ರಾಜ್ಯ ರಾಜಕಾರಣಕ್ಕೆ.. ಊಹಾಪೋಹಗಳಿಗೆ ತೆರೆ ಎಳೆದರಾ ಶೋಭಾ?
ಬೆಂಗಳೂರು, ಜುಲೈ 26: ಸಾಂವಿಧಾನಿಕ ತೊಡಕುಗಳು, ಸಂಖ್ಯಾಬಲದ ಕೊರತೆ ನಡುವೆಯೇ ಬಿ. ಎಸ್. ಯಡಿಯೂರಪ್ಪ ಶುಕ್ರವಾರ ಸಂಜೆ ಕರ್ನಾಟಕದ 26ನೇ ಮುಖ್ಯಮಂತ್ರಿಯಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸುವುದಾಗಿ ಘೋಷಿಸಿದ್ದಾರೆ.
ಸಹಜವಾಗಿಯೇ ಬಿಎಸ್ವೈ ನಡೆಗಳು ರಾಜಕೀಯ ವಲಯದಲ್ಲಿ ಮಾತ್ರ ಅಲ್ಲ ಸಾಮಾನ್ಯ ಜನರಲ್ಲೂ ಕುತೂಹಲ ಮೂಡಿಸಿದೆ. ಮೊನ್ನೆ ಸರಕಾರ ಪತನವಾದ ಮಾರನೇ ದಿನದಿಂದಲೇ ಬಿಜೆಪಿ ಮುಖಂಡರು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿಯ ಸುತ್ತ ನೆರೆಯತೊಡಗಿದ್ದಾರೆ. ಸಂಭಾವ್ಯ ಮಂತ್ರಿ ಪಟ್ಟಿಗಳಲ್ಲಿ ತಮ್ಮ ಹೆಸರಿಗಾಗಿ ಎಡತಕಾಟಗಳು ಶುರುವಾಗಿವೆ.
ಸಂಜೆ ಆರು ಗಂಟೆಗೆ ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ
ಈ ನಡುವೆ ಕೂತೂಹಲ ಮೂಡಿಸಿರುವುದು ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಬಂದಿರುವ ಸದ್ಯ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರ ನಡೆಗಳು.
ಕುಮಾರಸ್ವಾಮಿ ವಿಶ್ವಾಸ ಮತ ಸೋಲುವ ದಿನ ಬೆಳಗ್ಗೆಯೇ ಚಾಮುಂಡಿ ಬೆಟ್ಟ ಹತ್ತಿಳಿದ ಶೋಭ ಕರಂದ್ಲಾಜೆ 'ಯಡಿಯೂರಪ್ಪ ಅವರೇ ಮುಂದಿನ ಮುಖ್ಯಮಂತ್ರಿ' ಎಂದಿದ್ದರು. ಇದೀಗ ಪ್ರಮಾಣ ವಚನ ಸ್ವೀಕಾರದ ಹಿನ್ನೆಲೆಯಲ್ಲಿ ದಿಲ್ಲಿಗೆ ತೆರಳಿದ ನಿಯೋಗದಲ್ಲಿಯೂ ಪ್ರಮುಖ ಪಾತ್ರವಹಿಸಿದ್ದಾರೆ.
ಹೀಗಿರುವಾಗ ಯಡಿಯೂರಪ್ಪ ನೇತೃತ್ವದ ಸರಕಾರ ಅಧಿಕಾರ ಬಂದರೆ ಶೋಭ ಪಾತ್ರ ಏನಾಗಿರಲಿದೆ? ಎಂಬುದು ಸಹಜವಾಗಿ ಎದ್ದಿರುವ ಪ್ರಶ್ನೆ. 'ಒನ್ ಇಂಡಿಯಾ ಕನ್ನಡ' ಇಂತಹದೊಂದು ಪ್ರಶ್ನೆಯನ್ನು ಶೋಭ ಮುಂದಿಟ್ಟಾಗ, "''ನಾನು ರಾಜ್ಯ ರಾಜಕಾರಣಕ್ಕೆ ಬರುವ ಆಲೋಚನೆ ಮಾಡಿಲ್ಲ, ಈಗ ಸಂಸದೆಯಾಗಿದ್ದೇನೆ, ಸಂಸದೆಯಾಗಿಯೇ ಮುಂದುವರೆಯುತ್ತೇನೆ. ರಾಜ್ಯ ರಾಜಕಾರಣದಲ್ಲಿ ಯಾವುದೇ ಆಸಕ್ತಿ ಇಲ್ಲ,'' ಎಂದರು.
''ಯಡಿಯೂರಪ್ಪ ಅವರು ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಾರೆ ಎಲ್ಲರಿಗೂ ಇದು ಖುಷಿಯ ವಿಚಾರ, ಅವರು ಬಡವರು, ರೈತರ ಪರವಾಗಿಯೇ ಇದ್ದಾರೆ, ಮುಂದೂ ಕೂಡ ಇರುತ್ತಾರೆ. ನನ್ನಿಂದ ಸಾಧ್ಯವಾದ ಬೆಂಬಲವನ್ನು ನಾನು ರಾಜ್ಯ ಸರ್ಕಾರಕ್ಕೆ ನೀಡುತ್ತೇನೆ. ಆದರೆ ಯಾವುದೇ ಕಾರಣಕ್ಕೂ ರಾಜ್ಯ ರಾಜಕಾರಣಕ್ಕೆ ಕಾಲಿಡುವುದಿಲ್ಲ,'' ಎಂದು ಶೋಭ ಸ್ಪಷ್ಟಪಡಿಸಿದರು.