ಕೊಲೆ ಪಾತಕಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು
ಬೆಂಗಳೂರು, ಮಾರ್ಚ್ 26: ಕೊಲೆ ಪಾತಕಿ ಕಾಲಿಗೆ ಗುಂಡು ಹೊಡೆದು ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದಾರೆ. ಹೊಸಕೆರೆಹಳ್ಳಿ ಹನುಮಗಿರಿ ಬೆಟ್ಟದ ಸಮೀಪ ಘಟನೆ ನಡೆದಿದ್ದು, ಪೊಲೀಸ್ ಇನ್ಸ್ಪೆಕ್ಟರ್ ಜನಾರ್ಧನ್ ಸರ್ವೀಸ್ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾರೆ.
ಧನುಶ್ ಗುಂಡು ತಿಂದ ಪಾತಕಿ. ಕೊಲೆ ಪ್ರಕರಣದ ಆರೋಪಿಯಾಗಿದ್ದ ಧನುಶ್ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದರು. ಮಾ. 24 ರಂದು ಇಟ್ಟಮಡು ಮುಖ್ಯ ರಸ್ತೆಯಲ್ಲಿ ಮಂಜ ಅಲಿಯಾಸ್ ದಡಿಯಾ ಮಂಜು ಎಂಬ ರೌಡಿಯನ್ನು ಕೊಲೆ ಮಾಡಿದ್ದರು. ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಧನುಶ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು.
ಶುಕ್ರವಾರ ಬೆಳಗಿನ ಜಾವ 1 ಗಂಟೆ ಸುಮಾರಿನಲ್ಲಿ ಹನುಮಗಿರಿ ಬೆಟ್ಟದಲ್ಲಿ ಧನುಶ್ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ವೇಳೆ ಬಂಧನಕ್ಕೆ ತೆರಳಿದ ಪೊಲೀಸರ ವಿರುದ್ಧ ಆರೋಪಿ ಮಾರಕಾಸ್ತ್ರಗಳಿಂದ ಪ್ರತಿದಾಳಿ ನಡೆಸಿದ್ದಾನೆ. ಈ ವೇಳೆ ಕಾನ್ಸ್ಟೆಬಲ್ ಲೋಕೇಶ್ ಎಂಬಾತ ಗಾಯಗೊಂಡಿದ್ದು, ಆತ್ಮ ರಕ್ಷಣೆಗಾಗಿ ಪೊಲೀಸ್ ಇನ್ಸ್ಪೆಕ್ಟರ್ ಜನಾರ್ಧನ್ ಗುಂಡು ಹಾರಿಸಿದ್ದಾರೆ. ಪಾತಕಿ ಧನುಶ್ ಬಲಗಾಲಿಗೆ ಪೆಟ್ಟು ಬಿದ್ದಿದ್ದು, ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.