'ಕಾವೇರಿ' ಬಿಟ್ಟುಕೊಟ್ಟು ಅದೃಷ್ಟದ ಮನೆಗೆ ಕಾಲಿಟ್ಟ ಸಿದ್ದರಾಮಯ್ಯ!
ಬೆಂಗಳೂರು, ಜನವರಿ 29 : ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೊನೆಗೂ 'ಕಾವೇರಿ' ಬಿಟ್ಟುಕೊಟ್ಟಿದ್ದಾರೆ. ಸುಮಾರು 6 ವರ್ಷಗಳಿಂದ ಇದ್ದ ನಿವಾಸವನ್ನು ಬಿಟ್ಟುಕೊಟ್ಟರೂ ಅವರು ಅದೃಷ್ಟದ ಮನೆಗೆ ಕಾಲಿಡಲಿದ್ದಾರೆ.
2013ರಲ್ಲಿ ಮುಖ್ಯಮಂತ್ರಿಯಾದಾಗ ಕುಮಾರಕೃಪಾ ರಸ್ತೆಯಲ್ಲಿರುವ 'ಕಾವೇರಿ' ನಿವಾಸಕ್ಕೆ ಸಿದ್ದರಾಮಯ್ಯ ವಾಸ್ತವ್ಯ ಬದಲಿಸಿದ್ದರು. 2018ರ ಚುನಾವಣೆ ಮುಗಿದು, ರಾಜ್ಯದಲ್ಲಿ ಮೈತ್ರಿ ಸರ್ಕಾರ ಬಂದರೂ ಸಿದ್ದರಾಮಯ್ಯ ಅಲ್ಲೇ ಇದ್ದರು.
ಕಾವೇರಿ ನಿವಾಸ ಖಾಲಿ ಮಾಡುತ್ತಿಲ್ಲವೇಕೆ ಮಾಜಿ ಸಿಎಂ ಸಿದ್ದರಾಮಯ್ಯ?
ಈಗ ಮುಖ್ಯಮಂತ್ರಿ ಯಡಿಯೂರಪ್ಪ 'ಕಾವೇರಿ' ನಿವಾಸಕ್ಕೆ ಆಗಮಿಸುತ್ತಿದ್ದಾರೆ. ಆದ್ದರಿಂದ, ಸಿದ್ದರಾಮಯ್ಯ ಸರ್ಕಾರಿ ಬಂಗೆಲೆಯನ್ನು ಬಿಟ್ಟುಕೊಟ್ಟಿದ್ದಾರೆ. ಸಿದ್ದರಾಮಯ್ಯ ತಮ್ಮ ಅದೃಷ್ಟದ ನಿವಾಸ ಎಂದೇ ಭಾವಿಸಿದ್ದ 'ಕಾವೇರಿ'ಯನ್ನು ಬಿಟ್ಟು ಮತ್ತೊಂದು ಅದೃಷ್ಟದ ನಿವಾಸಕ್ಕೆ ಕಾಲಿಡುತ್ತಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೈ ತಪ್ಪಿದ 'ಕಾವೇರಿ'!
ಸಿದ್ದರಾಮಯ್ಯ 'ಕಾವೇರಿ'ಯಲ್ಲಿಯೇ ಇರುತ್ತೇನೆ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ, ಸರ್ಕಾರ ಒಪ್ಪಿರಲಿಲ್ಲ. ಬಳಿಕ ಮನೆ ಬದಲಾವಣೆ ಮಾಡಲು ಕಾಲಾವಕಾಶ ಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದರು.
'ಕಾವೇರಿ' ಖಾಲಿ ಮಾಡಲು ಸಿದ್ದರಾಮಯ್ಯಗೆ 4 ದಿನದ ಗಡುವು
ಸಿದ್ದರಾಮಯ್ಯ ಹೊಸ ನಿವಾಸದಲ್ಲಿ ಪೂಜೆ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ 'ಕಾವೇರಿ' ನಿವಾಸದಿಂದ ವಾಸ್ತವ್ಯ ಬದಲಾವಣೆ ಮಾಡಲಿದ್ದಾರೆ. ಕುಮಾರಕೃಪಾ ರಸ್ತೆಯಲ್ಲಿನ ಗಾಂಧಿ ಭವನದ ಹಿಂಭಾಗದಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ಅವರು ವಾಸ್ತವ್ಯ ಹೂಡಲಿದ್ದಾರೆ. ಹೊಸ ನಿವಾಸದಲ್ಲಿ ಹೋಮ, ಪೂಜೆ ನಡೆದಿದೆ.
ಅದೃಷ್ಟದ ಮನೆಗೆ ಕಾಲಿಟ್ಟರು
ಬಾದಾಮಿ ಕ್ಷೇತ್ರದ ಶಾಸಕ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈಗ ಹೋಗಿರುವುದು ಸಹ ಅದೃಷ್ಟದ ಮನೆಯಾಗಿದೆ. ಮುಖ್ಯಮಂತ್ರಿ ಆಗುವುದಕ್ಕೂ ಮೊದಲು ಅಂದರೆ ಪ್ರತಿಪಕ್ಷ ನಾಯಕರಾಗಿದ್ದಾಗ ಸಿದ್ದರಾಮಯ್ಯ ಅದೇ ಮನೆಯಲ್ಲಿದ್ದರು. ಬಳಿಕ ಮುಖ್ಯಮಂತ್ರಿಯಾಗಿ 'ಕಾವೇರಿ'ಗೆ ಬಂದಿದ್ದರು.
'ಕಾವೇರಿ'ಗೆ ಯಡಿಯೂರಪ್ಪ
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸದ್ಯ ಡಾಲರ್ಸ್ ಕಾಲೋನಿಯಲ್ಲಿನ 'ಧವಳಗಿರಿ' ನಿವಾಸದಲ್ಲಿದ್ದಾರೆ. ಅಲ್ಲಿಂದ ಅವರು ಗೃಹ ಕಚೇರಿ 'ಕೃಷ್ಣ'ಗೆ ಬರಬೇಕು. ಆದ್ದರಿಂದ, ಅವರು 'ಕೃಷ್ಣ' ಪಕ್ಕದಲ್ಲಿಯೇ ಇರುವ 'ಕಾವೇರಿ'ಗೆ ವಾಸ್ತವ್ಯ ಬದಲಿಸಲಿದ್ದಾರೆ.
ಕಾವೇರಿಯಲ್ಲಿಯೇ ಇದ್ದರು
ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ 'ಕಾವೇರಿ'ಯಲ್ಲಿದ್ದರು. ತಮ್ಮ ಅವಧಿ ಮುಗಿದು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದರೂ ಸಿದ್ದರಾಮಯ್ಯ 'ಕಾವೇರಿ' ನಿವಾಸ ಖಾಲಿ ಮಾಡಿರಲಿಲ್ಲ. ಈಗ ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ನಿವಾಸ ಖಾಲಿ ಮಾಡುತ್ತಿದ್ದಾರೆ.