ಬೂದಿ ಮುಚ್ಚಿದ ಕೆಂಡ ಮಂಗಳೂರಿಗೆ ಸಿದ್ದರಾಮಯ್ಯ ಭೇಟಿ
Recommended Video
ಬೆಂಗಳೂರು, ಡಿಸೆಂಬರ್ 23: ಮಂಗಳೂರಿಗೆ ಭೇಟಿ ನೀಡಲು ಚಡಪಡಿಸುತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅಡೆತಡೆಗಳ ನಂತರ ಇಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ.
ಇಂದು 11 ಗಂಟೆಗೆ ಮಂಗಳೂರಿಗೆ ತೆರಳಲಿರುವ ಸಿದ್ದರಾಮಯ್ಯ ಅಲ್ಲಿನ ಧಾರ್ಮಿಕ ಮುಖಂಡರು, ಕಾಂಗ್ರೆಸ್ ಮುಖಂಡರು, ಪ್ರತಿಭಟನಾಕಾರರನ್ನು ಭೇಟಿ ಮಾಡಿ ಸಂಜೆ ವೇಳೆಗೆ ವಾಪಸ್ ಆಗಲಿದ್ದಾರೆ.
ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಇಬ್ಬರು ಪೊಲೀಸರ ಗುಂಡಿಗೆ ಬಲಿ ಆಗಿದ್ದಾರೆ. ಘಟನೆ ನಡೆದ ಮರುದಿನವೇ ಸಿದ್ದರಾಮಯ್ಯ ಮಂಗಳೂರಿಗೆ ತೆರಳಬೇಕಾಗಿತ್ತು. ಆದರೆ ಅವರ ಪ್ರವೇಶವನ್ನು ಪೊಲೀಸರು ನಿಷೇಧಿಸಿದ್ದರು.
ಸಿದ್ದರಾಮಯ್ಯ ಅವರಿಗೆ ನೊಟೀಸ್ ನೀಡಿದ ಮಂಗಳೂರು ಪೊಲೀಸ್ ಆಯುಕ್ತ, ಸಿದ್ದರಾಮಯ್ಯ ಮಂಗಳೂರಿಗೆ ಬರದಂತೆ 144 ಹೇರಿರುವುದಾಗಿ ತಿಳಿಸಿದ್ದರು. ಇದನ್ನು ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದರು.
ಮಂಗಳೂರು ಭೇಟಿಗೆ ತೆರಳಿದ್ದ ಕಾಂಗ್ರೆಸ್ ನಾಯಕರಾದ ರಮೇಶ್ ಕುಮಾರ್, ಎಂ.ಬಿ.ಪಾಟೀಲ್, ಉಗ್ರಪ್ಪ ಇನ್ನೂ ಹಲವು ನಾಯಕರನ್ನು ಪೊಲೀಸರು ವಿಮಾನ ನಿಲ್ದಾಣದಲ್ಲಿಯೇ ಬಂಧಿಸಿ ಮರಳಿ ಕಳುಹಿಸಿದ್ದರು.
ಈಗ ಮಂಗಳೂರಿನಲ್ಲಿ ನಿಷೇಧಾಜ್ಞೆ ತೆರವು ಮಾಡಿರುವ ಕಾರಣ ಸಿದ್ದರಾಮಯ್ಯ ಅವರು ಮಂಗಳೂರಿಗೆ ತೆರಳುತ್ತಿದ್ದಾರೆ. ಅವರೊಂದಿಗೆ ಇನ್ನೂ ಕೆಲವು ಕಾಂಗ್ರೆಸ್ ನಾಯಕರೂ ಮಂಗಳೂರಿಗೆ ಹೋಗುತ್ತಿದ್ದಾರೆ.