ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶತದಡ್ಡ: ಸಚಿವ ಈಶ್ವರಪ್ಪ ವಾಗ್ದಾಳಿ
Recommended Video
ಬೆಂಗಳೂರು, ಆಗಸ್ಟ್ 29: ತಮ್ಮನ್ನು 'ಮೂರ್ಖ' ಎಂದು ಟೀಕಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶತದಡ್ಡ ಎಂದು ಸಚಿವ ಈಶ್ವರಪ್ಪ ಕಿಡಿಕಾರಿದ್ದಾರೆ.
ಕರ್ನಾಟಕದಲ್ಲಿ ಆಪರೇಷನ್ ಜನಕರೇ ಸಿದ್ದರಾಮಯ್ಯ ಎಂಬ ಆರೋಪವನ್ನು ಗುರುವಾರ ಪುನರುಚ್ಚರಿಸಿದ ಅವರು, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿಕೊಳ್ಳಲು ಎಷ್ಟು ಹಣ ತೆಗೆದುಕೊಂಡಿದ್ದೀರಿ ಎಂದು ಪ್ರಶ್ನಿಸಿದರು.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ''ಸಿದ್ದರಾಮಯ್ಯ ಅವರಿಗೆ ಒಂದೇ ಪಕ್ಷದಲ್ಲಿ ಇರಲು ಆಗಲಿಲ್ಲವಾ? ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಹೋಗಿದ್ದು ಏಕೆ?'' ಎಂದು ಪ್ರಶ್ನಿಸಿದರು.
"ಯಡಿಯೂರಪ್ಪ ಮೂರ್ಖ, ಅಲ್ಲಲ್ಲ ಈಶ್ವರಪ್ಪ ಮೂರ್ಖ"
''ನಾವು ಆಪರೇಷನ್ ಕಮಲ ಮಾಡಿದ್ದೇವೆ ಎಂದು ಕಾಂಗ್ರೆಸ್ನವರು ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಅವರೇ ಅಪರೇಷನ್ ಜನಕ. ಅಂತಹ ಶತದಡ್ಡನ ಪ್ರಶ್ನೆಗೆ ನಾನು ಉತ್ತರಿಸಬೇಕೇ?'' ಎಂದು ಅವರು ಕಿಡಿಕಾರಿದರು.
ಉಚ್ಚಾಟನೆ ಮಾಡಿದ್ದು ಏಕೆ?
''ಇದೇ ಸಿದ್ದರಾಮಯ್ಯ ಅವರು ಜೆಡಿಎಸ್ನಿಂದ ಕಾಂಗ್ರೆಸ್ಗೆ ಬಂದಾಗ ಅವರಿಗೆ ಅಧಿಕಾರದ ಆಸೆ ತೋರಿಸಿರಲಿಲ್ಲವೇ? ಹಾಗೆ ನೀಡದೆ ಇದ್ದಿದ್ದರೆ ಅವರೇಕೆ ಕಾಂಗ್ರೆಸ್ಗೆ ಹೋದರು? ಹಣ ಪಡೆದುಕೊಂಡಿದ್ದಕ್ಕೆ ಪಕ್ಷದಿಂದ ಉಚ್ಚಾಟಿಸಿದರಾ ಅಥವಾ ಪಕ್ಷದ್ರೋಹ ಮಾಡಿದ್ದಕ್ಕೆ ಉಚ್ಚಾಟಿಸಿದರಾ? ಜೆಡಿಎಸ್ನಿಂದ ಕಾಂಗ್ರೆಸ್ ಹೋಗುವಾಗ ಎಷ್ಟು ಹಣ ತೆಗೆದುಕೊಂಡಿದ್ದೀರಿ'' ಎಂದು ಕೇಳಿದರು.
ಸಿದ್ದರಾಮಯ್ಯ ಮೊದಲ ಪಕ್ಷದ್ರೋಹಿ
''ಸಿದ್ದರಾಮಯ್ಯ ಅವರು ಪಕ್ಷದ್ರೋಹಿ ಆಗಿದ್ದರಿಂದಲೇ ಅವರನ್ನು ಜೆಡಿಎಸ್ನಿಂದ ಹೊರಹಾಕಿದ್ದು. ನೀವು ಮೊದಲ ಪಕ್ಷದ್ರೋಹಿ. ಈಗ ಇದೇ ಆರೋಪದಲ್ಲಿ ಹಲವರನ್ನು ಪಕ್ಷದಿಂದ ಹೊರಹಾಕಿದ್ದೀರಿ. ಹೌದು. ಅವರ ತ್ಯಾಗದಿಂದಲೇ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ಖಂಡಿತಾ ಅವರಿಗೆ ಸೂಕ್ತ ಸ್ಥಾನಮಾನ ನೀಡುತ್ತೇವೆ'' ಎಂದು ಹೇಳಿದರು.
ಈಶ್ವರಪ್ಪ ಅವರ ಈ ಟ್ವೀಟ್ ಬೆಂಬಲಿಗರ ಆಕ್ರೋಶವನ್ನು ಶಮನಗೊಳಿಸುತ್ತಾ?
ಸಿದ್ದರಾಮಯ್ಯ ಸೋಲಿಗೆ ಅವರ ಭಾಷೆಯೇ ಕಾರಣ
''ನಾನು ಒಮ್ಮೆ ಸೋಲನ್ನು ಅನುಭವಿಸಿದ್ದು ನಿಜ. ಈಗ ಗೆದ್ದಿದ್ದೇನೆ. ಸುಮ್ಮನೇ ನನ್ನ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನೀವು ಏಕೆ ಸೋತಿರಿ? ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಮತ್ತೆ ಸ್ಪರ್ಧಿಸಿ ಗೆಲ್ಲಲಿ ಎಂದು ಸವಾಲು ಹಾಕಿದರು. ಸಿದ್ದರಾಮಯ್ಯ ಅವರ ಸೋಲಿಗೆ ಅವರ ಭಾಷೆಯೇ ಕಾರಣ'' ಎಂದು ಟೀಕಿಸಿದರು.
ಸಿಎಂ ಆಗಿದ್ದಾಗ ಎಲ್ಲೂ ಹೋಗಿರಲಿಲ್ಲ
''ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದಲ್ಲಿ ಬರ ಆವರಿಸಿತ್ತು. ಮೈತ್ರಿ ಸರ್ಕಾರ ಬಂದಾಗಲೂ ಕೂಡ ಯಾರೂ ಜನರ ಕಷ್ಟ ಆಲಿಸಲಿಲ್ಲ. ಯಾರೂ ರಾಜ್ಯದಲ್ಲಿ ಪ್ರವಾಸ ಮಾಡಲಿಲ್ಲ. ಟೀಕೆ ಮಾಡಲೇಬೇಕೆಂದು ಸಿದ್ದರಾಮಯ್ಯ ಮಾತನಾಡಿದ್ದಾರೆ. ನಾವು ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಜನರೊಂದಿಗೆ ಪ್ರವಾಸ ಮಾಡುತ್ತಿದ್ದೇವೆ. ಪ್ರಧಾನಿ ಅವರು ರಾಜ್ಯಕ್ಕೆ ಬಂದಿಲ್ಲ ಎಂದು ಕಾಂಗ್ರೆಸ್ ಆರೋಪ ಮಾಡುವುದು ಸಹಜ. ಆದರೆ, ಕೇಂದ್ರದಿಂದ ಅಮಿತ್ ಶಾ ಮತ್ತು ನಿರ್ಮಲಾ ಸೀತಾರಾಮನ್ ಭೇಟಿ ನೀಡಿದ್ದಾರೆ. ಸೆ. 6-7ರಂದು ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ'' ಎಂದು ಹೇಳಿದರು.