ದಲಿತನಾಗಿರುವುದಕ್ಕೆ ಸಿಎಂ ಆಗಲಿಲ್ಲ, ಪರಂ ಹೇಳಿಕೆಗೆ ಸಿದ್ದು ಏನಂದ್ರು?
ಬೆಂಗಳೂರು, ಫೆಬ್ರವರಿ 25: ದಲಿತನಾಗಿರುವ ಕಾರಣಕ್ಕೆ ನನಗೆ ಮೂರು ಬಾರಿ ಮುಖ್ಯಮಂತ್ರಿ ಪಟ್ಟ ಕೈತಪ್ಪಿತು ಎಂಬ ಹಾಲಿ ಉಪಮುಖ್ಯಮಂತ್ರಿ ಡಾ.ಜಿಪರಮೇಶ್ವರ್ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
"ದಲಿತರ ಮತ್ತು ಸಮಾಜದಲ್ಲಿ ನಿರ್ಲಕ್ಷ್ಯಕ್ಕೊಳಗಾದ ಸಮುದಾಯದ ಬಗ್ಗೆ ನಿಜವಾದ ಕಾಳಜಿ ತೋರುತ್ತಿರುವ ಪಕ್ಷವೊಂದಿದ್ದರೆ ಅದು ಕಾಂಗ್ರೆಸ್. ಆದರೆ ಪರಮೇಶ್ವರ್ ಅವರು ಯಾವ ಅರ್ಥದಲ್ಲಿ ಈ ಮಾತನ್ನು ಹೇಳಿದರೋ ಗೊತ್ತಿಲ್ಲ. ಆದ್ದರಿಂದ ಈ ಕುರಿತು ಅವರನ್ನೇ ಕೇಳುವುದು ಒಳಿತು" ಎಂದು ಪತ್ರಕರ್ತರಿಗೆ ಸಿದ್ದರಾಮಯ್ಯ ಹೇಳಿದರು.
ದಲಿತನಾಗಿರುವುದಕ್ಕೆ 3 ಬಾರಿ ಸಿಎಂ ಪಟ್ಟ ಕೈತಪ್ಪಿತು: ಪರಮೇಶ್ವರ್
ದಾವಣಗೆರೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್ ನಾಯಕ ಜಿ ಪರಮೇಶ್ವರ್, "ನಾನು ದಲಿತ ಸಮುದಾಯಕ್ಕೆ ಸೇರಿದವನಾಗಿರುವ ಕಾರಣ ಮೂರು ಬಾರು ಮುಖ್ಯಮಂತ್ರಿ ಹುದ್ದೆ ಕೈತಪ್ಪಿತು. ಪಿಕೆ ಬಸವಲಿಂಗಪ್ಪ, ಕೆ ಎಚ್ ರಂಗನಾಥ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೂ ಮುಖ್ಯಮಂತ್ರಿ ಹುದ್ದೆ ಕೈತಪ್ಪಿತು. ಏನೇ ಆಗಲಿ, ನನ್ನನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿದರು" ಎಂದಿದ್ದರು.
ಪರಮೇಶ್ವರ್ ಅವರ ಮಾತು ಕಾಂಗ್ರೆಸ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ.