ಟಿಪ್ಪು ಧರ್ಮಾತೀತ, ಮಹಾಪುರುಷ: ಸಿದ್ದರಾಮಯ್ಯ
ಟಿಪ್ಪು ಸುಲ್ತಾನ್ ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಟಿಪ್ಪು ಎಲ್ಲ ಜಾತಿ, ಧರ್ಮಗಳ ನಾಯಕ, ಮಹಾಪುರುಷರ ಜಯಂತಿ ಆಚರಣೆಯ ಸಂಪ್ರದಾಯ ನಡೆದುಕೊಂಡು ಬಂದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು, ನ.10: ಟಿಪ್ಪು ಸುಲ್ತಾನ್ ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಟಿಪ್ಪು ಎಲ್ಲ ಜಾತಿ, ಧರ್ಮಗಳ ನಾಯಕ, ಮಹಾಪುರುಷರ ಜಯಂತಿ ಆಚರಣೆಯ ಸಂಪ್ರದಾಯ ನಡೆದುಕೊಂಡು ಬಂದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಇದೇ ಮೊದಲ ಬಾರಿಗೆ ಕಾರ್ಯಕ್ರಮದ ಆಯೋಜನೆಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಬದಲಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಹಿಸಿಕೊಂಡಿತ್ತು.
ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ನಡೆದ ಟಿಪ್ಪು ಜಯಂತಿ ಆಚರಣಾ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿ ಅವರು ಮಾತನಾಡಿದರು.
ಟಿಪ್ಪು ಸುಲ್ತಾನ್ ಜಯಂತಿ ಸಮಾರಂಭದಲ್ಲಿ ಟಿಪ್ಪು ಭಾವಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಷ್ಪವೃಷ್ಠಿ ಮೂಲಕ ನಮನ ಸಲ್ಲಿಸಿದರು. ವಿಧಾನಸಭಾಧ್ಯಕ್ಷರಾದ ಕೆ.ಬಿ.ಕೋಳಿವಾಡ, ಸಚಿವರಾದ ರೋಷನ್ ಬೇಗ್, ಕೆ.ಜೆ.ಜಾರ್ಜ್ ಹಾಗೂ ಉಮಾಶ್ರೀ ಅವರು ಉಪಸ್ಥಿತರಿದ್ದರು.
ಸಿಎಂ ಸಿದ್ದರಾಮಯ್ಯ ಹೇಳಿಕೆ
ಟಿಪ್ಪು ಸುಲ್ತಾನ ಜಯಂತಿ ಆಚರಣೆ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡ್ತಿದೆಯೋ ಅಥವಾ ಕಾಂಗ್ರೆಸ್ ರಾಜಕೀಯ ಮಾಡ್ತಿದೆಯೋ ಜನ ತೀರ್ಮಾನ ಮಾಡಲಿ. 1857 ರಿಂದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಆರಂಭ ಆಯ್ತು ಅಂತ ಹೇಳಲಾಗುತ್ತೆ. ಆದ್ರೆ ನಿಜವಾದ ಸ್ವಾತಂತ್ರ್ಯ ಹೋರಾಟ ಆಂಗ್ಲೋ ಮೈಸೂರ್ ಯುದ್ಧದಿಂದಲೇ ಪ್ರಾರಂಭವಾಗಿತ್ತು ಅಂತಾ ನನಗೆ ಅನಿಸುತ್ತದೆ ಎಂದು ಸಿದ್ದರಾಮಯ್ಯ ತಮ್ಮ್ಮ ಇತಿಹಾಸ ಜ್ಞಾನ ಪ್ರದರ್ಶಿಸಿದರು.
ಬಿಜೆಪಿ ನಾಯಕರ ದ್ವಂದ್ವ ನಿಲುವು
ಬಿಜೆಪಿ ನಾಯಕರು ಟಿಪ್ಪು ಟೋಪು ಹಾಕಿಕೊಂಡು ಅಂದು ಟಿಪ್ಪು ಬಗ್ಗೆ ಹಾಡಿ ಹೊಗಳಿದ್ದ ಬಿಜೆಪಿ ನಾಯಕರು ಈಗ ರಾಜಕೀಯ ಸ್ವಾರ್ಥಕ್ಕೋಸ್ಕರ ಟಿಪ್ಪು ಮತಾಂದ ಅಂತಿದ್ದಾರೆ.. ಟಿಪ್ಪು ಮತಾಂಧನಲ್ಲ.. ಆದ್ರೆ ಈ ಬಿಜೆಪಿಯವರು ಮತಾಂಧರು
ಕನ್ನಡ ನಾಡಿನ ಹೆಮ್ಮೆಯ ವ್ಯಕ್ತಿ
ಟಿಪ್ಪು ಸುಲ್ತಾನ್ ಎಲ್ಲ ಜಾತಿ, ಧರ್ಮಗಳ ನಾಯಕ. ಆತ ಕನ್ನಡ ನಾಡಿನ ಹೆಮ್ಮೆಯ ವ್ಯಕ್ತಿ. ಹೀಗಾಗಿ ರಾಜ್ಯ ಸರಕಾರವು ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ಹೇಳಿದರು.
ನಿಡುಮಾಮಿಡಿ ಶ್ರೀ ಗಳು ಹೇಳಿಕೆ
ಸಾವಿರ ಸುಳ್ಳುಗಳನ್ನ ಹೇಳುವ ಮುಖಾಂತರ ಇತಿಹಾಸ ತಿರುಚುವ ಕಾರ್ಯವನ್ನ ಕೆಲವರು ಮಾಡ್ತಿದ್ದಾರೆ. ಸಮಾಜದಲ್ಲಿ ಕೋಮುವಾದವನ್ನ ಬಿತ್ತುವ ಕೆಲಸ ನಡೆಯುತ್ತಿದೆ. ಟಿಪ್ಪು ಜಯಂತಿ ಆಚರಣೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ನಿಡುಮಾಮಿಡಿ ಶ್ರೀಗಳು ಹೇಳಿದರು.