'ನಾವು ಜೊತೆಗಿದ್ದೇವೆ': ತನ್ನ, ಡಿಕೆಶಿ ನಡುವಿನ ಬಿರುಕು ಸುದ್ದಿ ನಿರಾಕರಿಸಿದ ಸಿದ್ದರಾಮಯ್ಯ
ಬೆಂಗಳೂರು, ಜು.20: ಕರ್ನಾಟಕದ ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ತನ್ನ ಹಾಗೂ ರಾಜ್ಯದ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವಿನ ಬಿರುಕಿನ ಎಲ್ಲಾ ವದಂತಿಗಳನ್ನು ನಿರಾಕರಿಸಿದರು.
''ನಾವು ಜೊತೆಯಾಗಿ ಇದ್ದೇವೆ. ನಾವು ಜೊತೆಯಾಗಿಯೇ ಪಕ್ಷವನ್ನು ಕಟ್ಟುತ್ತೇವೆ. ಕರ್ನಾಟಕ ಕಾಂಗ್ರೆಸ್ನಲ್ಲಿ ಯಾವುದೇ ಬಿರುಕು ಇಲ್ಲ. ಹಾಗೆಯೇ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ. ಏಕೆ ಬಿರುಕು ಇರಬೇಕು? ನಾವು ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇವೆ,'' ಎಂದು ಸಿದ್ದರಾಮಯ್ಯ ಹೇಳಿದರು.
ಕಾಂಗ್ರೆಸ್ ಹೈಕಮಾಂಡ್ ಭೇಟಿಗೆ ಮುಂದಾದ ಸಿದ್ದರಾಮಯ್ಯ
ಪಕ್ಷದ ಹೈಕಮಾಂಡ್ ಕರೆ ನೀಡಿದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಮಂಗಳವಾರ ದೆಹಲಿಗೆ ಹಾಜರಾಗಲಿದ್ದಾರೆ. ಅಧಿಕಾರದ ಜಗಳದ ನಡುವೆ ನಾಯಕರು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಭೇಟಿ ಮಾಡುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. 2023 ರಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಪದಾಧಿಕಾರಿಗಳ ನೇಮಕ ಮತ್ತು ಕಾರ್ಯತಂತ್ರಗಳ ಬಗ್ಗೆ ಈ ಸಭೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
"ನಾನು ದೆಹಲಿಯಲ್ಲಿದ್ದೇನೆ ಏಕೆಂದರೆ ರಾಹುಲ್ ಗಾಂಧಿ ಇಂದು 4 ಗಂಟೆಗೆ ನನ್ನನ್ನು ಭೇಟಿಯಾಗಲು ಬಯಸಿದ್ದರು. ಕೆಸಿ ವೇಣುಗೋಪಾಲ್ ನನಗೆ ಹೇಳಿದ್ದು ಇದನ್ನೇ. ಯಾವ ವಿಷಯವನ್ನು ಚರ್ಚಿಸಲಿದ್ದಾರೆಂದು ನನಗೆ ತಿಳಿದಿಲ್ಲ," ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಯಾವುದೇ ಸಮಯದಲ್ಲಿ ಚುನಾವಣೆ ಎದುರಿಸಲು ಕಾಂಗ್ರೆಸ್ ಸಿದ್ಧ; ಸಿದ್ದರಾಮಯ್ಯ
ಹಾಗೆಯೇ "ಯಾವುದೇ ಬಿರುಕು ಇಲ್ಲ. ಯಾವುದೇ ನಾಯಕನೊಂದಿಗೆ ನನಗೆ ಯಾವುದೇ ಸಮಸ್ಯೆ ಇಲ್ಲ. ಈ ಸರ್ಕಾರವನ್ನು ಅಧಿಕಾರದಿಂದ ಹೊರಹಾಕಲು, ಜನರಿಗೆ ಸಹಾಯ ಮಾಡಲು ನಾವು ಸಿದ್ಧರಾಗಲು ಬಯಸುತ್ತೇವೆ. ಈ ಸಭೆಗೂ ಕ್ಷೇತ್ರ ಅಥವಾ ಅಧಿಕಾರದ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ," ಎಂದು ಮಾಜಿ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ನಾಯಕರ ದೆಹಲಿ ಭೇಟಿಯು ಶಾಸಕರ ಒಂದು ವಿಭಾಗವು ಸಿದ್ದರಾಮಯ್ಯ ನಾಯಕತ್ವಕ್ಕೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆ ಮಹತ್ವವನ್ನು ಪಡೆದುಕೊಂಡಿದೆ. ಚಿಕ್ಕಪೇಟೆ ಶಾಸಕ ಬಿ.ಝಡ್. ಜಮೀರ್ ಅಹ್ಮದ್ ಖಾನ್, ಕಂಪ್ಲಿ ಶಾಸಕ ಜೆ ಎನ್ ಗಣೇಶ್ ಸೇರಿದಂತೆ ಕೆಲವು ಶಾಸಕರು ಬಹಿರಂಗವಾಗಿ ನಾಯಕತ್ವದ ವಿರುದ್ದ ಹೇಳಿಕೆಯನ್ನು ನೀಡುತ್ತಿದ್ದಾರೆ. ಇದು ಮುಂದಿನ ಚುನಾವಣಗೆ ತೊಂದರೆ ಉಂಟು ಮಾಡುವ ಸಾಧ್ಯತೆಯ ಹಿನ್ನೆಲೆಯೂ ಈ ಸಭೆಯಲ್ಲಿ ಅಡಗಿದೆ ಎನ್ನಲಾಗಿದೆ.
ತನ್ನ ಆಂತರಿಕ ಬಿಕ್ಕಟ್ಟನ್ನು ನಿಭಾಯಿಸಲು ಬಿಜೆಪಿಗೆ ಸಾಧ್ಯವಾಗದಿದ್ದಲ್ಲಿ ಕಾಂಗ್ರೆಸ್ ಆಡಳಿತ ನಡೆಸಲು ಸಿದ್ದ ಎಂಬ ವಿಚಾರದಲ್ಲಿ ಸೋಮವಾರ ಮಾತನಾಡಿದ ಸಿದ್ದರಾಮಯ್ಯ, "ಯಾವುದೇ ಸಮಯದಲ್ಲಿ ಚುನಾವಣೆಯನ್ನು ಎದುರಿಸಲು ಕಾಂಗ್ರೆಸ್ ಸಿದ್ಧವಾಗಿದೆ. ಮುಂದೆ ಚುನಾವಣೆ ನಡೆಯುತ್ತದೆ ಎಂದು ನನಗೆ ಅನಿಸುವುದಿಲ್ಲ. ಏಕೆಂದರೆ ಯಡಿಯೂರಪ್ಪರನ್ನು ತೆಗೆದುಹಾಕಿದರೂ ಬಿಜೆಪಿ ಬೇರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತದೆ," ಎಂದು ಹೇಳಿದ್ದರು.
78 ವರ್ಷದ ಮುಖ್ಯಮಂತ್ರಿಯನ್ನು ಬದಲಾಯಿಸುವ ಬಗ್ಗೆ ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ರದ್ದು ಎಂದು ಹೇಳಲಾದ ಆಡಿಯೋ ವಿಚಾರದಲ್ಲಿ ಈ ಹೇಳಿಕೆ ನೀಡಿದ್ದರು.
Recommended Video
(ಒನ್ಇಂಡಿಯಾ ಸುದ್ದಿ)