ದೇವೇಗೌಡರು ತುಳಿದ ರಾಜಕಾರಣಿಗಳ ಪಟ್ಟಿ ನೀಡಿದ ಸಿದ್ದರಾಮಯ್ಯ
Recommended Video
ಬೆಂಗಳೂರು, ಆಗಸ್ಟ್ 23: ತಮ್ಮ ವಿರುದ್ಧ ಸರ್ಕಾರ ಉರುಳಿಸಿದ ಆರೋಪ ಮಾಡಿದ ದೇವೇಗೌಡರ ವಿರುದ್ಧ ಭಾರಿ ಗರಂ ಆಗಿದ್ದಾರೆ ಸಿದ್ದರಾಮಯ್ಯ. ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ಆರೋಪಗಳಿಗೆ ಸ್ಪಷ್ಟನೆ ನೀಡುವ ಜೊತೆಗೆ ದೇವೇಗೌಡರ ರಾಜಕೀಯ ಇತಿಹಾಸ ಬಿಚ್ಚಿಟ್ಟಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮೈತ್ರಿ ಸರ್ಕಾರ ಪತನಕ್ಕೆ ನಾನು ಕಾರಣ ಅಲ್ಲ ಎಂದಿದ್ದಾರೆ. ಜೊತೆಗೆ ಸರ್ಕಾರ ಪತನಕ್ಕೆ ಸ್ವತಃ ದೇವೇಗೌಡ-ಕುಮಾರಸ್ವಾಮಿ ಅವರೇ ಕಾರಣ ಎಂದಿದ್ದಾರೆ.
ದೇವೇಗೌಡ ಹಾಗೂ ಕುಮಾರಸ್ವಾಮಿ ಅವರುಗಳಿಗೆ ಸರ್ಕಾರ ಬೀಳಿಸುವುದು ಹಳೆಯ ಚಾಳಿ ಎಂದ ಸಿದ್ದರಾಮಯ್ಯ, ದೇವೇಗೌಡ ಅವರು ಧರ್ಮಸಿಂಗ್ ಸರ್ಕಾರ ಬೀಳಿಸಿದರು, ಬೊಮ್ಮಾಯಿ ಸರ್ಕಾರ ಬೀಳಿಸಿದರು, ಯಡಿಯೂರಪ್ಪ ಸರ್ಕಾರವನ್ನೂ ಬೀಳಿಸಿದರು ಎಂದು ಹೇಳಿದರು.
ದೇವೇಗೌಡರು ಯಾರನ್ನೂ ಬೆಳೆಯಲು ಬಿಡುವುದಿಲ್ಲ ಎಂದ ಸಿದ್ದರಾಮಯ್ಯ, ಬೈರೇಗೌಡ, ಜೀವರಾಜ್ ಆಳ್ವಾ, ಗೊವಿಂದೇಗೌಡ, ಬಿ.ಎನ್.ಬಚ್ಚೇಗೌಡ ಇವರೆಲ್ಲರನ್ನೂ ರಾಜಕೀಯವಾಗಿ ತುಳಿದವರ ಯಾರು? ಎಂದು ಪ್ರಶ್ನೆ ಮಾಡಿದರು. ಪಟ್ಟಿ ಇನ್ನೂ ಉದ್ದವಿದೆ ಎಂದೂ ಸಿದ್ದರಾಮಯ್ಯ ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಗಟ್ಟಿಯಾಗಲು ದೇವೇಗೌಡರೇ ಕಾರಣ
ರಾಜ್ಯದಲ್ಲಿ ಬಿಜೆಪಿ ಗಟ್ಟಿಯಾಗಲು ದೇವೇಗೌಡರೇ ಕಾರಣ ಎಂದ ಅವರು, ಆಗ ಧರ್ಮಸಿಂಗ್ ಸರ್ಕಾರ ಬೀಳಿಸಲು ದೇವೇಗೌಡರೇ ಕಾರಣ. ಕುಮಾರಸ್ವಾಮಿಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಅವರೇ ಸೂಚಿಸಿದ್ದರು. ಕೊನೆಗೆ ಅವರಿಗೆ ಅಧಿಕಾರ ಬಿಟ್ಟುಕೊಡದೇ ಮಾತುತಪ್ಪಿದರು ಎಂದರು.
ಸರ್ಕಾರ ಕೆಡವುದರಲ್ಲಿ ದೇವೇಗೌಡರು ನಿಸ್ಸೀಮರು: ಸಿದ್ದರಾಮಯ್ಯ
ಸರ್ಕಾರ ಕೆಡವೋದ್ರಲ್ಲಿ ದೇವೇಗೌಡ್ರು ನಿಪುಣರು ಇತಿಹಾಸ ಕೆದಕಿದ್ರೆ ಯಾರು ಏನ್ ಮಾಡಿದ್ರು ಎಲ್ಲ ಬಣ್ಣ ಬಯಲಾಗುತ್ತೆ. ಧರಂಸಿಂಗ್ ಸರ್ಕಾರ ಇದ್ದಾಗ ಏನ್ ಮಾಡಿದ್ರು ಗೊತ್ತಿಲ್ವಾ. ಧರಂಸಿಂಗ್ ಸರ್ಕಾರ ತೆಗೆದು ಬಿಜೆಪಿ ಜತೆ ಕುಮಾರಸ್ವಾಮಿ ಕೈಜೋಡಿಸಲು ದೇವೇಗೌಡ ಕಾರಣ.
2004 ರ ಘಟನೆ ನೆನಪಿಸಿದ ಸಿದ್ದರಾಮಯ್ಯ
ಶರದ್ ಪವಾರ್ ಮನೆಯಲ್ಲಿ 2004ರಲ್ಲಿ ಸಭೆ ನಡೆದಿತ್ತು. ಸರ್ಕಾರ ರಚನೆಯ ಗೊಂದಲ ಇತ್ತು. ಇದೇ ದೇವೇಗೌಡರು ನನ್ನ ಎದುರು ಮಾತನಾಡಿದ್ದರು. ನನ್ನನ್ನು ಸಿಎಂ ಮಾಡುವುದು ಬೇಡ ಎಂದಿದ್ದರು. ನಾನು ಸಿಎಂ ಆಗುವುದನ್ನು ನೀವು ತಪ್ಪಿಸಿದಿರಿ ಎಂದು ನಾನು ವಿಧಾನಸಭೆಯಲ್ಲಿ ಹೇಳಿದಾಗ ಕುಮಾರಸ್ವಾಮಿ ಅದನ್ನು ಒಪ್ಪಿಕೊಂಡಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.
'ಜೆಡಿಎಸ್ ಪಕ್ಷದವರು ಕಾಂಗ್ರೆಸ್ ಅನ್ನು ಸೋಲಿಸಿದರು'
ಸಚಿವರಾಗಿದ್ದ ಜಿಟಿ ದೇವೇಗೌಡರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ನವರು ಬಿಜೆಪಿಗೆ ಮತ ಹಾಕಿದರು ಎಂದು ನೇರವಾಗಿ ಹೇಳಿದ್ದರು. ಹಾಸನದಲ್ಲಿ ಅವರ ಮೊಮ್ಮಗನೇ ನಿಂತಿದ್ದರು. ಅಲ್ಲಿ ಹೇಗೆ ಗೆದ್ದರು? ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಅಲ್ಲಿ ಕೆಲಸ ಮಾಡಲಿಲ್ಲವೇ? ಮಂಡ್ಯದಲ್ಲಿ ಮತ್ತು ತುಮಕೂರಿನಲ್ಲಿ ಎಂದಷ್ಟೇ ಹೇಳುತ್ತಾರೆ.