ದೇಶ ಕಾದ ಯೋಧನ ಪತ್ನಿಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕಲ್ಲವೆ?
ಆಕೆ ತನ್ನ ಪತಿಯನ್ನು ಕಳೆದುಕೊಂಡಿದ್ದಾರೆ. ತಾಯಿ ಭಾರತಿ ತನ್ನ ಮಗನನ್ನು ಕಳೆದುಕೊಂಡಿದ್ದಾಳೆ. ಹುತಾತ್ಮ ಯೋಧರ ಕುಟುಂಬವನ್ನು ಸರಕಾರ ಹೇಗೆ ನಡೆಸಿಕೊಳ್ಳುತ್ತದೆ ಎಂಬುದನ್ನು ನಮ್ಮ ಯೋಧರು ನೋಡುತ್ತಿರುತ್ತಾರೆ.
ಬೆಂಗಳೂರು, ಫೆಬ್ರವರಿ 22: ಸಿಯಾಚಿನ್ ನಲ್ಲಿ ಫೆಬ್ರವರಿ 2016ರಲ್ಲಿ ಹುತಾತ್ಮರಾದರು ಹನುಮಂತಪ್ಪ ಕೊಪ್ಪದ್. ಆ ವೀರಯೋಧನ ಪತ್ನಿ ಮಹಾದೇವಿ ಕೊಪ್ಪದ್ ತಮ್ಮ ಮಗಳ ಜತೆಗೆ ಕೂತು, ತನ್ನ ಪತಿಯ ಫೋಟೋ ತೋರಿಸುತ್ತಾರೆ. ಆ ಮಗು ಅಪ್ಪ ಎನ್ನುತ್ತದೆ. ಮಹಾದೇವಿ ಅವರ ಕಪಾಳದ ಮೇಲೆ ಕಣ್ಣೀರು ಇಳಿಯುತ್ತದೆ.
ಮಹಾದೇವಿ ಅವರಿಗೆ ಪತಿಯ ನೆನಪು ಸದಾ ಕಾಡುತ್ತದೆ. ಆ ದುರ್ಘಟನೆ ಸಂಭವಿಸಿ ವರ್ಷವಾದರೂ ಕಣ್ಣೀರು ಕರಗಿಲ್ಲ. ಆಕೆಯ ಪಾಲಿನ ಬಲ-ಬೆಂಬಲ ಎಲ್ಲವೂ ಆಗಿದ್ದ ಹನುಮಂತಪ್ಪ ಕೊಪ್ಪದ್ ಹೆಸರು ಕೇಳಿದಾಗೆಲ್ಲ ಕಣ್ಣೀರಾಗುತ್ತಾರೆ. ಭಾರತದ ಆ ವೀರಪುತ್ರನ ವಿಚಾರವಾಗಿ ನಾವು ಮೈ ಮರೆಯಬಾರದು.[ನೆಲ ಗುಡಿಸಿ ಒರೆಸುವುದಕ್ಕೂ ಸಿದ್ಧ : ಯೋಧ ಹನುಮಂತಪ್ಪನ ಹೆಂಡತಿ]
ಮಹಾದೇವಿ ಕೊಪ್ಪದ್ ಅವರಿಗೆ ಸರಕಾರಿ ಕೆಲಸ ದೊರೆಯಬೇಕು. ಇದು ಕರ್ನಾಟಕ ಸರ್ಕಾರ ನೀಡಿದ್ದ ಭಾಷೆ. ಅದನ್ನು ಈಡೇರಿಸಬೇಕು. ಆದ್ದರಿಂದ ಒನ್ಇಂಡಿಯಾದಿಂದ ಅಭಿಯಾನ ಆರಂಭವಾಗಿದೆ. ಜೊತೆಗೆ ಹನುಮಂತಪ್ಪ ಕೊಪ್ಪದ್ ಅವರ ಸ್ಮಾರಕವೊಂದು ಶೀಘ್ರದಲ್ಲೇ ಆಗಬೇಕು. [ಭಿಕ್ಷೆ ಬೇಡುವುದನ್ನು ನನ್ನ ವೀರ ಗಂಡ ಕಲಿಸಿಲ್ಲ : ಮಹಾದೇವಿ]
ಮಹಾದೇವಿ ಅವರು ಗೌರವಯುತವಾಗಿ ಬದುಕಲು ಬಯಸುತ್ತಾರೆ. ಅದಕ್ಕಾಗಿ ಕೆಲಸ ಕೇಳುತ್ತಿದ್ದಾರೆ. ಅವರೊಂದಿಗೆ ಒನ್ಇಂಡಿಯಾದಿಂದ ಅನುಷಾ ರವಿ ಅವರು ಸಂದರ್ಶನ ಮಾಡಿದ್ದು, ನೆಲ ಗುಡಿಸಿ-ಸಾರಿಸುವ ಕೆಲಸ ಕೊಟ್ಟರೂ ಮಾಡ್ತೀನಿ. ನನಗೆ ಗೌರವವಾಗಿ ಬದುಕುವುದು ಮುಖ್ಯ ಎಂದಿದ್ದಾರೆ ಮಹಾದೇವಿ ಕೊಪ್ಪದ್.[ವೀರಯೋಧ ಹನುಮಂತಪ್ಪ ಪತ್ನಿಗೆ ಇನ್ನೂ ಸಿಕ್ಕಿಲ್ಲ ಉದ್ಯೋಗ]
ನಮಗೆ ಭಾರತೀಯ ಸೈನಿಕರ ಶೌರ್ಯದ ಪರಿಚಯವಿದೆ. ಅವರ ಬಗ್ಗೆ ಹೆಮ್ಮೆಯಿದೆ. ಆದರೆ ಅವರ ಮನೆಗಳಲ್ಲಿ ಬಾಗಿಲ ಹೊರಗೆ ನಿಂತು ಕಾಯುವ ಜೀವಗಳ ಬಗ್ಗೆ ಬಹಳ ಸಲ ಯೋಚಿಸೋದಿಲ್ಲ. ಇದು ತುಂಬ ಕಷ್ಟದ ಜೀವನ. ತಮ್ಮ ಜೀವಕ್ಕೆ ಜೀವವಾದದವರು ಮನೆಗೆ ಹಿಂತಿರುಗಲ್ಲ ಎಂಬ ಸಂಗತಿ ಉಂಟುಮಾಡುವ ಧಾವಂತ ನಮಗೆ ಗೊತ್ತಾಗುವುದಿಲ್ಲ.
ತನ್ನ ತಂದೆಯ ಬಗ್ಗೆ ಮಗಳು ಕೇಳುವ ಪ್ರಶ್ನೆಗಳಿಗೆ ಆ ತಾಯಿ ಮಹಾದೇವಿ ಏನಂತ ಉತ್ತರಿಸುತ್ತಾರೆ. ವೀರಯೋಧನ ಪತ್ನಿ ಎಂಬ ಗೌರವ ಈ ದೇಶದ ಎಲ್ಲ ಪ್ರಜೆ ಕೊಡುತ್ತಾರೆ. ಆದರೆ ಆಕೆಗೆ ಕೊಟ್ಟಿದ್ದ ಮಾತಿನಂತೆ ಒಂದು ಕೆಲಸವನ್ನು ರಾಜ್ಯ ಸರಕಾರ ಕೊಡಬೇಕು. ಕೊಡಲೇಬೇಕು.