ಅಡ್ಡಾದಿಡ್ಡಿ ಕಾರು ಚಾಲನೆ: ಮೂವರ ವಿರುದ್ಧ ಎಫ್ಐಆರ್
ಬೆಂಗಳೂರು, ಜು.2: ನಗರದಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿ ಸಂಚಾರ ಪೊಲೀಸರಿಗೆ ಧಮ್ಕಿ ಹಾಕಿದ ಮೂವರು ಯುವಕರ ವಿರುದ್ಧ ಹೈಗ್ರೌಂಡ್ಸ್ ಸಂಚಾರ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀನಿವಾಸ್ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರ ನಿಯಮವನ್ನು ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಅವಾಚ್ಯ ಪದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಕ್ಕೆ ಎಸ್ಐ ಶ್ರೀನಿವಾಸ್ ಅವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ನೀಡಿದ್ದು ಬೆದರಿಕೆ ಹಾಕಿದ ಯುವಕರ ವಿರುದ್ಧ ಮಂಗಳವಾರ ಎಫ್ಐಆರ್ ದಾಖಲಾಗಿದೆ.
ಏನಿದು ಪ್ರಕರಣ: ಭಾನುವಾರ ಸಂಜೆ ಹೈಗ್ರೌಂಡ್ಸ್ ಸಂಚಾರ ಠಾಣೆ ಎಸ್ಐ ಶ್ರೀನಿವಾಸ್ ಮತ್ತು ಸಿಬ್ಬಂದಿ ಸಂಚಾರ ದಟ್ಟನೆಯನ್ನು ನಿಯಂತ್ರಿಸುತ್ತಿದ್ದ ವೇಳೆ 2 ಜಾಗ್ವಾರ್ ಮತ್ತು ಮತ್ತು ಒಂದು ಪೊರ್ಷೆ ಕಾರುಗಳು ಸ್ಪರ್ಧೆಗೆ ಬಿದ್ದವರಂತೆ ಅತಿ ವೇಗವಾಗಿ ಹೋಗುತ್ತಿದ್ದನ್ನು ಕಂಡು ಪೊಲೀಸರು ಕಾರನ್ನು ನಿಲ್ಲಿಸಲು ಸೂಚಿಸಿದ್ದರು.[ಅಡ್ಡಾದಿಡ್ಡಿ ಚಾಲನೆ: ಎಸ್ಎಂಕೆ ಮೊಮ್ಮಗನಿಂದ ಧಮ್ಕಿ]
ಕೌಶಿಕ್ ,ಅದಿತ್ಯ ರೆಡ್ಡಿ,ಸಿದ್ದಾಂತ್ ಸರಾಫ್ ಕಾರನ್ನು ನಿಲ್ಲಿಸದೇ ಸಮೀಪದ ತಾಜ್ ವೆಸ್ಟೆಂಡ್ ಹೋಟೆಲ್ನ ಆವರಣಕ್ಕೆ ವಾಹನ ನುಗ್ಗಿಸಿದ್ದಾರೆ. ಬೈಕ್ನಲ್ಲಿ ಹಿಂಬಾಲಿಸಿ ಹೋದ ಶ್ರೀನಿವಾಸ್ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ಪಾವತಿಸುವಂತೆ ಚಾಲಕರಿಗೆ ಸೂಚಿಸಿದ್ದದ್ದಕ್ಕೆ ಶ್ರೀನಿವಾಸ್ ಅವರಿಗೆ ಧಮ್ಕಿ ಹಾಕಿದ್ದರು.[ಟ್ರಾಫಿಕ್ ರೂಲ್ಸ್ ಬ್ರೇಕ್: ಮಿರ್ಜಿ ಪುತ್ರರು ಮಾಡಿದ್ದೇನು?]
ಅಪಾಯಕಾರಿ ಚಾಲನೆ, ಅಡ್ಡಾದಿಡ್ಡಿ ಚಾಲನೆ, ಪೊಲೀಸರ ಜೊತೆ ಅನುಚಿತ ವರ್ತನೆ ,ಟಿಂಡೆಡ್ ಗ್ಲಾಸ್ ಬಳಕೆ, ವಾಹನ ಸಂಚಾರಕ್ಕೆ ಅಡ್ಡಿ, ಪೊಲೀಸ್ ಆಜ್ಞೆ ಉಲ್ಲಂಘನೆ, ವಿರುದ್ಧ ಪ್ರಕರಣ ದಾಖಲಿಸಿ ತಲಾ 900 ರಂತೆ 2700 ರೂ.ದಂಡವನ್ನು ಸಂಚಾರ ಪೊಲೀಸರು ವಸೂಲಿ ಮಾಡಿದ್ದರು.