Breaking: ಶಿಕ್ಷಣ ಸಚಿವರನ್ನು ಭಕ್ಷಣಾ ಸಚಿವ ಎಂದ ಸಿದ್ದರಾಮಯ್ಯ
ಬೆಂಗಳೂರು, ಸೆ.12: ಖಾಸಗಿ ಶಾಲೆಗಳ ಅಕ್ರಮಗಳ ವಿರುದ್ಧದ ಆರೋಪ ಪ್ರತ್ಯಾರೋಪಗಳು ಬಿರುಸು ಪಡೆದುಕೊಂಡಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಪರಸ್ಪರ ವಾಗ್ದಾಳಿ ನಡೆಸುತ್ತಿದ್ದಾರೆ.
"ಶಿಕ್ಷಣ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ರುಪ್ಸಾ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ. ಲಂಚ ಪಡೆದು ಖಾಸಗಿ ಶಾಲೆಗಳಿಗೆ ಬೇಕಾಬಿಟ್ಟಿ ಅನುಮತಿ ನೀಡಿದ್ದ ಇಲಾಖೆಯೇ ಅಕ್ರಮ ಮುಚ್ಚಿಹಾಕಲು ಲಂಚ ಕೇಳುತ್ತಿದೆಯಂತೆ. ಇದರಲ್ಲಿ ಬಿ.ಸಿ ನಾಗೇಶ್ ಪಾಲೆಷ್ಟು?" ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದರು.
ಸಿದ್ದರಾಮಯ್ಯನವರೇ ನೀವು ಮನುಷ್ಯರೋ? ಕಾಡು ಪ್ರಾಣಿಯೋ?: ಶ್ರೀರಾಮುಲು
ಇದಕ್ಕೆ ಉತ್ತರವಾಗಿ ಬಿ.ಸಿ ನಾಗೇಶ್, "ನಿಮ್ಮ ಸರ್ಕಾರದ ಅವಧಿಯಲ್ಲಿ ಖಾಸಗಿ ಸಿಬಿಎಸ್ಇ ಶಾಲೆಗಳ ಆರಂಭಕ್ಕೆ NOC ನೀಡಲು ನಿಯಮಗಳನ್ನೇ ರೂಪಿಸದೆ, ಅನಧಿಕೃತವಾಗಿ ಹಲವು ಶಾಲೆಗಳನ್ನು ಆರಂಭಿಸಲು ಅವಕಾಶ ಮಾಡಿಕೊಟ್ಟು, ಅಕ್ರಮಕ್ಕೆ ಕುಮ್ಮಕ್ಕು ನೀಡಿರುವುದರಲ್ಲಿ ಸಿದ್ದರಾಮಯ್ಯ ಪಾತ್ರವೇನು," ಎಂದು ಪ್ರಶ್ನಿಸಿದ್ದರು.
ಸೋಮವಾರ ಮತ್ತೆ ಮುಂದುವರೆದಿರುವ ಈ ಆರೋಪ ಪ್ರತ್ಯಾರೋಪಗಳಲ್ಲಿ ಸಿದ್ದರಾಮಯ್ಯ ಮತ್ತೆ ಟ್ವೀಟ್ ಮಾಡಿದ್ದಾರೆ.
"ಕೋವಿಡ್ ಕಾಲದಲ್ಲಿ ಅನುದಾನರಹಿತ ಶಾಲೆಗಳ ಶಿಕ್ಷಕರಿಗೆ ಪರಿಹಾರ ನೀಡಲು ನಿಗದಿಪಡಿಸಿದ್ದ ರೂ.103.47 ಕೋಟಿ ಹಣದಲ್ಲಿ ರೂ.31.14 ಕೋಟಿಯನ್ನು ಖಾಸಗಿ ಶಾಲೆಗಳ ಆರ್.ಟಿ.ಇ ಶುಲ್ಕ ಮರುಪಾವತಿಗೆ ನೀಡಿದ್ದಿರಲ್ಲಾ? ಇದು ಯಾರ ಮೇಲಿನ ಕಾಳಜಿಯಿಂದ ಶಿಕ್ಷಣ ಸಚಿವರೇ..?" ಎಂದಿದ್ದಾರೆ.
"ಖಾಸಗಿ ಶಾಲೆಗಳ ಅಕ್ರಮಗಳ ವಿರುದ್ದ ಸಮರ ಸಾರಿದವರಂತೆ ಹೇಳಿಕೆ ನೀಡುತ್ತಿರುವ ಶಿಕ್ಷಣ ಸಚಿವರೇ, ಕೋವಿಡ್ ಪರಿಹಾರದ ಹಣವನ್ನು ಕೂಡಾ ಖಾಸಗಿ ಶಾಲೆಗಳ ಆರ್ಟಿಇ ಶುಲ್ಕ ಮರುಪಾವತಿಗೆ ದುರ್ಬಳಕೆ ಮಾಡಿರುವುದು ಯಾರ ಮೇಲಿನ ಪ್ರೀತಿಯಿಂದ..?" ಎಂದು ಪ್ರಶ್ನಿಸಿದ್ದಾರೆ.
"ಕೋವಿಡ್ ಪರಿಹಾರಕ್ಕಾಗಿಯೇ ನಿಗದಿಪಡಿಸಿದ್ದ ಹಣವನ್ನು ಪೂರ್ಣವಾಗಿ ಆ ಉದ್ದೇಶಕ್ಕಾಗಿಯೇ ಬಳಸದಿರಲು ಕಾರಣವೇನು..? ಆರ್ಟಿಇ ಮರುಪಾವತಿಗಾಗಿಯೇ 2022-23ನೇ ಸಾಲಿಗೆ ನಿಗದಿಪಡಿಸಿದ್ದ ರೂ.500 ಕೋಟಿ ಹಣವನ್ನು ನಿಮ್ಮ ಇಲಾಖೆ ಪೂರ್ಣವಾಗಿ ಬಳಸಿಕೊಂಡಿದ್ದೆಯೇ..?" ಆರೋಪಿಸಿದ್ದಾರೆ.
ಕೋವಿಡ್ ಕಾಲದಲ್ಲಿ ಅನುದಾನರಹಿತ ಶಾಲೆಗಳ ಶಿಕ್ಷಕರಿಗೆ ಪರಿಹಾರ ನೀಡಲು ನಿಗದಿಪಡಿಸಿದ್ದ ರೂ.103.47 ಕೋಟಿ ಹಣದಲ್ಲಿ ರೂ.31.14 ಕೋಟಿಯನ್ನು ಖಾಸಗಿ ಶಾಲೆಗಳ ಆರ್.ಟಿ.ಇ ಶುಲ್ಕ ಮರುಪಾವತಿಗೆ ನೀಡಿದ್ದಿರಿಲ್ಲಾ? ಇದು ಯಾರ ಮೇಲಿನ ಕಾಳಜಿಯಿಂದ @BCNagesh_bjp ಅವರೇ? 1/5#ಭಕ್ಷಣಾಸಚಿವ pic.twitter.com/VsobmuMOUk
— Siddaramaiah (@siddaramaiah) September 12, 2022
"ಶಾಲಾ ಮಕ್ಕಳ ಶೂ ಖರೀದಿಗೆ ಐದು ವರ್ಷಗಳ ಹಿಂದಿನ ದರದಲ್ಲಿ ಹಣ ನೀಡಿ ಶಿಕ್ಷಕರನ್ನು ದಾನಿಗಳ ಮುಂದೆ ಕೈಯೊಡ್ಡುವಂತೆ ಮಾಡಿರುವ ಶಿಕ್ಷಣ ಸಚಿವರೇ, ನಿಮ್ಮ ಸಾಮಾಜಿಕ ಜಾಲತಾಣ ನಿರ್ವಹಣೆಗೆ ತಿಂಗಳಿಗೆ ರೂ.93,000 ನೀಡುತ್ತಿದ್ದಿರಿಲ್ಲಾ ಇದು ನ್ಯಾಯವೇ..?" ಎಂದು ಟೀಕಿಸಿದ್ದಾರೆ.
"ಅತಿಥಿ ಉಪನ್ಯಾಸಕರು ಕನಿಷ್ಠ 6,000 ರೂಪಾಯಿಯಷ್ಟು ಗೌರವಧನ ಹೆಚ್ಚಿಸಿ ಎಂದು ಕೇಳಿದರೆ ರೂ.3,000 ಕೊಟ್ಟು ಬಾಯಿ ಮುಚ್ಚಿಸಿದ ಶಿಕ್ಷಣ ಸಚಿವರೇ, ನಿಮ್ಮ ಸಾಮಾಜಿಕ ಜಾಲತಾಣ ನಿರ್ವಹಣೆಗೆ ಟೆಂಡರ್ ಕರೆಯದೆ ಮೂರು ತಿಂಗಳಿಗೆ ರೂ.2,83,200 ಖರ್ಚು ಮಾಡುವುದು ಅನ್ಯಾಯ ಅಲ್ಲವೇ?" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾನುವಾರ ಟ್ವೀಟ್ ಮಾಡಿದ್ದ ಶಿಕ್ಷಣ ಸಚಿವ ಬಿ.ಸಿ ನಾಗೇಶ್, "ಪಾರದರ್ಶಕ, ಪ್ರಾಮಾಣಿಕ, ಸುರಕ್ಷಿತ ಶೈಕ್ಷಣಿಕ ವಾತಾವರಣ ನಿರ್ಮಿಸಲು ಹೊರಟ ಬಿಜೆಪಿ ಸರ್ಕಾರದ ವಿರುದ್ಧ, ಕ್ರಿಮಿನಲ್ ಕೇಸ್ ಸೇರಿ ಹಲವು ಆರೋಪಗಳಿರುವ ಬೆಂಬಲಿಗನ ಮೂಲಕ ಆಧಾರರಹಿತ ಆರೋಪಗಳನ್ನು ಮಾಡಿಸಿ, ನಿಯಮಬಾಹಿರ ಕೆಲಸಗಳಿಗೆ ಕುಮ್ಮಕ್ಕು ನೀಡುತ್ತಿರುವ ನಿಮಗೆ ಮಾತನಾಡಲು ಯಾವ ನೈತಿಕತೆ ಇದೆ? ನಿಯಮಬಾಹಿರ ಕೆಲಸಗಳಲ್ಲಿ ನಿಮ್ಮ ಪಾಲೆಷ್ಟು?" ಎಂದಿದ್ದರು.
"2004ರಲ್ಲಿ ತಮಿಳುನಾಡಿನ ಕುಂಭಕೋಣಂನ ಶಾಲೆಯೊಂದರಲ್ಲಿ ನಡೆದ ಅಗ್ನಿದುರಂತದ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸುಪ್ರೀಂಕೋರ್ಟ್ ಆದೇಶದ ಅನುಸಾರ ರೂಪಿಸಿರುವ ನಿಯಮಗಳು, ಮಾರ್ಗಸೂಚಿಗಳನ್ನೇ ನೀವು ಪ್ರಶ್ನಿಸುತ್ತಿದ್ದೀರಿ! ಶಾಲಾ ಮಕ್ಕಳ ಸುರಕ್ಷತೆ ಬಗ್ಗೆ ನಿಮಗೆ ಕಾಳಜಿ ಇಲ್ಲವೇ?" ಎಂದಿದ್ದರು.
"ಖಾಸಗಿ ಶಾಲೆ ಪ್ರಥಮ ಮಾನ್ಯತೆ & ಮಾನ್ಯತೆ ನವೀಕರಣ ಪ್ರಕ್ರಿಯೆಯನ್ನು ಆನ್ಲೈನ್ಗೊಳಿಸಿ, ಪಾರದರ್ಶಕ ವ್ಯವಸ್ಥೆಯನ್ನು ನಮ್ಮ ಸರ್ಕಾರ ಅನುಷ್ಠಾನಗೊಳಿಸಿದೆ. ಆದರೆ, ಶಿಸ್ತುಬದ್ಧ ವ್ಯವಸ್ಥೆಯ ಅನುಷ್ಠಾನದ ವಿರುದ್ಧವೇ ನಿಂತು, ಸಂಘಟನೆಯ ಅಧ್ಯಕ್ಷನೆಂದು ಹೇಳಿಕೊಂಡು ಓಡಾಡುವ ಬೂಟಾಟಿಕೆಯ ವ್ಯಕ್ತಿಯ ಅಕ್ರಮದಲ್ಲಿ ಸಿದ್ದರಾಮಯ್ಯ ಪಾಲೆಷ್ಟು?" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.