ಮುಖಾಮುಖಿಯಾದ ಸಿದ್ದರಾಮಯ್ಯ-ದೇವೇಗೌಡ: ಎಲ್ಲಿ? ಹೇಗೆ? ಏನಾಯಿತು?
ಬೆಂಗಳೂರು, ಅಕ್ಟೋಬರ್ 09: ಮೈತ್ರಿ ಸರ್ಕಾರ ಉರುಳಿ ದೇವೇಗೌಡ-ಸಿದ್ದರಾಮಯ್ಯ ಪರಸ್ಪರ ವಾಗ್ಯುದ್ಧ ಮಾಡಿದ ನಂತರ ಇದೇ ಮೊದಲ ಬಾರಿಗೆ ಇಬ್ಬರೂ ಪರಸ್ಪರ ಎದುರುಬದುರಾದರು.
ಸಿದ್ದರಾಮಯ್ಯ-ದೇವೇಗೌಡ ಅವರು ಪರಸ್ಪರ ಮುಖಾ-ಮುಖಿಯಾಗುವಂತೆ ಆಗಿದ್ದು ರಂಗಕರ್ಮಿ ಪ್ರಸನ್ನ ಅವರಿಂದ. ಪ್ರಸನ್ನ ಅವರು ಆರು ದಿನಗಳಿಂದ ಅಮರಣಾಂತ ಉಪವಾಸ ಮಾಡುತ್ತಿದ್ದು ಅವರನ್ನು ಭೇಟಿಯಾಗಲು ಹೋಗಿದ್ದಾಗ ಸಿದ್ದರಾಮಯ್ಯ-ದೇವೇಗೌಡ ಅವರು ಪರಸ್ಪರ ಮುಖಾ-ಮುಖಿ ಆಗಿದ್ದಾರೆ.
ಪವಿತ್ರ ಆರ್ಥಿಕತೆಗೆ ಒತ್ತಾಯಿಸಿ ಪ್ರಸನ್ನ ಅವರು ಬೆಂಗಳೂರಿನ ಗಾಂಧಿಭವನದಲ್ಲಿ ಕಳೆದ ಆರು ದಿನಗಳಿಂದ ಅಮರಣಾಂತ ಉಪವಾಸ ಮಾಡುತ್ತಿದ್ದಾರೆ. ಅವರನ್ನು ಭೇಟಿ ಮಾಡಲೆಂದು ಸಿದ್ದರಾಮಯ್ಯ ತೆರಳಿದ್ದರು, ಅದೇ ವೇಳೆ ಅಲ್ಲಿ ದೇವೇಗೌಡ ಅವರೂ ಹಾಜರಿದ್ದರು.
ಪರಸ್ಪರ ಮಾತನಾಡದ ದೇವೇಗೌಡ- ಸಿದ್ದರಾಮಯ್ಯ
ಈ ವೇಳೆ ಇಬ್ಬರ ನಡುವೆ ಮಾತುಕತೆ ನಡೆದಿಲ್ಲ ಎಂದು ಹೇಳಲಾಗಿದೆ. ಪರಸ್ಪರ ನಗು ವಿನಿಮಯದ ಹೊರತಾಗಿ ಬಹು ಸಮಯ ಇಬ್ಬರೂ ಅಲ್ಲಿಯೇ ಕೂತಿದ್ದರೂ ಸಹ ಪರಸ್ಪರ ಒಂದೂ ಮಾತನ್ನೂ ಈ ಇಬ್ಬರೂ ಆಡಿಲ್ಲ ಎನ್ನಲಾಗಿದೆ.
ಟ್ವಿಟ್ಟರ್ನಲ್ಲಿ ಚಿತ್ರ ಹಂಚಿಕೊಂಡಿರುವ ಸಿದ್ದರಾಮಯ್ಯ
ಸಿದ್ದರಾಮಯ್ಯ ಮತ್ತು ದೇವೇಗೌಡ ಅವರು ಪ್ರಸನ್ನ ಅವರನ್ನು ಭೇಟಿ ಆಗಿರುವ ಬಗ್ಗೆ ಟ್ವಿಟ್ಟರ್ನಲ್ಲಿ ಬರೆದುಕೊಂಡಿರುವ ಸಿದ್ದರಾಮಯ್ಯ, 'ಪವಿತ್ರ ಆರ್ಥಿಕತೆಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರಂಗಕರ್ಮಿ ಪ್ರಸನ್ನ ಅವರನ್ನು ಇಂದು ಭೇಟಿ ಮಾಡಿದೆ. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡ ಅವರು ಉಪಸ್ಥಿತರಿದ್ದರು' ಎಂದಿದ್ದಾರೆ. ದೇವೇಗೌಡ ಅವರ ಚಿತ್ರವನ್ನೂ ಸಿದ್ದರಾಮಯ್ಯ ಶೇರ್ ಮಾಡಿದ್ದಾರೆ.
ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದ ನಾಯಕರು
ಮೈತ್ರಿ ಸರ್ಕಾರ ಉರುಳಿದ ಬಳಿಕ ದೇವೇಗೌಡ-ಸಿದ್ದರಾಮಯ್ಯ ಮತ್ತೆ ದೂರವಾಗಿದ್ದಾರೆ. ಮೈತ್ರಿ ಸರ್ಕಾರ ಉರುಳಲು ಸಿದ್ದರಾಮಯ್ಯ ಸಹ ಕಾರಣ ಎಂದು ದೇವೇಗೌಡ ಅವರು ಆರೋಪ ಮಾಡಿದರು, ಆ ನಂತರ ಸಿದ್ದರಾಮಯ್ಯ ಅವರು ಎದುರು ವಾಗ್ದಾಳಿ ನಡೆಸಿದ್ದರು.
ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ?
ಹದಿನೈದು ಉಪಚುನಾವಣೆ ಹತ್ತಿರವಿದ್ದು ಖರ್ಗೆ ಸೇರಿ ಕೆಲವರು ಮತ್ತೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಮಾತನ್ನಾಡಿದ್ದಾರೆ. ಆದರೆ ದೇವೇಗೌಡ ಅವರು ಈಗಾಗಲೇ ಜೆಡಿಎಸ್ ಸ್ವತಂತ್ರ್ಯವಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದಾರೆ.