2000 ಕೋಟಿ ರೂ. ನುಂಗಿ ಹಾಕಿತಾ ಬಿಜೆಪಿ ಸರ್ಕಾರ?
ಬೆಂಗಳೂರು, ಜುಲೈ.23: ಕೊರೊನಾವೈರಸ್ ನಿರ್ವಹಣೆ ಹೆಸರಿನಲ್ಲಿ ಜೇಬು ತುಂಬಿಸಿಕೊಳ್ಳುವ ಕೆಲಸ ಆಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವು ನಡೆಸುತ್ತಿರುವ ಭ್ರಷ್ಟಾಚಾರದ ಸುವಾಸನೆ ಮೂಗಿಗೆ ಬಂದು ಬಡೆಯುತ್ತಿದೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಸರ್ಕಾರದ ವಿರುದ್ಧ ಕಾಂಗ್ರೆಸ್ ಲೆಕ್ಕ ಕೊಡಿ ಅಭಿಯಾನ ಆರಂಭಿಸಿದ್ದು, ಗುರುವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಕೊವಿಡ್-19 ಉಪಕರಣಗಳ ಖರೀದಿಸುವಲ್ಲಿ ಭಾರೀ ಹಗರಣವೇ ನಡೆದಿದೆ ಎಂದು ನಾಯಕರು ದೂಷಿಸಿದ್ದಾರೆ.
ಕೊವಿಡ್-19 ನಿರ್ವಹಣೆಗೆ ಯಾವ ಇಲಾಖೆಯಲ್ಲಿ ಎಷ್ಟು ಖರ್ಚು?
ಇತ್ತೀಚಿಗಷ್ಟೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಮತ್ತು ಆರೋಗ್ಯ ಸಚಿವ ಶ್ರೀರಾಮುಲು 324 ಕೋಟಿ ರೂಪಾಯಿ ಹಣವನ್ನು ಕೊವಿಡ್-19 ನಿರ್ವಹಣೆಗೆ ಖರ್ಚು ಮಾಡಿರುವುದಾಗಿ ಹೇಳಿದ್ದಾರೆ. ಈ ಮಾಹಿತಿ ಮತ್ತು ದಾಖಲೆಗಳಲ್ಲಿ ಕಿಂಚಿತ್ತೂ ಸತ್ಯವಿಲ್ಲ ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಒತ್ತಾಯ:
ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕು ನಿರ್ವಹಣೆ ಹೆಸರಿನಲ್ಲಿ ಸರ್ಕಾರ ಭಾರೀ ಭ್ರಷ್ಟಾಚಾರವನ್ನೇ ನಡೆಸುತ್ತಿದೆ. 324 ಕೋಟಿ ರೂಪಾಯಿ ವೆಚ್ಚ ಮಾಡಿರುವ ಬಗ್ಗೆ ಸಚಿವರು ಮಾಹಿತಿ ನೀಡುತ್ತಾರೆ. ಆದರೆ ಅಸಲಿಗೆ ಸರ್ಕಾರವು ಇದುವರೆಗೂ 4167 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಿದೆ. ಈ ಪೈಕಿ 2000 ಕೋಟಿ ರೂಪಾಯಿಗೂ ಹೆಚ್ಚು ಭ್ರಷ್ಟಾಚಾರ ನಡೆದಿದೆ.
'330 ರೂಪಾಯಿ ಪಿಪಿಇ ಕಿಟ್ ಖರೀದಿಸಲು 2117 ರೂಪಾಯಿ ಖರ್ಚು'
ಸರ್ಕಾರ ನಡೆಸಿರುವ ಈ ಭ್ರಷ್ಟಾಚಾರದ ಬಗ್ಗೆ ಸತ್ಯ ಹೊರ ಬರಬೇಕಾದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಅದಕ್ಕಾಗಿ ತನಿಖಾ ತಂಡವನ್ನು ರಚಿಸಬೇಕು ಎಂದು ಆಗ್ರಹಿಸಿದ್ದಾರೆ.