ಡ್ಯುಯೆಟ್ ಬಾರ್ ಮುಂದೆ ಓನರ್ ಮನೀಶ್ ಶೆಟ್ಟಿ ಗುಂಡಿಕ್ಕಿ ಹತ್ಯೆ
ಬೆಂಗಳೂರು, ಅ. 15: ಬ್ರಿಗೇಡ್ ರಸ್ತೆ ಸಮೀಪವಿರುವ ಡ್ಯುಯೆಟ್ ಬಾರ್ ಓನರ್ ಮನೀಶ್ ಶೆಟ್ಟಿ ಅವರನ್ನು ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ರೆಸ್ಟ್ ಹೌಸ್ ರಸ್ತೆಯಲ್ಲಿರುವ ತಮ್ಮ ಬಾರ್ ಮುಂದೆ ರಾತ್ರಿ ಸುಮಾರು 9. 05 ಸುಮಾರಿಗೆ ನಿಂತಿದ್ದ 45 ವರ್ಷ ವಯಸ್ಸಿನ ಮನೀಶ್ ಶೆಟ್ಟಿ ಅವರ ಮೇಲೆ ಬೈಕಿನಿಂದ ಬಂದ ಅನಾಮಿಕ ವ್ಯಕ್ತಿಗಳು ಮೊದಲಿಗೆ ಮನೀಶ್ ಶೆಟ್ಟಿ ಅವರಿಗೆ ಚಾಕುವಿನಿಂದ ತಿವಿದಿದ್ದಾರೆ ನಂತರ ಡಬ್ಬಲ್ ಬ್ಯಾರೆಲ್ ಗನ್ ಬಳಸಿ ಎರಡು ಸುತ್ತು ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿದಾರೆ.
ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮನೀಶ್ ರನ್ನು ತಕ್ಷಣವೇ ಸಮೀಪದ ಮಲ್ಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಯತ್ನಿಸಲಾಗಿದೆ. ಆದರೆ, ಪಾಯಿಂಟ್ ಬ್ಲ್ಯಾಂಕ್ ನಲ್ಲಿ ತಗುಲಿದ್ದ ಗುಂಡು ಮನೀಶ್ ಪ್ರಾಣ ತೆಗೆದಿದೆ.
ಮೇಲ್ನೋಟಕ್ಕೆ ಇದು ಹಳೆ ದ್ವೇಷದಿಂದ ನಡೆದ ಕೃತ್ಯ ಎಂದು ಕಂಡು ಬಂದಿದೆ. ರವಿ ಪೂಜಾರಿ ಗ್ಯಾಂಗಿನವರು ಇರಬಹುದು ಎಂದು ಶಂಕಿಸಲಾಗಿದೆ. ಮೃತ ಮನೀಶ್ ಶೆಟ್ಟಿ ಅವರು ಉಡುಪಿಯ ಅಂಬಾಲಪಾಡಿಯವರಾಗಿದ್ದು, ಅವರ ವಿರುದ್ಧ ಉಡುಪಿ, ದಕ್ಷಿಣ ಕನ್ನಡ ಹಾಗೂ ಮುಂಬೈನಲ್ಲಿ ಹಲವು ಕೇಸುಗಳಿವೆ. ಕೊಲೆ ಬೆದರಿಕೆ, ಕೊಲೆ ಯತ್ನ ಪ್ರಕರಣದ ಆರೋಪಿಯೂ ಹೌದು. ಮಂಗಳೂರಿನಲ್ಲಿ ರೌಡಿ ಶೀಟರ್ ಆಗಿದ್ದ ಮನೀಶ್ ಅವರು ಒಂದು ಕಾಲದಲ್ಲಿ ರವಿ ಪೂಜಾರಿಗೆ ಆಪ್ತರಾಗಿದ್ದರು ಎಂದು ಕಬ್ಬನ್ ಪಾರ್ಕ್ ಪೊಲೀಸರು ತಿಳಿಸಿದ್ದಾರೆ.
Recommended Video
ಬೆಂಗಳೂರು ಹಾಗೂ ಹೈದರಾಬಾದಿನಲ್ಲಿ ದೊಡ್ಡ ಮಟ್ಟದಲ್ಲಿ ಚಿನ್ನಾಭರಣ ಮಳಿಗೆ ದೋಚುವ ಕೃತ್ಯಗಳಲ್ಲಿ ಮನೀಶ್ ಕೈವಾಡ ಇದ್ದೆ ಇರುತ್ತಿತ್ತು. ಸದ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಜಾರಿಯಲ್ಲಿದೆ.