ಖಾಸಗಿ ಆಸ್ಪತ್ರೆಗಳ ರೋಗಿ ಮತ್ತು ಚಿಕಿತ್ಸೆ ವೆಚ್ಚ ಮಾಹಿತಿ ಕಲೆ ಹಾಕಲು ಬರ್ತಿದೆ ಬಿಬಿಎಂಪಿ!
ಬೆಂಗಳೂರು, ಮೇ. 14: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಹೆಸರಿನಲ್ಲಿ ಸಿಕ್ಕಾಪಟ್ಟೆ ಸುಲಿಗೆ ಮಾಡಿದ ಖಾಸಗಿ ಆಸ್ಪತ್ರೆಗಳಿಗೆ ಕಾದಿದೆ ಗಂಡಾಂತರ! ಮನಸೋ ಇಚ್ಛೆ ಶುಲ್ಕ ವಸೂಲಿ ಮಾಡಿ ಕೊರೊನಾ ಸೋಂಕಿತರ ಮಾಹಿತಿಯನ್ನು ಸರ್ಕಾರಕ್ಕೆ ನೀಡದೇ ಇರುವ ಆಸ್ಪತ್ರೆಗಳ ಜನ್ಮ ಜಾಲಾಡಲಿಕ್ಕೆ ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್ ನೇತೃತ್ವದಲ್ಲಿ ತಂಡವೊಂದು ರಚನೆಯಾಗಿದೆ.
ಕೊರೊನಾ ಸೋಂಕು ಅಲೆ ಅಬ್ಬರಿಸುತ್ತಿದ್ದಂತೆ ಖಾಸಗಿ ಆಸ್ಪತ್ರೆಗಳು ಕಚೇರಿಗಳನ್ನೆಲ್ಲಾ ಹಾಸಿಗೆಗಳನ್ನಾಗಿ ಪರಿವರ್ತಿಸಿತು. ಬೆಡ್ಗಾಗಿ ಆಹಾಕಾರ ತಲೆದೋರಿದ ಹಿನ್ನೆಲೆಯಲ್ಲಿ ಕೇವಲ ಹತ್ತು ಸಾವಿರಕ್ಕೆ ಸಿಗುತ್ತಿದ್ದ ಐಸಿಯು ವೆಂಟಿಲೇಟರ್ ಚಿಕಿತ್ಸೆ ವೆಚ್ಚವನ್ನು 40 ರಿಂದ 50 ಸಾವಿರಕ್ಕೆ ಹೆಚ್ಚಿಸಿದವು. ಇನ್ನು ಸ್ಪರ್ಶ, ಬಿಜಿಎಸ್ , ಅಪೋಲೋ , ಮಣಿಪಾಲ್, ವಿಕ್ರಮ್ನಂಥ ಕಾರ್ಪೋರೇಟ್ ಆಸ್ಪತ್ರೆಗಳಲ್ಲಿ ಐಸಿಯು ಚಿಕಿತ್ಸೆ ವೆಚ್ಚ ಒಂದು ಲಕ್ಷ ರೂ. ಗಡಿ ದಾಟಿದೆ.
ಕೊರೊನಾ ಪರೀಕ್ಷೆ ಮಾಡುವ ಸಿಟಿ ಸ್ಕ್ಯಾನ್ ದರವನ್ನು 6 ಸಾವಿರಕ್ಕೆ ಹೆಚ್ಚಿಸಿ ಸುಲಿಗೆ ಮಾಡಲಾಯಿತು. ಸಿಟಿ ಸ್ಕ್ಯಾನ್ ವೆಚ್ಚಕ್ಕೆ ಸರ್ಕಾರ ಕಡಿವಾಣ ಹಾಕಿ ಆದೇಶ ಮಾಡಿತು. ಆದರೆ, ಐಸಿಯು ಕೊರೊನಾ ಚಿಕಿತ್ಸೆ ವೆಚ್ಚ, ರೆಮ್ಡಿಸಿವಿರ್ ದುಬಾರಿ ಬೆಲೆಗೆ ಮಾರಾಟದ ಜಾಲಕ್ಕೆ ಕಡಿವಾಣ ಬಿದ್ದಿರಲಿಲ್ಲ. ಹೇಳುವವರು ಯಾರೂ ಇಲ್ಲ ಅಂತ ಖಾಸಗಿ ಆಸ್ಪತ್ರೆಗಳು ಮನಸೋ ಇಚ್ಛೆ ಚಿಕಿತ್ಸೆ ನೀಡಿ ಮಾಹಿತಿಯನ್ನು ಕೂಡ ಸರ್ಕಾರಕ್ಕೆ ನೀಡಿರಲಿಲ್ಲ.
ಬೆಂಗಳೂರಿನಲ್ಲಿ ಕೊರೊನಾ ಹೆಸರಿನಲ್ಲಿ ಸುಲಿಗೆ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಲು ಇದೀಗ ಬಿಬಿಎಂಪಿ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್ ಡಿ. ಅವರ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿದೆ. ಯಾವ್ಯಾವ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರು ಚಿಕಿತ್ಸೆ ಪಡೆದಿದ್ದಾರೆ. ಎಷ್ಟು ಮಂದಿ ಚಿಕಿತ್ಸೆ ಪಡೆದಿದ್ದಾರೆ. ಎಷ್ಟು ಮಂದಿ ಸಾವಿಗೀಡಾಗಿದ್ದಾರೆ ಎಂಬುದರ ಲೆಕ್ಕವನ್ನು ಸರ್ಕಾರಕ್ಕೆ ನೀಡಬೇಕಿತ್ತು. ಹಣದ ಭರಾಟೆಯಲ್ಲಿ ಮರೆತಿದ್ದ ಖಾಸಗಿ ಆಸ್ಪತ್ರೆಗಳ ಚಳಿ ಬಿಡಿಸಲು ಈ ವಿಶೇಷ ತಂಡ ರಚನೆಯಾಗಿದೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡುತ್ತಿರುವ ಖಾಸಗಿ ಆಸ್ಪತ್ರೆಗಳು, ಚಿಕಿತ್ಸೆ ನೀಡಿದ ರೋಗಿಗಳ ವಿವರ, ಚೇತರಿಕೆ, ಸಾವು ಚಿಕಿತ್ಸೆಗೆ ತಗುಲಿದ ವೆಚ್ಚದ ಎಲ್ಲಾ ವಿವರಗಳನ್ನು ಸರ್ಕಾರಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು.
ಇನ್ನು ಕೊರೊನಾ ಭೀತಿಯನ್ನು ಬಂಡವಾಳ ಮಾಡಿಕೊಂಡು ದುಬಾರಿ ಶುಲ್ಕ ವಸೂಲಿ ಮಾಡಿರುವ ಆಸ್ಪತ್ರೆಗಳ ಅಕ್ರಮದ ಬಗ್ಗೆಯೂ ಈ ತಂಡ ಪರಿಶೀಲನೆ ನಡೆಸಲಿದೆ. ಯಾವುದಾದರೂ ಚಿಕಿತ್ಸೆಗೆ ದುಬಾರಿ ವೆಚ್ಚ ವಿಧಿಸಿದ್ದೇ ಆದಲ್ಲಿ ಅಂಥ ಪ್ರಕರಣಗಳ ವಿವರಗಳನ್ನು ಪಡೆದು ಕ್ರಮ ಜರುಗಿಸಲು ತಂಡದಲ್ಲಿ ಚರ್ಚೆ ನಡೆದಿದೆ. ಇನ್ನೆರಡು ದಿನಗಳಲ್ಲಿ ಈ ತಂಡ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲಿದೆ ಎಂದು ತಂಡದಲ್ಲಿರುವ ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊರೊನಾ ಸೋಂಕಿತರು, ದಾಖಲಾದ ಆಸ್ಪತ್ರೆಗಳು ಚೇತರಿಕೆ ಹಾಗೂ ಸಾವು ಕಂಡ ಪ್ರಕರಣಗಳ ಬಗ್ಗೆ ಸಮಗ್ರವಾಗಿ ಮಾಹಿತಿ ಸಂಗ್ರಹಿಸಲು ಐಎಎಸ್ ಅಧಿಕಾರಿ ರಣದೀಪ್ ಡಿ. ಅವರ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ ಗುಪ್ತಾ ಅವರು ಶುಕ್ರವಾರ ತಿಳಿಸಿದ್ದಾರೆ. ಈ ಬೆಳವಣಿಗೆ ಕೆಲವು ಖಾಸಗಿ ಆಸ್ಪತ್ರೆಗಳ ನಿದ್ದೆ ಗೆಡಿಸಿದೆ. ಕೊರೊನಾ ಹೆಸರಿನಲ್ಲಿ ಲೂಟಿಗೆ ಇಳಿದಿರುವ ಆಸ್ಪತ್ರೆಗಳ ಚಿಕಿತ್ಸೆ ವೆಚ್ಚದ ಬಗ್ಗೆ ನಿಯಂತ್ರಣ ಹಾಕುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿತ್ತು.
Recommended Video
ಈಗಲಾದರೂ ಸರ್ಕಾರ ಎಚ್ಚೆತ್ತು ಖಾಸಗಿ ಆಸ್ಪತ್ರೆಗಳು ಅವುಗಳ ಸೌಲಭ್ಯದ ಆಧಾರದ ಮೇಲೆ ವಿಭಾಗ ಮಾಡಿ ಕೊರೊನಾ ಚಿಕಿತ್ಸಾ ವೆಚ್ಚ ( ಐಸಿಯು, ಬೆಡ್ ಚಾರ್ಜ್, ಟ್ರೀಟ್ ಮೆಂಟ್ ) ನಿಗದಿ ಮಾಡುವುದು ಸೂಕ್ತ ಎಂಬ ಅಭಿಪ್ರಾಯಗಳು ಅಧಿಕಾರಿ ವಲಯದಲ್ಲಿ ಕೇಳಿ ಬರುತ್ತಿದೆ. ಅಲ್ಪ ಮಟ್ಟಿಗೆ ಬಿಬಿಎಂಪಿ ಎಚ್ಚೆತ್ತುಕೊಂಡಿದ್ದು, ರಾಜ್ಯ ಮಟ್ಟದಲ್ಲಿ ಸರ್ಕಾರ ಖಾಸಗಿ ಆಸ್ಪತ್ರೆಗಳ ದಂಧೆಗೆ ಕಡಿವಾಣ ಹಾಕಲು ಮುಂದಾಗಲಿದೆಯೇ ಎಂಬುದನ್ನು ಕಾದು ನೋಡಬೇಕು.