ಪ್ರಧಾನಿ ಮೋದಿ ಕನ್ನಡದಲ್ಲಿ ಟ್ವೀಟ್ ಮಾಡಿದ್ರೆ ಕನ್ನಡಿಗರಿಗೆ ನ್ಯಾಯ ಸಿಗುತ್ತಾ?
ಬೆಂಗಳೂರು, ಅ. 17: ಪ್ರಧಾನ ಮಂತ್ರಿ ಮೋದಿ ಅವರು ರಾಜ್ಯದ ಜನರಿಗೆ ಅಗೌರವ ತೋರುವ ಕೆಲಸ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಈ ಬಾರಿ ಜನರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದಿದ್ದಾರೆ.
ನಾನು ಅನೇಕ ಬಾರಿ ಹೇಳಿದ್ದೇನೆ. ರಾಜ್ಯದ 25 ಬಿಜೆಪಿ ಸಂಸದರಿಗೆ ಧಮ್ ಇಲ್ಲ. ಅವರು ಯಾವತ್ತು ರಾಜ್ಯದ ಪರವಾಗಿ ಪ್ರಧಾನಿ ಮುಂದೆ ಬೇಡಿಕೆ ಇಟ್ಟಿದ್ದಾರೆ ಹೇಳಿ? 15ನೇ ಹಣಕಾಸು ಆಯೋಗದಲ್ಲೂ ನಮಗೆ ಅನ್ಯಾಯವಾಗಿತ್ತು, ಜಿಎಸ್ಟಿ ಪರಿಹಾರವನ್ನೂ ಇವರು ಕೇಳಲಿಲ್ಲ, ಈಗ ನೆರೆ ಪರಿಹಾರವನ್ನೂ ಇವರು ಕೇಳುತ್ತಿಲ್ಲ ಎಂದು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಧಾನಿ ಮೋದಿ ಎದುರು ಬೇಡಿಕೆ ಇಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಧೈರ್ಯವಿಲ್ಲ. ಮೋದಿ ಅವರು ಕನ್ನಡದಲ್ಲಿ ಟ್ವೀಟ್ ಮಾಡಿಬಿಟ್ರೆ ಆಯ್ತಾ? ಕನ್ನಡಿಗರಿಗೆ ನ್ಯಾಯ ಸಿಕ್ಕುಬಿಡುತ್ತಾ? ನಾನು ಬೇರೆ ಭಾಷೆಯಲ್ಲಿ ಟ್ವೀಟ್ ಮಾಡ್ತೇನಪ್ಪ. ಮೊದಲು ನೆರೆ ಪರಿಹಾರ ಕೊಡೋಕೆ ಹೇಳಿ ಎಂದು ಪ್ರಧಾನಿ ಮೋದಿ ಅವರ ಕನ್ನಡದ ಟ್ವೀಟ್ಗೆ ಸಿದ್ದರಾಮಯ್ಯ ಅವರು ತಿರುಗೇಟು ಕೊಟ್ಟಿದ್ದಾರೆ.
ಮೋದಿ ಮಲತಾಯಿ ಧೋರಣೆ
ಪ್ರಧಾನಿ ಮೋದಿ ಮೊದಲಿನಿಂದಲೂ ಕನ್ನಡಿಗರ ಮೇಲೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆ. ಹಿಂದೆ ಮಳೆ ಬಂದಾಗ ಬಿಹಾರ್ ರಾಜ್ಯಕ್ಕೆ ಭೇಟಿ ನೀಡಿದ್ದರು. ಆದರೆ ಕರ್ನಾಟಕಕ್ಕೆ ಯಾವಾಗಲಾದರೂ ಬಂದಿದ್ದಾರ? ನಿನ್ನೆ ಒಂದು ಟ್ವೀಟ್ ಮಾಡಿದ್ದಾರೆ.
ಈಬಾರಿ ಸುಮಾರು 10 ಸಾವಿರ ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ. ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಸರಿಯಾಗಿ ಲೆಕ್ಕ ಗೊತ್ತಿಲ್ಲ. ಹೀಗಾಗಿ 2 ನೂರು ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎಂದಿದ್ದಾರೆ. ಹೀಗೆ ಹೇಳ್ತಾರೆ ಅಂದ್ರೆ ಅವರಿಗೆ ಮಾಹಿತಿಯೇ ಇಲ್ಲ ಎಂದು ಅರ್ಥ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ಕೊಟ್ಟರು.
ಕಾಟಾಚಾರಕ್ಕೆ ಅಶೋಕ್ ಭೇಟಿ
ಉತ್ತರ ಕರ್ನಾಟಕದಲ್ಲಿ ಕಳೆದ 10 ದಿನಗಳಿಂದ ಮಳೆ ಇದೆ. ಸುಮಾರು 12 ಜಿಲ್ಲೆಗಳಲ್ಲಿ ಅತಿವೃಷ್ಟಿಯಾಗುತ್ತಿದೆ. ಕಂದಾಯ ಸಚಿವ ಆರ್. ಅಶೋಕ್ ಕಾಟಾಚಾರಕ್ಕೆ ಈಗ ಹೋಗಿದ್ದಾರೆ. ಕಳೆದ ಆಗಸ್ಟ್ನಲ್ಲಿಯ ಹಾನಿಗೆ ಇನ್ನೂ ಪರಿಹಾರ ಬಂದಿಲ್ಲ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇನ್ನೂ ಉತ್ತರ ಕರ್ನಾಟಕಕ್ಕೆ ಹೋಗಿಯೇ ಇಲ್ಲ. ಸಚಿವರಾದರೂ ಅಲ್ಲೇ ಇದ್ದು ಪರಿಸ್ಥಿತಿ ನೋಡಿಕೊಳ್ಳಬೇಕಿತ್ತು. ಜನರು ಮನೆ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಕೇಂದ್ರ ಸರ್ಕಾರ ಏನೂ ಪರಿಹಾರ ನೀಡಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ
ಅಖಂಡ ಶ್ರೀನಿವಾಸಮೂರ್ತಿ ನಾನು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರೊಂದಿಗೆ ಮಾತನಾಡುತ್ತೇನೆ. ಯಾವುದೇ ಸಾಕ್ಷಿ ಇಲ್ಲದೆ ನಾನು ಮಾತನಾಡುವುದಿಲ್ಲ. ಈ ಬಗ್ಗೆ ಡಿ.ಕೆ. ಶಿವಕುಮಾರ್ ಏನೂ ಹೇಳಿಲ್ಲ. ಮಾಧ್ಯಮಗಳ ಮುಂದೆ ಶ್ರೀನಿವಾಸಮೂರ್ತಿ ಮಾತನಾಡಬಾರದು ಎಂದಿದ್ದಾರೆ ಅಷ್ಟೇ. ಶಿಸ್ತುಕ್ರಮ ತೆಗೆದು ಕೊಳ್ಳುವುದು ಪಕ್ಷ ಅಂತಾನೂ ಹೇಳಿದ್ದಾರೆ. ನಾನೂ ಶಿವಕುಮಾರ್ ಅವರ ಜೊತೆ ಮಾತನಾಡುತ್ತೇನೆ. ಬಿಜೆಪಿಯವರ ತಪ್ಪಿನಿಂದಲೇ ಗಲಭೆ ಆಗಿರೋದು ಎಂದು ಸಿದ್ದರಾಮಯ್ಯ ಮತ್ತೆ ಆರೋಪಿಸಿದರು.
Recommended Video
ಇಂದಿರಾ ಕ್ಯಾಂಟೀನ್ ವಿಚಾರ
ನಾವು ಕಾರ್ಮಿಕರು, ಬಡವರ ಕಾಳಜಿಯಿಂದ ಕ್ಯಾಂಟೀನ್ ತೆಗೆದಿದ್ದು ಎಂದು ಇಂದಿರಾ ಕ್ಯಾಂಟೀನ್ ಮುಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಬಡವರು, ಕಾರ್ಮಿಕರ ಬಗ್ಗೆ ಇವರಿಗೆ ಕಾಳಜಿ ಇದ್ಯಾ? ಇದ್ದರೆ ಇಂದಿರಾ ಕ್ಯಾಂಟೀನ್ ಉಳಿಸಬೇಕು. 18 ಕೋಟಿ ರೂಪಾಯಿಗಳಿಗಾಗಿ ಕ್ಯಾಂಟೀನ್ ಮುಚ್ಚುತ್ತಾರಾ? ಸರ್ಕಾರ ಇರುವುದೇ ಜನರ ಕಷ್ಟಕ್ಕೆ ಸ್ಪಂದಿಸೋಕೆ. ಸ್ಪಂದಿಸೋಕೆ ಆಗದಿದ್ದರೆ ಯಾಕಿರಬೇಕು? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ಕೊಟ್ಟಿದ್ದಾರೆ.