್ಟೋಬರ್ 07: ಸಿದ್ದರಾಮಯ್ಯ ಪರ ಮತ್ತು ವಿರೋಧ ಬಣಗಳ ನಡುವಿನ ಕಿತ್ತಾಟ ತಾರಕಕ್ಕೆ ಏರಿದೆ.
ಸಿದ್ದರಾಮಯ್ಯ ವಿರೋಧಿ ಬಣ ನಿನ್ನೆ ಕೆಪಿಸಿಸಿ ಕಚೇರಿಯ ಎದುರು ಮೌನ ಪ್ರತಿಭಟನೆ ಮಾಡಿದೆ. ಕೆ.ಎಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್ ಇನ್ನೂ ಹಲವು ಮುಖಂಡರು 'ಕಾಂಗ್ರೆಸ್ ನವರಿಗೆ ಕಾಂಗ್ರೆಸ್ ಉಳಿಸೋ ಬುದ್ಧಿ ಕೊಡು ಭಗವಂತಾ' ಎಂಬ ಫ್ಲೆಕ್ಸ್ ಕಟ್ಟಿಕೊಂಡು ಕೆಪಿಸಿಸಿ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಿದ್ದಾರೆ.
ವಿರೋಧ ಪಕ್ಷ ಸ್ಥಾನಕ್ಕೆ ಸದ್ಯಕ್ಕೆ ಕಿತ್ತಾಟ ಜೋರಾಗಿದ್ದು, ಪರಮೇಶ್ವರ್ ಅಥವಾ ಎಚ್.ಕೆ.ಪಾಟೀಲ್ ಅವರಿಗೆ ವಿರೋಧ ಪಕ್ಷ ಸ್ಥಾನ ನೀಡಬೇಕೆಂದು ಕೆಲವರು. ಸಿದ್ದರಾಮಯ್ಯ ಅವರಿಗೆ ನೀಡಬೇಕೆಂದು ಕೆಲವರು ಹೈಕಮಾಂಡ್ ಅನ್ನು ಒತ್ತಾಯಿಸಿದ್ದಾರೆ.
ನಿನ್ನೆ ರಾಜ್ಯಕ್ಕೆ ಆಗಮಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ ಮಿಸ್ತ್ರಿ ಅವರನ್ನು ಭೇಟಿಯಾಗಿದ್ದ ಸಿದ್ದರಾಮಯ್ಯ ವಿರೋಧಿ ಬಣ, ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಆಪ್ತರು ಕಾರಣವಾಗಿದ್ದಾರೆ. ಸಿದ್ದರಾಮಯ್ಯ ಅವರಿಂದಲೇ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹಿನ್ನಡೆ ಆಗಿದೆ ಎಂದು ದೂರಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ ಮಿಸ್ತ್ರಿ ಆಗಮನ
ನಿನ್ನೆ ನಗರಕ್ಕೆ ಆಗಮಿಸಿದ್ದ ಎಐಸಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ ಮಿಸ್ತ್ರಿ ಅವರು ರ್ಯಾಡಿಸನ್ ಬ್ಲೂ ಹೋಟೆಲ್ನಲ್ಲಿ ಬೆಳಿಗ್ಗಿನಿಂದ ಸಂಜೆ ವರೆಗೂ ಕಾಂಗ್ರೆಸ್ ಪ್ರಮುಖರ ಜೊತೆ ಸಭೆ ನಡೆಸಿದರು.
63 ಪ್ರಮುಖರ ಅಭಿಪ್ರಾಯ ಸಂಗ್ರಹಣೆ
22 ಶಾಸಕರು, 28 ಮಾಜಿ ಸಂಸದರು, 6 ವಿಧಾನ ಪರಿಷತ್ ಸದಸ್ಯರು ಸೇರಿ 63 ಪ್ರಮುಖರ ಅಭಿಪ್ರಾಯ ಸಂಗ್ರಹಿಸಿದ ಅವರು ವಿಪಕ್ಷ ನಾಯಕ ಸ್ಥಾನ, ಶಾಸಕಾಂಗ ಪಕ್ಷದ ನಾಯಕ ಸ್ಥಾನ ಇನ್ನೂ ಕೆಲವು ಪ್ರಮುಖ ಸ್ಥಾನಗಳನ್ನು ಯಾರಿಗೆ ನೀಡಬೇಕು ಎಂಬ ಬಗ್ಗೆ ಎಂಬ ಬಗ್ಗೆ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ.
ಕೆಲವೇ ದಿನದಲ್ಲಿ ವಿಪಕ್ಷ ನಾಯಕ ಘೋಷಣೆ
ರಾಜ್ಯದ ಕಾಂಗ್ರೆಸ್ ನಾಯಕರಿಂದ ಸಂಗ್ರಹಿಸಿದ ಅಭಿಪ್ರಾಯಗಳನ್ನು ಹೈಕಮಾಂಡ್ಗೆ ವರದಿ ಒಪ್ಪಿಸಿದ ನಂತರ ಇನ್ನೆರಡು-ಮೂರು ದಿನಗಳಲ್ಲಿ ವಿಪಕ್ಷ ನಾಯಕ ಘೋಷಣೆ ಮಾಡಲಾಗುವುದು.
ಎರಡೂ ಬಣದ ನಾಯಕರು ದೆಹಲಿಗೆ ತೆರಳಿದ್ದಾರೆ
ಇಂದು ಎರಡೂ ಬಣದ ಕೆಲವು ನಾಯಕರುಗಳು ದೆಹಲಿಗೆ ತೆರಳಿದ್ದು, ಅಲ್ಲಿ ಹೈಕಮಾಂಡ್ ಅನ್ನು ಭೇಟಿ ಆಗುವ ಪ್ರಯತ್ನ ನಡೆಸಿದ್ದಾರೆ. ಕೆ.ಎಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್, ಎಚ್.ಕೆ.ಪಾಟೀಲ್ ಅವರುಗಳು ಸಿದ್ದರಾಮಯ್ಯ ವಿರೋಧಿ ಬಣದಲ್ಲಿದ್ದಾರೆ.