ಹನುಮಂತಪ್ಪನ ಕಂಚಿನ ಪ್ರತಿಮೆ ಸ್ಥಾಪನೆಗೆ ಸಿದ್ಧತೆ
ವೀರಯೋಧ ಹನುಮಂತಪ್ಪ ಕೊಪ್ಪದ ಅವರ ನೆನಪಿಗಾಗಿ ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಕಂಚಿನ ಪ್ರತಿಮೆ ಸ್ಥಾಪಿಸಲಾಗುತ್ತಿದ್ದು, ಕೊಲ್ಹಾಪುರದಲ್ಲಿ ಪ್ರತಿಮೆಗೆ ಅಂತಿಮ ರೂಪ ನೀಡಲಾಗುತ್ತಿದೆ. ಏಪ್ರಿಲ್ ನಲ್ಲಿ ಪ್ರತಿಷ್ಠಾಪನೆಯಾಗುವ ಸಂಭವವಿದೆ.
ಹುಬ್ಬಳ್ಳಿ, ಮಾರ್ಚ್ 02 : ಸಿಯಾಚಿನ್ ಸಾಹಸಿ 'ಅಮರ ಯೋಧ' ಲಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ ಅವರು ಹುತಾತ್ಮರಾಗಿ ಒಂದು ವರ್ಷಗಳ ನಂತರ ಅವರ ಕಂಚಿನ ಪ್ರತಿಮೆಯ ಅನಾವರಣಕ್ಕೆ ಅವರ ಹುಟ್ಟೂರಲ್ಲಿ ಅಂತಿಮ ಹಂತದ ಸಿದ್ಧತೆಗಳು ಭರದಿಂದ ನಡೆಯುತ್ತಿವೆ.
ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನಲ್ಲಿರುವ ಬೆಟ್ಟದೂರಿನಲ್ಲಿ ಹನುಮಂತಪ್ಪನ ಅಂತ್ಯ ಸಂಸ್ಕಾರ ನೆರವೇರಿದ್ದರೂ, ಕುಂದಗೋಳದಲ್ಲಿ 5 ಅಡಿ ಎತ್ತರದ ಕಂಚಿನ ಪ್ರತಿಮೆ ಸ್ಥಾಪಿಸಲು ಅಂತಿಮ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪ್ರತಿಮೆ ಏಪ್ರಿಲ್ ತಿಂಗಳಲ್ಲಿ ಅನಾವರಣಗೊಳ್ಳುವ ಸಂಭವನೀಯತೆಯಿದೆ.
ಫೆಬ್ರವರಿ 11ರಂದು ಹನುಮಂತಪ್ಪನವರು ಹುತಾತ್ಮರಾಗಿ ಒಂದು ವರ್ಷ ಸಂದರೂ ಅವರ ಹೆಂಡತಿ ಮಹಾದೇವಿಗೆ ಕರ್ನಾಟಕ ಸರಕಾರದಿಂದ ಉದ್ಯೋಗ ದೊರೆಯದಿದ್ದರಿಂದ ಅನಿವಾರ್ಯವಾಗಿ ಒನ್ಇಂಡಿಯಾ ಪೋರ್ಟಲ್ ಬೃಹತ್ ಆಂದೋಲನವನ್ನು ಆರಂಭಿಸಬೇಕಾಯಿತು. [ನೆಲ ಗುಡಿಸಿ ಒರೆಸುವುದಕ್ಕೂ ಸಿದ್ಧ : ಯೋಧ ಹನುಮಂತಪ್ಪನ ಹೆಂಡತಿ]
ಮೂರು ವರ್ಷದ ಕಂದಮ್ಮನೊಡನೆ ಬೆಟ್ಟದೂರಿನಲ್ಲಿಯೇ ನೆಲೆಸಿರುವ ಮಹಾದೇವಿಗೆ ಕೆಲಸ ನೀಡುವುದು ಮತ್ತು ತವರೂರಲ್ಲಿ ಹನುಮಂತಪ್ಪನವರ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸುವುದು ನಮ್ಮ ಆಗ್ರಹಗಳಲ್ಲಿ ಒಂದಾಗಿತ್ತು. ರಾಜ್ಯ ಸರಕಾರ ಕೆಲಸ ನೀಡುವುದಾಗಿ ಖಚಿತ ಭರವಸೆ ನೀಡಿದೆ, ಈಗ ಕಂಚಿನ ಪ್ರತಿಮೆಯ ಕೆಲಸವೂ ಭರದಿಂದ ಸಾಗಿದೆ. [ದೇಶಭಕ್ತರು ಬೇಕು ನಿಜ, ಆದ್ರೆ ಇಂಥ 'ದೇಶಭಕ್ತ'ರು ಬೇಡ್ವೇಬೇಡ ಸ್ವಾಮಿ!]
ಕುಂದಗೋಳದಲ್ಲಿ ಸ್ಮಾರಕ ಸ್ಥಾಪನೆ
ಹನುಮಂತಪ್ಪನ ನೆನಪಿಗಾಗಿ ಕುಂದಗೋಳದಲ್ಲಿ ಸ್ಮಾರಕ ನಿರ್ಮಿಸಲು ಹಣವನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿತ್ತಾದರೂ ಕೆಲವರ 'ಮಧ್ಯಸ್ಥಿಕೆ'ಯಿಂದಾಗಿ ಕೆಲಸ ಕುಂಟುತ್ತ ಸಾಗಿತ್ತು. ಒನ್ಇಂಡಿಯಾ ಭರ್ಜರಿಯಾಗಿ ಅಭಿಯಾನ ಆರಂಭಿಸಿ ಸರಕಾರದ ಮೇಲೆ ಒತ್ತಡ ಹೇರುತ್ತಿದ್ದಂತೆ ಸ್ಮಾರಕ ಮತ್ತು ಪ್ರತಿಮೆಯ ಕೆಲಸ ಯುದ್ಧೋಪಾದಿಯಲ್ಲಿ ನಡೆಯುತ್ತಿದೆ.[ಮಹಾದೇವಿಗೆ ಸಂಸದರಿಂದಲೂ ಹರಿದುಬಂದ ಸಹಾಯಹಸ್ತ]
ಯೋಧನ ಸಮವಸ್ತ್ರ ಧರಿಸಿರುವ ಹನುಮಂತಪ್ಪ
ಪ್ರತಿಮೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ತಯಾರಾಗುತ್ತಿದ್ದು ಕುಂದಗೋಳದ ಪಂಚಾಯತ್ ಕಚೇರಿಯ ಆವರಣದಲ್ಲಿ ಪ್ರತಿಮೆ ಪ್ರತಿಷ್ಠಾಪಿಸಲಾಗುತ್ತಿದೆ. ಸ್ಮಾರಕ ಕೂಡ ಪಂಚಾಯತ್ ಕಚೇರಿಯ ಆವರಣದಲ್ಲೇ ನಿರ್ಮಾಣವಾಗುತ್ತಿದೆ. ಯೋಧನ ಸಮವಸ್ತ್ರ ಧರಿಸಿರುವ ಹನುಮಂತಪ್ಪನವರು ಕೈಯಲ್ಲಿ ಬಂದೂಕು ಹಿಡಿದು ನಿಂತಿರುವ ಆಕರ್ಷಕ ಪ್ರತಿಮೆಯದು.
2.5 ಲಕ್ಷ ರುಪಾಯಿ ವೆಚ್ಚದಲ್ಲಿ ಪ್ರತಿಮೆ
ಸ್ಥಳೀಯ ಶಾಸಕ ಸಿಎಸ್ ಶಿವಳ್ಳಿಯವರು ಪಂಚಾಯತ್ ಸದಸ್ಯರೊಡಗೂಡಿ ಕೊಲ್ಹಾಪುರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರತಿಮೆಯ ಚಿತ್ರ ಕೂಡ ತೆಗೆದುಕೊಂಡು ಬಂದಿದ್ದಾರೆ. ಒಟ್ಟಾರೆ 2.5 ಲಕ್ಷ ರುಪಾಯಿ ವೆಚ್ಚದಲ್ಲಿ ಪ್ರತಿಮೆ ತಯಾರಾಗುತ್ತಿದೆ. ಪ್ರತಿಮೆಯನ್ನು ಮೆರವಣಿಗೆಯಲ್ಲಿ ತಂದು ಕುಂದಗೋಳದಲ್ಲಿ ಪ್ರತಿಷ್ಠಾಪಿಸುವ ಯೋಜನೆಯನ್ನು ಪಂಚಾಯತ್ ಸದಸ್ಯರು ಹಾಕಿಕೊಂಡಿದ್ದಾರೆ.
ಕೇಂದ್ರಕ್ಕೆ ಅನುಮತಿ ಕೋರಿಕೆ
ಹನುಮಂತಪ್ಪನ ನೆನಪಿಗೋಸ್ಕರ ಬೆಟ್ಟದೂರಿನಲ್ಲಿ ಸೈನಿಕ ಶಾಲೆಯನ್ನು ಸ್ಥಾಪಿಸಬೇಕು ಎಂದೂ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನು ಕೂಡ ಸಕಾರಾತ್ಮಕವಾಗಿ ಪರಿಗಣಿಸಿರುವ ರಾಜ್ಯ ಸರಕಾರ ಸೈನಿಕ ಶಾಲೆ ಆರಂಭಿಸಲು ಅನುಮತಿ ನೀಡಬೇಕು ಎಂದು ಕೇಂದ್ರ ಸರಕಾರವನ್ನು ಕೋರಿಕೊಂಡಿದೆ. ಕೇಂದ್ರದಿಂದ ಇನ್ನೂ ಪ್ರತಿಸ್ಪಂದನೆ ಬರಬೇಕಿದೆ.
ಉದ್ಯೋಗಕ್ಕಾಗಿ ಕಾದು ಕುಳಿತಿರುವ ಮಹಾದೇವಿ
ಈ ನಡುವೆ, 27 ವರ್ಷದ ಮಹಾದೇವಿ ಕೊಪ್ಪದ ಅವರು ಸರಕಾರದಿಂದ ಉದ್ಯೋಗದ ಪತ್ರ ಬರುತ್ತದೆಂದು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಮುಂದೆ ಗೌರವಯುತವಾಗಿ ಉತ್ತಮ ಜೀವನ ನಡೆಸಲು, ಮಗಳನ್ನು ಓದಿಸಿ ವಿದ್ಯಾವಂತಳಾಗಿಸಲು ಮಹಾದೇವಿಗೆ ಉದ್ಯೋಗದ ಅಗತ್ಯ ಖಂಡಿತವಿದೆ. ಸರಕಾರವೂ ಸಕಾರಾತ್ಮಕವಾಗಿ ಸ್ಪಂದಿಸಿರುವುದು ಸಂತೋಷದ ಸಂಗತಿ.